ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮ ಮಾರ್ಗದ ಪ್ರತಿಪಾದಕ ಗಿರಡ್ಡಿ ಗೋವಿಂದರಾಜ

Last Updated 22 ಸೆಪ್ಟೆಂಬರ್ 2018, 6:41 IST
ಅಕ್ಷರ ಗಾತ್ರ

ಕನ್ನಡ ಸಾಂಸ್ಕೃತಿಕ ಲೋಕದ ಪರಿಚಾರಕರಂತಿದ್ದ ಡಾ.ಗಿರಡ್ಡಿಗೋವಿಂದರಾಜರು ನಿಧನರಾಗಿ ಐದು ತಿಂಗಳಾಯಿತು. ಅವರ ನಿರ್ಗಮನದೊಂದಿಗೆ ಧಾರವಾಡ ಮತ್ತು ಕನ್ನಡದ ಸಾಹಿತ್ಯಲೋಕದಲ್ಲಿ ಸೃಷ್ಟಿಯಾದ ಶೂನ್ಯ ಬಹುಕಾಲ ನಮ್ಮನ್ನೆಲ್ಲಾ ಕಾಡುವಂತಹದ್ದು. ಸಂಶೋಧನೆಯ ಕ್ಷೇತ್ರದಲ್ಲಿ ಮಾರ್ಗದರ್ಶಕರಂತಿದ್ದ ಡಾ.ಎಂ.ಎಂ.ಕಲ್ಬುರ್ಗಿ ಮತ್ತು ವಿಮರ್ಶೆಯ ಲೋಕದಲ್ಲಿ ಮಾದರಿಯಾಗಿದ್ದಗಿರಡ್ಡಿಈ ಇಬ್ಬರು ದಿಗ್ಗಜರ ಅಗಲಿಕೆಯ ನೋವನ್ನು ಜೀರ್ಣಿಸಿಕೊಳ್ಳುವುದು ಅವರ ಒಡನಾಡಿಗಳ ಪಾಲಿಗೆ ಸುಲಭದ ಸಂಗತಿಯಲ್ಲ.

ಧಾರವಾಡ ಮಣ್ಣಿನ ಹಾಗೂ ಇಲ್ಲಿನ ನೆಲಮೂಲ ಸಂಸ್ಕೃತಿಯ ವಾರಸುದಾರರಂತೆ ಬದುಕಿದ್ದ ಇಂತಹ ಮಹಾನ್ ವಿದ್ವಾಂಸರ ಜೀವನ ಮತ್ತು ಸಾಧನೆಯನ್ನು ಸ್ಮರಣೆಯ ನೆಪದಲ್ಲಿ ಜೀವಂತವಾಗಿಡಲು ಅವರ ಅನೇಕ ಒಡನಾಡಿಗಳು ಮತ್ತು ಶಿಷ್ಯರು ಶ್ರಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿಗಿರಡ್ಡಿಗೋವಿಂದರಾಜರ ಜನ್ಮ ದಿನವಾದ ಸೆ.22ರಂದು ಧಾರವಾಡದಲ್ಲಿಗಿರಡ್ಡಿಗೋವಿಂದರಾಜಪ್ರತಿಷ್ಠಾನ ಎಂಬ ಸಾಂಸ್ಕೃತಿಕ ಸಂಸ್ಥೆ ಆರಂಭಗೊಳ್ಳುತ್ತಿದೆ. ಇದರ ಜೊತೆಗೆ ಅವರ ಆಸಕ್ತಿಯ ವಿಷಯಗಳಲ್ಲಿ ಒಂದಾದ ‘ಬದಲಾಗುತ್ತಿರುವ ಜಗತ್ತು’ ಕುರಿತು ರಾಷ್ಟ್ರೀಯ ವಿಶೇಷ ಉಪನ್ಯಾಸವನ್ನು ಆಲೂರು ವೆಂಕಟರಾವ್ ಸಾಂಸ್ಕೃತಿಕ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಇದಲ್ಲದೆ ಸಂಜೆ ಅವರ ಸಾಹಿತ್ಯ ಕೃತಿಗಳ ಆಧಾರಿತ ಆ ‘ಮುಖ- ಈ ಮುಖ’ ನಾಟಕವನ್ನು ಸಹ ಆಯೋಜಿಸಲಾಗಿದೆ.

