ಹದಿಹರೆಯದ ಹುಡುಗ ಆಗಿರುವಾಗಲೇ ಲೇಖಕರು ವಿಜ್ಞಾನಿ ಐನ್ಸ್ಟೈನ್ರನ್ನು ಸಂಧಿಸಿದ್ದು ಸುಯೋಗವೆಂದೇ ಹೇಳಬೇಕು. ಅವರೊಂದಿಗೆ ನೆನಪುಗಳ ಬುತ್ತಿಯನ್ನು ಮೊಗೆಮೊಗೆದು ನೀಡಿರುವುದು ಶ್ಲಾಘನೀಯ. ಅದೇ ರೀತಿ ಮೃದಂಗ ವಿದ್ವಾಂಸ ಸಿ.ವಿ. ರಾಮನ್ ಭೇಟಿ, ಕುರಿಯ ವಿಠಲ ಶಾಸ್ತ್ರಿಗಳ ಕುರಿತ ವಿವರಣೆ, ರುದ್ರಪಟ್ಣ ಸಹೋದರರ ಒಡನಾಟ, ಕರ್ನಾಟಕ ಸಂಗೀತ ಗಾಯಕಿ ನಾಗಮಣಿ ಶ್ರೀನಾಥ್, ಆರ್.ಎನ್. ಶ್ರೀಲತಾ ಮೊದಲಾದವರ ಜೊತೆಗಿನ ಬಾಂಧವ್ಯದ ವಿವರಣೆ ಈ ಹೊತ್ತಗೆಯನ್ನು ತೂಕಬದ್ಧವಾಗಿಸಿದೆ. ಮೇಲಾಗಿ ಪಿಟೀಲು ರತ್ನಗಳಾದ ಬಿಡಾರಂ ಕೃಷ್ಣಪ್ಪ, ಚೌಡಯ್ಯ ಹಾಗೂ ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಬಗೆಗಿನ ಮಹತ್ವದ ವಿಚಾರಗಳು ಈ ಪುಸ್ತಕದಲ್ಲಿದ್ದು, ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ.
ಮೃದಂಗ ವಾದಕ ಪಿ.ಜಿ. ಲಕ್ಷ್ಮೀನಾರಾಯಣ ಅವರ ನುಡಿಸಾಣಿಕೆ ಸಾಧನೆಯನ್ನು, ಅವರ ಮನೋಧರ್ಮವನ್ನು ಬರವಣಿಗೆಯ ಮೂಲಕ ಸಾಕಾರಗೊಳಿಸಿದ್ದು ಈ ಹೊತ್ತಗೆಯ ಹೆಚ್ಚುಗಾರಿಕೆ ಎಂದೇ ಹೇಳಬಹುದು. ಕೊನೆಯ ಭಾಗದಲ್ಲಿ ಮೂರು ಸಂದರ್ಶನಾಧಾರಿತ ಆಂಗ್ಲ ಬರಹಗಳು ಲೇಖಕರ ಪರಿಣತಿಯನ್ನು ಎತ್ತಿತೋರಿಸುತ್ತದೆ. ಒಟ್ಟಿನಲ್ಲಿ ಸಂಗ್ರಹಯೋಗ್ಯ ಕೃತಿ ಎಂಬುದನ್ನು ನಿಸ್ಸಂಶಯವಾಗಿ ಹೇಳಬಹುದು.