ಶೀರ್ಷಿಕೆಯ ಮೂಲಕವೇ ಜಪಾನ್ಗೊಂದು ಕೃತಜ್ಞತೆಯ ನಮಸ್ಕಾರ ಹೇಳುತ್ತಲೇ ಜಪಾನ್ ಅನುಭವ ಕಥನಗಳನ್ನು ದಾಖಲಿಸಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ. ದೇಶ ಸುತ್ತಲು ಲಾರಿ ಡ್ರೈವರ್ ಆಗುತ್ತೇನೆ ಎಂದು ಹೇಳಿದ್ದ ಕನವರಿಕೆಯಿಂದ ಹಿಡಿದು ವಿಮಾನ, ಜಪಾನ್ನ ಮೆಟ್ರೊ ರೈಲು ಹತ್ತುವವರೆಗಿನ ಸಣ್ಣ ಸಣ್ಣ ಮೆಟ್ಟಿಲುಗಳನ್ನೂ ನೆನಪಿಸಿಕೊಂಡಿದ್ದಾರೆ. ಜಪಾನ್ಗೆ ಹೋಗಬೇಕಾದರೆ ಖರ್ಚಿಗೆ ತಕ್ಕಷ್ಟು ಇರಲಿ ಎಂದು ಉರು ಹೊಡೆದುಕೊಂಡ ಜಪಾನಿ ಪದಗಳ ಪಟ್ಟಿಯನ್ನು ಮಾಡುತ್ತಾ ರಸಭರಿತ ವಿವರಣೆಯನ್ನು ನೀಡುತ್ತಾರೆ ಲೇಖಕರು. ಅಣು ಬಾಂಬ್ ದಾಳಿಯ ಕುರುಹು ಉಳಿಯದಂತೆ ಹಸಿರು ಹೊದ್ದು, ಕಟ್ಟಡಗಳು ಎದ್ದು ಬೆಳೆದ ಹಿರೋಶಿಮಾ ಮತ್ತು ನಾಗಾಸಾಕಿ ನಗರಗಳ ಕಥೆಯನ್ನು ನಿರೂಪಿಸುತ್ತಾ, ಪಠ್ಯಗಳಲ್ಲೋ, ಮಾಧ್ಯಮಗಳಲ್ಲೋ ಕೇಳಿದ ಉತ್ಪ್ರೇಕ್ಷಿತ ವಿವರಗಳಿಗಿಂತ ಕಣ್ಣಾರೆ ಕಂಡ ಅನುಭವ ವೇದ್ಯ ದರ್ಶನವೇ ಬೇರೆ ಎಂದು ಅಲೆಮಾರಿತನದ ಅಗತ್ಯವನ್ನೂ ಹೇಳಿದ್ದಾರೆ.