ಅರವತ್ತು ವರ್ಷಗಳ ಸುದೀರ್ಘ ಕಾಲ ಡಾ.ಗಿರಡ್ಡಿಗೋವಿಂದರಾಜ ಕನ್ನಡ ಸಾಹಿತ್ಯ ಮತ್ತು ರಂಗಭೂಮಿ ಹಾಗೂ ಜಾನಪದ ಕ್ಷೇತ್ರದಲ್ಲಿ ಒಡನಾಟವಿರಿಸಿಕೊಂಡು ಸೃಷ್ಟಿಸಿದ ಸಾಹಿತ್ಯ, ನೀಡಿದ ಉಪನ್ಯಾಸಗಳು ಮತ್ತು ಸಂಪಾದಿಸಿಕೊಟ್ಟ ಕೃತಿಗಳು ಇವೆಲ್ಲವೂ ಕನ್ನಡದ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿವೆ. ಗಿರಡ್ಡಿಯವರು ಕೈ ಆಡಿಸದೆ ಇರುವ ಕ್ಷೇತ್ರಗಳಿಲ್ಲ. ಕಥೆ, ಕಾವ್ಯ, ನಾಟಕ, ವಿಮರ್ಶೆ, ಪ್ರಬಂಧ, ಸಂಪಾದನೆ, ಅನುವಾದ ಹಾಗೂ ಸಾಹಿತ್ಯ ಪತ್ರಿಕೆಯ ಸಂಪಾದಕ ಹೀಗೆ ಹಲವು ಕ್ಷೇತ್ರಗಳಲ್ಲಿ ಅವರ ದೈತ್ಯ ಪ್ರತಿಭೆಯ ಹರವು ಹರಡಿದೆ. ತಾವು ಕೈ ಆಡಿಸಿದ ಪ್ರಕಾರದಲ್ಲಿ ತಮ್ಮ ವ್ಯಕ್ತಿತ್ವ ಹಾಗೂ ಪ್ರತಿಭೆಯ ಛಾಪನ್ನು ಒತ್ತುವುದರ ಮೂಲಕ ಕನ್ನಡದ ಎಲ್ಲ ಪಾತ್ರಗಳಲ್ಲೂ ಗಿರಡ್ಡಿಯವರು ತಮ್ಮ ಹೆಸರನ್ನು ಅವಿಸ್ಮರಣೀಯಗೊಳಿಸಿದ್ದಾರೆ.

ತಮ್ಮ ಸಾಹಿತ್ಯ ಕೃಷಿಯ ಆರಂಭದ ದಿನಗಳಲ್ಲಿ ಎರಡು ಕವನ ಸಂಕಲಗಳನ್ನು ಹೊರ ತಂದಿದ್ದ ಗಿರಡ್ಡಿಯವರು ಮರ್ಲಿನ್ ಮನ್ರೊ ಕಾವ್ಯ ಸಂಕಲನದ ಮೂಲಕ ಸಾಹಿತ್ಯ ಲೋಕದ ಗಮನ ಸೆಳೆದಿದ್ದರು. ಆನಂತರದ ದಿನಗಳಲ್ಲಿ ಅವರು ಕಥಾ ಕ್ಷೇತ್ರದತ್ತ ಹೊರಳಿ, ಬರೆದ ‘ಹಂಗು ಮತ್ತು ಮಣ್ಣು’ ಎಂಬ ನೀಳ್ಗತೆ ಇವುಗಳು ಕನ್ನಡ ಕಥಾಲೋಕದಲ್ಲಿ ಅನನ್ಯ ಕಥೆಗಳಾಗಿ ಉಳಿದುಕೊಂಡವು. ಇವುಗಳಲ್ಲಿ ಹಂಗು ಕಥೆ ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರು 1976ರಲ್ಲಿ ನಿರ್ಮಿಸಿದ ‘ಕಥಾ ಸಂಗಮ’ ಎಂಬ ಸಿನಿಮಾದ ಮೂರು ಕಥೆಗಳಲ್ಲಿ ಒಂದಾಗಿರುವುದು ವಿಶೇಷ. (ಈ ಸಿನಿಮಾ ರಜನಿಕಾಂತ್ ಅವರ ಮೊದಲ ಸಿನಿಮಾ ಕೂಡ ಹೌದು) ಧಾರವಾಡದ ಕರ್ನಾಟಕ ವಿ.ವಿ.ಯಿಂದ ಕನ್ನಡದಲ್ಲಿ ಎಂ.ಎ. ಪದವಿ ಹಾಗೂ ಇಂಗ್ಲೆಂಡಿನಲ್ಲಿ ಇಂಗ್ಲಿಷ್ ವಿಷಯದ ಭಾಷಾ ಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದ ಗಿರಡ್ಡಿಯವರು ನಂತರ ಗುಲ್ಬರ್ಗಾ ವಿ.ವಿ.ಯಲ್ಲಿ ಶೈಲಿ ಶಾಸ್ತ್ರ ಕುರಿತಂತೆ ಪಿಎಚ್.ಡಿ ಪದವಿ ಹಾಗೂ ಹೈದರಾಬಾದಿನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಸಂಸ್ಥೆಯಿಂದ ಡಿಪ್ಲೊಮಾ ಇನ್ ಇಂಗ್ಲಿಷ್‌ನಲ್ಲಿ ಪದವಿಯನ್ನು ಪಡೆದಿದ್ದರು. ಹೀಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಅವರಿಗಿದ್ದ ಆಳವಾದ ಜ್ಞಾನ ಮತ್ತು ವಿದ್ವತ್ತು ಕನ್ನಡದ ವಿಮರ್ಶೆಯ ಲೋಕಕ್ಕೆ ವರವಾಗಿ ಪರಿಣಮಿಸಿತು.

