ಕಗ್ಗತ್ತಲ ಕೂಪಗಳಿಂದಲೇ ನಾವು ಜೀವನದ ಪ್ರಕಾಶಮಾನ ಕಿರಣಗಳನ್ನು ಹಿಡಿದಿಟ್ಟುಕೊಳ್ಳಬೇಕು ಎಂಬ ಆಶಯದ ಕಾದಂಬರಿ ‘ಬೌಲ್’. ಪ್ರಾಚೀನ ವ್ಯಕ್ತಿತ್ವಗಳನ್ನು ಆಧುನಿಕ ಸಂವೇದನಗಳೊಂದಿಗೆ ಇಲ್ಲಿ ಮರುಸೃಷ್ಟಿಸಲಾಗಿದೆ. ಬಿಕ್ಕು ಹಾಗೂ ಅವನ ಕೈಯಲ್ಲಿನ ಖಾಲಿ ಪಾತ್ರೆ ರೂಪಕವಾಗಿ, ಪಾತ್ರವಾಗಿಯೂ ಕಾದಂಬರಿಯಲ್ಲಿ ಮಾತನಾಡುತ್ತಲೇ ಹೋಗಿರುವುದು ವಿಶೇಷ. ಸಾಂಸಾರಿಕ ಜವಾಬ್ದಾರಿಯೆಲ್ಲವನ್ನೂ ನಿರ್ವಹಿಸಿದ ಬಿಕ್ಕು ಮೋಕ್ಷ ಸಾಧಿಸುವ ಕಥೆ, ಅಧ್ಯಾತ್ಮ, ಲೌಕಿಕದ ನಡುವಿನ ವಾಸ್ತವಕ್ಕೆ ಬದುಕು ಹತ್ತಿರವಾಗಬೇಕು ಎಂಬ ಸಮನ್ವಯವನ್ನೂ ಸಾರಿದೆ. ಬುದ್ಧ ಮಾರ್ಗದ ಈ ಪಯಣದುದ್ದಕ್ಕೂ ರೂಪಕಗಳಲ್ಲಿ ಹೇಳುವ ಕಥೆಗಳೆಲ್ಲವೂ ವಾಸ್ತವಿಕ ಬದುಕಿಗೇ ಸಂಬಂಧಿಸಿದ್ದಾಗಿವೆ. ‘ಪರಭಕ್ಷಕ ಪ್ರಪಂಚ’ದ ‘ಮೋಕ್ಷ’ ಗಳಿಕೆಯ ಹಾದಿಯನ್ನೂ ತೋರಿವೆ.
ಬದುಕಿನಲ್ಲಿ ಎದುರಾಗುವ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸುವ ಬಗೆ ಹೇಗೆ, ಆಧುನಿಕ ಬದುಕು ಸೃಷ್ಟಿಸುವ ಗೊಂದಲ, ಅತಂತ್ರತೆ, ಅಸಹನೆ ಎಂತಹದ್ದು ಎಂಬುದನ್ನು ಇಲ್ಲಿನ ಪಾತ್ರಗಳು ಚರ್ಚಿಸಿವೆ. ಕಾರ್ಪೊರೇಟ್ ಜಗತ್ತಿನ ಯೋಜನೆಗಳ ಆಳವಾದ ಉದ್ದೇಶಗಳೂ ಇಲ್ಲಿ ವಿಶ್ಲೇಷಣೆಗೆ ಒಳಗಾಗಿವೆ. ಇಂತಹ ಸನ್ನಿವೇಶಕ್ಕೆ ಕಾರಣವಾದ ಪ್ರಭುತ್ವದ ವಿರುದ್ಧ ಆಕ್ರೋಶವೂ ಹರಿದಿದೆ. ಮನುಷ್ಯ ಬದುಕಿನ ಶೂನ್ಯತೆ ಮತ್ತು ಸಾತ್ವಿಕತೆ ಒಂದು ಹಂತದ ಅಮಾಯಕತೆಯನ್ನು ಬಿಕ್ಕುವಿನ ಪಾತ್ರ ವಿವರಿಸಿದಂತಿದೆ. ಮುರಿದ ಭಿಕ್ಷಾಪಾತ್ರೆ, ಅದನ್ನೂ ಜೋಪಾನವಾಗಿರಿಸಿಕೊಂಡು ಮುಂದುವರಿಯುವ ಬಿಕ್ಕು ಭೂತ, ವರ್ತಮಾನ ಮತ್ತು ಭವಿಷ್ಯದ ನೇರವಾದ ಪೂರಕ ಸಾಕ್ಷಿಯಂತೆ ಕಾಣಿಸುತ್ತಾನೆ. ಭಿಕ್ಷಾಪಾತ್ರೆ ಮನುಷ್ಯ ಬದುಕಿನ ಪಲ್ಲಟ ಹಾಗೂ ಅಸ್ಥಿರತೆಯನ್ನೂ ಪ್ರತಿಬಿಂಬಿಸಿದಂತಿದೆ.
ಪ್ರೊ. ಮನು ಚಕ್ರವರ್ತಿ ಅವರು ಮುನ್ನುಡಿಯಲ್ಲೇ ಹೇಳಿರುವಂತೆ ಇದೊಂದು ಮೂಲಭೂತವಾದ ತಾತ್ವಿಕ ವಿಚಾರಗಳನ್ನು ಅಪ್ಪಿಕೊಳ್ಳುವ ಸುಂದರ ಕಲಾಕೃತಿ. ಆದರೆನಿರೂಪಣೆ ಅಲ್ಲಲ್ಲಿ ತುಸು ಬಳಲಿದಂತೆ ಗೋಚರಿಸುತ್ತದೆ.
***
ಕೃತಿ: ಬೌಲ್ (ಕಾದಂಬರಿ)
ಲೇ: ಎಂ.ಎಸ್. ಮೂರ್ತಿ
ಪ್ರ: ಕಿರಂ ಪ್ರಕಾಶನ ಬೆಂಗಳೂರು
ಬೆಲೆ: ₹ 250
ಪುಟಗಳು: 240
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.