ಈ ಕೃತಿಯಲ್ಲಿನ ಕಥೆಗಳಲ್ಲಿ ರಜಾಕಾರರ ಹಾವಳಿ, ಸ್ವಾತಂತ್ರ್ಯ ಹೋರಾಟಗಾರರ ಬದುಕಿನ ಚಿತ್ರಣ, ಆಧುನಿಕ ಮೌಲ್ಯಗಳ ಸಂಘರ್ಷ, ಮನೋವಿಶ್ಲೇಷಣಾತ್ಮಕ ಗುಣಗಳು, ಸಾಮಾಜಿಕ ವೈರುಧ್ಯ, ವರ್ತಮಾನದ ತಲ್ಲಣಗಳ ಸಮ್ಮಿಶ್ರ ಗುಣಗಳನ್ನು ಢಾಳಾಗಿ ಗುರುತಿಸಬಹುದು. ಶಾಂತರಸ ಅವರ ‘ನಾಯಿ ಮತ್ತು ಪಿಂಚಣಿ’ ಕಥೆ ವಿಭಿನ್ನ ನಿರೂಪಣಾ ಶೈಲಿ, ಗಟ್ಟಿ ಕಥಾಹಂದರದ ಕಾರಣಕ್ಕಾಗಿ ಇತಿಹಾಸದ ಜತೆಗೆ ವರ್ತಮಾನದ ಮುಖಾಮುಖಿ ಮಾಡಿಸಿದರೆ, ಇತ್ತೀಚಿನ ಕಥೆಗಾರ ಆಂಜನೇಯ ಜಾಲಿಬೆಂಚಿ ಅವರ ‘ಒಂದು ಪತ್ರ’ ಕಥೆ ಹಳ್ಳಿಗಳಲ್ಲಿ ಇಂದಿಗೂ ಪಳೆಯುಳಿಕೆಯಂತೆ ಉಳಿದಿರುವ ಜಾತಿ ವ್ಯವಸ್ಥೆಯ ದರ್ಶನ ಮಾಡಿಸುತ್ತಲೇ ಆಧುನಿಕ ಮನೋಭಾವದ ಗೌರಿಯು ಜಾತೀಯತೆಯನ್ನು ಮೀರುವ ವಾಸ್ತವವನ್ನು ಕಾಣಿಸುತ್ತದೆ.