1970ರ ದಶಕದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ವಿಮರ್ಶೆಯ ಪರಂಪರೆಯನ್ನು ಹುಟ್ಟು ಹಾಕಿದ ಆದ್ಯರಲ್ಲಿ ಒಬ್ಬರಾದ ಡಾ.ಗಿರಡ್ಡಿಗೋವಿಂದರಾಜರು ತಮ್ಮ ವಸ್ತುನಿಷ್ಠ ಶೈಲಿಯಿಂದ ಕನ್ನಡ ಕಥೆ ಮತ್ತು ಕಾವ್ಯ ಹಾಗೂ ಕಾದಂಬರಿ ಇವುಗಳ ಕಥಾವಸ್ತು, ಭಾಷೆ ಮತ್ತು ಶೈಲಿ ಇವುಗಳನ್ನು ವಿಮರ್ಶಿಸುತ್ತ ಲೇಖಕ ಮತ್ತು ಓದುಗನ ನಡುವೆ ಸಂವಹನ ಸೇತುವೆಯಾಗಿ ಕಾರ್ಯನಿರ್ವಹಿಸುವುದರ ಜೊತೆಗೆ ಓದುಗರ ಅಭಿರುಚಿಯ ದಿಕ್ಕನ್ನು ಬದಲಿಸಿದವರಲ್ಲಿ ಪ್ರಮುಖರು. 70 ಮತ್ತು 80ರ ದಶಕದಲ್ಲಿ ನಿರಂತರವಾಗಿ ಹದಿನೈದು ವಿಮರ್ಶಾ ಕೃತಿಗಳನ್ನು ಬರೆದ ಕೀರ್ತಿ ಗಿರಡ್ಡಿಯವರದು. ತಾವು ಇಂಗ್ಲೆಂಡಿನಲ್ಲಿದ್ದ ಸಮಯದಲ್ಲಿ ಅಲ್ಲಿನ ರಂಗಭೂಮಿ ಕುರಿತಂತೆ ಆಸಕ್ತಿ ಬೆಳೆಸಿಕೊಂಡಿದ್ದ ಅವರು ಭಾರತಕ್ಕೆ ಹಿಂತಿರುಗಿದ ನಂತರ ರಚಿಸಿದ ಇಂಗ್ಲೆಂಡಿನ ರಂಗಭೂಮಿ ಎಂಬ ಕೃತಿ ಕನ್ನಡ ರಂಗಭೂಮಿಗೆ ಅಮೂಲ್ಯ ಕೊಡುಗೆಯಾಗಿದೆ. ವೃತ್ತಿಯಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದರೂ ಸಹ ತಮ್ಮ ಬದುಕಿನುದ್ದಕ್ಕೂ ಕನ್ನಡವನ್ನು ಧೇನಿಸಿದ ಗಿರಡ್ಡಿಯವರು ವಚನ ಸಾಹಿತ್ಯ ಕುರಿತಂತೆ ಹಾಗೂ ಜಾನಪದ ಸಾಹಿತ್ಯ ಕುರಿತಂತೆ ಅಧಿಕಾರಯುತವಾಗಿ ಮಾತನಾಡಬಲ್ಲ, ಬರೆಯಬಲ್ಲ ವಿದ್ವಾಂಸರಲ್ಲಿ ಒಬ್ಬರಾಗಿದ್ದರು.

