ರಾಜಶೇಖರ ಜಮದಂಡಿ ಸಂಪಾದಿಸಿರುವ 656 ಪುಟಗಳ ಈ ಕೃತಿಯಲ್ಲಿ ಸಾಹಿತ್ಯಲೋಕದ ನೂರು ಹಿರಿ ಕಿರಿಯ ಲೇಖಕರು ಅಪ್ಪನ ನೆನಪುಗಳನ್ನು ಮೊಗೆದು ಕೊಟ್ಟಿದ್ದಾರೆ. ಇಲ್ಲಿ ಗೊ.ರು. ಚನ್ನಬಸಪ್ಪ, ಮೂಡ್ನಾಕೂಡು ಚಿನ್ನಸ್ವಾಮಿ, ನಾ. ಮೊಗಸಾಲೆ, ಎಸ್. ನಟರಾಜ ಬೂದಾಳು, ಗಂಗಾವತಿ ಬಿ. ಪ್ರಾಣೇಶ್, ವಿ. ಮನೋಹರ, ಅಮರೇಶ ನುಗಡೋಣಿ, ತಾರಿಣಿ ಶುಭದಾಯಿನಿ, ಸುನಂದಾ ಕಡಮೆ, ಭುವನೇಶ್ವರಿ ಹೆಗಡೆ, ಅರವಿಂದ ಚೊಕ್ಕಾಡಿ, ಎಚ್. ಡುಂಡಿರಾಜ್ ಸೇರಿದಂತೆ ಹಲವು ಹಿರಿಯ, ಪ್ರಸಿದ್ಧ ಸಾಹಿತಿಗಳ ಜೊತೆಗೆ ಅಷ್ಟಾಗಿ ಪರಿಚಿತರಲ್ಲದ ಹಲವರ ಬರಹಗಳೂ ಇವೆ. ಆದರೆ ಎಲ್ಲರ ಭಾವವರ್ಣದಲ್ಲಿ ಅದ್ದಿ ತೆಗೆದ ಕುಂಚದಲ್ಲಿ ಮೂಡಿದ ಅಪ್ಪನ ಚಿತ್ರ ಮಾತ್ರ ಒಂದೇ. ಅದು ಅಂತಃಕರಣದಿಂದ ಮೂಡಿದ್ದು; ಕೃತಜ್ಞತೆಯ ಕಣ್ಣುಗಳಲ್ಲಿ ಜೀವ ತಳೆದಿದ್ದು; ಮತ್ತೊಮ್ಮೆ ತಮಗೆ ತಾವೇ ಹೇಳಿಕೊಂಡ ಆಪ್ತ ಸ್ವರದಲ್ಲಿ ರಿಂಗಣಿಸಿದ್ದು.