ಕಿರುತೆರೆಯ ‘ಥಟ್ ಅಂತ ಹೇಳಿ’ ಕಾರ್ಯಕ್ರಮದ ಮೂಲಕ ಪರಿಚಿತರಾಗಿರುವ ಡಾ. ನಾ.ಸೋಮೇಶ್ವರ ಅವರು ಮೂಢನಂಬಿಕೆಗಳ ಕುರಿತು ಜಾಗೃತಿ ಮೂಡಿಸಲು ಈ ಕೃತಿ ರಚಿಸಿದ್ದಾರೆ. 2014ರಲ್ಲಿ ‘ಮೂಢನಂಬಿಕೆ, ಕಾನೂನು ಮತ್ತು ಟೆಲಿವಿಷನ್’ ಎಂಬ ಹೆಸರಿನಲ್ಲಿ ಸೋಮೇಶ್ವರ ಅವರೇ ಬರೆದಿದ್ದ ಕೃತಿಯ ಪರಿಷ್ಕೃತ ಹೊತ್ತಿಗೆ ಇದಾಗಿದೆ.
ಭಾರತದಲ್ಲಿದ್ದ ಮೂಢನಂಬಿಕೆಗಳು, ಪ್ರಸ್ತುತ ಚಾಲ್ತಿಯಲ್ಲಿರುವ ಮೂಢನಂಬಿಕೆಗಳನ್ನು ಉಲ್ಲೇಖಿಸುತ್ತಾ, ಜನರಲ್ಲಿ ಆಗಬೇಕಾದ ಬದಲಾವಣೆಗಳನ್ನು ಸೋಮೇಶ್ವರ ಅವರು ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಮೌಢ್ಯ ಮತ್ತು ಭಗವಾನ್ ಬುದ್ಧ, ಭಾರತೀಯ ಟೆಲಿವಿಷನ್ ಮತ್ತು ಕಾನೂನು, ಮೌಢ್ಯದ ವಿರುದ್ಧ ಇರುವ ಕಾನೂನು, ಜನರು ನಡೆಯಬೇಕಾದ ದಾರಿ ಹೀಗೆ ಒಟ್ಟು 12 ಅಧ್ಯಾಯಗಳಲ್ಲಿ ಈ ಕೃತಿಯನ್ನು ಕಟ್ಟಿಕೊಡಲಾಗಿದೆ.
ಲೇಖಕರು ನೇರವಾಗಿ ಮೂಢನಂಬಿಕೆಗಳ ಲೋಕಕ್ಕೆ ಇಳಿಯದೆ, ಮಾನವನ ವಿಕಾಸದ ಹಂತಗಳನ್ನು ಪರಿಚಯಿಸುತ್ತಾ, ಸತಿ ಪದ್ಧತಿ ನಿರ್ಮೂಲನೆ, ಬಾಲ್ಯ ವಿವಾಹಕ್ಕೆ ಕಡಿವಾಣ ಮುಂತಾದ ಕ್ರಾಂತಿಕಾರಿ ನಿಲುವಳಿಗಳನ್ನು ಉಲ್ಲೇಖಿಸುತ್ತಾ ಹೆಜ್ಜೆ ಇಟ್ಟಿದ್ದಾರೆ. ಮೂಢನಂಬಿಕೆಯ ಹಲವು ಮುಖಗಳನ್ನು ಅವರಿಲ್ಲಿ ಪರಿಚಯಿಸಿದ್ದಾರೆ. ಕೃತಿಯಲ್ಲಿ ಮುಖ್ಯವಾಗಿ ದೃಶ್ಯ ಮಾಧ್ಯಮಗಳ ಮೂಲಕ ಮೂಢನಂಬಿಕೆಗಳು ಮತ್ತಷ್ಟು ಜನರನ್ನು ತಲುಪುತ್ತಿರುವ ಘಟನೆಗಳನ್ನು ಉಲ್ಲೇಖಿಸಲಾಗಿದೆ. ‘ವಿಧಾನಸೌಧದ ಮೇಲೆ ಗೂಬೆ’ ಕೂತ ಘಟನೆ, ‘ಮಳೆಗಾಗಿ ಕಪ್ಪೆಗಳ ಮದುವೆ’ ಮುಂತಾದ ಮೂಢನಂಬಿಕೆಗಳನ್ನು ಅವರಿಲ್ಲಿ ವಿಶ್ಲೇಷಿಸಿದ್ದಾರೆ. ⇒v
ಮೌಢ್ಯ ಮತ್ತು ಟೆಲಿವಿಷನ್
ಲೇ: ಡಾ. ನಾ.ಸೋಮೇಶ್ವರ
ಪ್ರ: ವಿಕ್ರಮ್ ಪ್ರಕಾಶನ
ಸಂ: 9740994008
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.