ಬದುಕು, ಬರವಣಿಗೆ ಹಾಗೂ ಸಾಮಾಜಿಕ ಚಟುವಟಿಕೆ ಇವುಗಳಲ್ಲಿ ನಿರಂತವಾಗಿ ಅರವತ್ತು ವರ್ಷಗಳ ಕಾಲ ತೊಡಗಿಸಿಕೊಂಡಿದ್ದರು ಸಹ ಗಿರಡ್ಡಿಯವರದು ಎಂದಿಗೂ ಆರ್ಭಟ ಅಥವಾ ಅಬ್ಬರದ ನಡುವಳಿಕೆಯಲ್ಲ. ತಮ್ಮ ವಸ್ತುನಿಷ್ಠ ನೆಲೆಯಿಂದ ಅತ್ತ ಇತ್ತ ಕದಲದೆ ಹೇಳಬೇಕಾದ ನಿಷ್ಠುರ ಸತ್ಯಗಳನ್ನು ಅತ್ಯಂತ ಮೆದುಮಾತಿನಲ್ಲಿ ಹೇಳುತ್ತಾ ಬಂದರು. ಬೀದಿಗಳಿದು ಘೋಷಣೆ ಕೂಗಿದರೆ ಮಾತ್ರ ಪರಿವರ್ತನೆಯ ಹರಿಕಾರರು ಮತ್ತು ಕ್ರಾಂತಿಕಾರರು ಎಂದು ನಂಬಿರುವ ಕಾಲಘಟ್ಟದಲ್ಲಿ ಅವರು ತಮ್ಮ ಸಾಹಿತ್ಯ ಮತ್ತು ಸಾಂಸ್ಕೃತಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಸದ್ದಿಲ್ಲದೆ ಮೌನ ಕ್ರಾಂತಿಯನ್ನು ಸೃಷ್ಟಿಸಿದರು. ಈ ಕಾರಣಕ್ಕಾಗಿ ಅತಿರೇಖದ ತುತ್ತ ತುದಿಗಳಂತಿರುವ ಎಡ ಮತ್ತು ಬಲಗಳ ತಾತ್ವಿಕ ಮಾರ್ಗವನ್ನು ತುಳಿಯಲು ನಿರಾಕರಿಸಿದ ಅವರು ಬುದ್ಧ ಮತ್ತು ಗಾಂಧೀಜಿಯವರು ಪ್ರತಿಪಾದಿಸಿದಮಧ್ಯಮಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ನನ್ನ ತಲೆ ಮಾರಿನ ಅನೇಕರಿಗೆ ಮಾಗದರ್ಶಕರಾಗಿದ್ದರು. ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ನಡುಬೆ ಸಂವಹನ, ಮಾತುಕತೆ ಅಥವಾ ಚರ್ಚೆ ಇಂತಹ ಕ್ರಿಯೆಗಳು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿರುವ ಈ ಕಾಲಘಟ್ಟದಲ್ಲಿ ಅಸಹಿಷ್ಣುತೆ ಮತ್ತು ಹಿಂಸೆಯ ಹಿಂದಿನ ಕಾರಣಗಳನ್ನು ಗ್ರಹಿಸಲಾರದಷ್ಟು ಅಸೂಕ್ಷ್ಮತೆಗೆ ನಾವು ಒಳಗಾಗಿದ್ದೇವೆ. ಈ ಕಾರಣದಿಂದಾಗಿ ನಮಗಿನ್ನೂ ಗಿರಡ್ಡಿಯವರು ಪ್ರತಿಪಾದಿಸಿದಮಧ್ಯಮಮಾರ್ಗ ಸಮಗ್ರವಾಗಿ ಅರ್ಥವಾಗಿಲ್ಲ. ಧರ್ಮ ಅಥವಾ ಪಂಥಗಳ ನಡುವಿನ ಚಿಂತನೆಗೆ, ಕೊಡುಕೊಳೆಗೆ ಆಸ್ಪದವಿಲ್ಲದೆ ಅನೇಕ ಬಗೆಯ ತಲ್ಲಣಗಳಿಗೆ, ಪಲ್ಲಟಗಳಿಗೆ ಕಾರಣವಾಗುತ್ತಿರುವ ಈ ದಿನಮಾನಗಳಲ್ಲಿ ಗಿರಡ್ಡಿಯರಮಧ್ಯಮಮಾರ್ಗದಮಹತ್ವ ಅರಿವಾಗತೊಡಗಿದೆ.

