ಶಿವಮೊಗ್ಗದ ವೈದ್ಯೆ ಡಾ.ಕೆ.ಎಸ್.ಪವಿತ್ರ ಉತ್ಸಾಹಿ ಬರಹಗಾರ್ತಿ ಕೂಡ. ವೈದ್ಯಕೀಯ ಕ್ಷೇತ್ರ ಮಾತ್ರವಲ್ಲದೆ, ಇತರ ಮಾನವೀಯ ಸಂಗತಿಗಳೂ ಅವರ ಬರವಣಿಗೆಗೆ ವಸ್ತು ಆಗುವುದಿದೆ. ನೃತ್ಯ ಅವರ ಆಸಕ್ತಿಯ ಇನ್ನೊಂದು ಕ್ಷೇತ್ರ. ಇಂಥ, ಬಹುಮುಖ ಪ್ರತಿಭೆ ಪವಿತ್ರ ಅವರ ಹೊಸಕೃತಿ ‘ಮನ-ಮನನ’.
ಪುಸ್ತಕದ ಶೀರ್ಷಿಕೆಯೇ ಸೂಚಿಸುವಂತೆ ಮನಸ್ಸಿಗೆ ಸಂಬಂಧಿಸಿದ ಇಪ್ಪತ್ತು ಲೇಖನಗಳ ಸಂಕಲನವಿದು. ಇಲ್ಲಿನ ಅನೇಕ ಬರಹಗಳು ಈಗಾಗಲೇ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರೂ, ಅವುಗಳನ್ನೆಲ್ಲ ಒಟ್ಟಾಗಿ ಓದುವುದು ಭಿನ್ನ ಅನುಭವ ನೀಡುತ್ತದೆ.
ಮನೋ ವೈದ್ಯಕೀಯ ವಿಭಾಗದಲ್ಲಿ ಪದವಿ ಪಡೆದಿರುವ ಪವಿತ್ರ ಅವರ ಬರಹಗಳು ಮನಸ್ಸಿನ ವಿವಿಧ ಪದರಗಳನ್ನು ಸಹೃದಯರಿಗೆ ಕಾಣಿಸುವ ಪ್ರಯತ್ನ ಮಾಡುತ್ತವೆ. ಇಲ್ಲಿನ ಕೆಲವು ಬರಹಗಳು (‘ಮೊಬೈಲ್ ಎಂಬ ಮಾರಕಾಸ್ತ್ರ’, ‘ಸ್ಮೃತಿ ಪಟಲದಲ್ಲಿ ಸಿನಿಮಾ’, ‘ಕೈಯೆತ್ತಿದ್ರೆ ಹುಷಾರ್’) ಶೀರ್ಷಿಕೆ ಹಾಗೂ ವಸ್ತುವಿನ ಕಾರಣದಿಂದಾಗಿ ಬೇರೆಯಾಗಿ ಕಾಣಿಸಿದರೂ, ಅವುಗಳ ಒಳಗಿರುವುದೂ ಮಾನಸ ಸರೋವರದ ತರಂಗಗಳೇ ಆಗಿವೆ.
ವೈದ್ಯರ ನಿಖರತೆ ಹಾಗೂ ಬರಹಗಾರನ ಒಳನೋಟಗಳು ಮೇಳೈಸಿರುವುದರಿಂದ ಈ ಬರಹಗಳಿಗೆ ವಿಶೇಷ ಗುಣ ಒದಗಿದೆ.