ಸಾಹಿತ್ಯದಲ್ಲಿ ಅನೇಕ ಪಂಗಡಗಳಾಗಿ ದ್ವೀಪದಂತೆ ಬರಹಗಾರರು ಬದುಕುತ್ತಿದ್ದ ಸಂದರ್ಭದಲ್ಲಿ ಹಾಗೂ ಸಾಹಿತ್ಯ ಸಮ್ಮೇಳನಗಳು ಜಾತ್ರೆಯ ಸ್ವರೂಪ ಪಡೆದುಕೊಂಡು ಸಾಹಿತ್ಯ ಸಂವಾದ ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಆರು ವರ್ಷಗಳ ಹಿಂದೆ ಧಾರವಾಡದಲ್ಲಿ ಗಿರಡ್ಡಿಯವರು ತಮ್ಮ ಸಹಪಾಠಿ ಎಂ.ಎಂ.ಕಲ್ಬುರ್ಗಿಯವರ ಜೊತೆಗೂಡಿ ‘ಪ್ರಜಾವಾಣಿ’ ಸಹಭಾಗಿತ್ವದಲ್ಲಿ ಹುಟ್ಟುಹಾಕಿದ ಧಾರವಾಡ ಸಾಹಿತ್ಯ ಸಂಭ್ರಮ ಎಂಬ ಕಾರ್ಯಕ್ರಮ ಇದೀಗ ಸಾಹಿತ್ಯದ ಮೈಲಿಗಲ್ಲಾಗಿದೆ. ಎಲ್ಲ ಬಗೆಯ ನಂಬಿಕೆ ಮತ್ತು ದೃಷ್ಟಿಕೋನದ ಬರಹಗಾರರು ಹಾಗೂ ಓದುಗರು ಒಂದೆಡೆ ಕಲೆತು ಸಾಹಿತ್ಯ, ಸಂಸ್ಕೃತಿ ಮತ್ತು ಕಲೆ ಹೀಗೆ ವಿವಿಧ ವಿಷಯಗಳ ಕುರಿತು ಮೂರು ದಿನಗಳ ಕಾಲ ಗಂಭೀರವಾಗಿ ಚರ್ಚಿಸುವುದು ಸುಲಭದ ಮಾತಲ್ಲ. ಇಂತಹ ಪರಂಪರೆಯನ್ನು ಹುಟ್ಟು ಹಾಕಿದ ಕೀರ್ತಿ ಗಿರಡ್ಡಿಯವರದು.

ಇತ್ತೀಚೆಗಿನ ದಿನಗಳಲ್ಲಿ ವಿಮರ್ಶೆಯಿಂದ ಕಳಚಿಕೊಂಡು ಲಲಿತ ಪ್ರಬಂಧಗಳನ್ನು ರಚಿಸುತ್ತ ಓದುಗರಲ್ಲಿ ಆಹ್ಲಾದಕರ ಹಾಗೂ ಪ್ರಫುಲ್ಲವಾದ ಮನಸ್ಸನ್ನು ಸೃಷ್ಟಿ ಮಾಡಿದ್ದ ಅವರು, ದೇವದತ್ತ ಪಟ್ನಾಯಕ್ ಅವರ ಜಯ ಎಂಬ ಮಹಾಭಾರತ ಇಂಗ್ಲಿಷ್ ಕೃತಿಯನ್ನು ಕನ್ನಡಕ್ಕೆ ಅನುವಾದಿಸುವುದರ ಮೂಲಕ ಅನುವಾದದ ಶೈಲಿ ಮತ್ತು ಕ್ರಿಯೆ ಹೇಗಿರಬೇಕೆಂಬುದನ್ನು ತೋರಿಸಿಕೊಟ್ಟಿದ್ದರು. ಇದು ಅವರ ಪಾಲಿಗೆ ಕೊನೆಯ ಕೃತಿಯಾಯಿತು.

ಇಂದು ಗಿರಡ್ಡಿಗೋವಿಂದರಾಜರು ನಮ್ಮೊಡನಿಲ್ಲ. ಆದರೆ ಅವರ ಸಾಹಿತ್ಯ ಕೃತಿಗಳು, ಅವರ ಗಂಭೀರವಾದ ಚರ್ಚೆ, ತಿಳಿಹಾಸ್ಯ, ತನ್ನ ಶಿಷ್ಯ ಬಳಗಕ್ಕೆ ಸಾಹಿತ್ಯವನ್ನು ಉಣಬಡಿಸುತ್ತಿದ್ದ ರೀತಿ ಇವೆಲ್ಲವೂ ಅವರ ನೆನಪುಗಳ ಜೊತೆ ನಮ್ಮೊಳಗೆ ಸದಾ ಹಸಿರಾಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT