ದಾವಣಗೆರೆ: ಬೇಸಿಗೆ ರಜೆಯ ಮಜ ಅನುಭವಿಸಿದ ಮಕ್ಕಳು, ಮಂಗಳವಾರ ಖುಷಿಯಿಂದಲೇ ಶಾಲೆಗಳತ್ತ ಹೆಜ್ಜೆ ಹಾಕಿದರು.
ಸೋಮವಾರ ಶಾಲೆಗೆ ಬಂದಿದ್ದ ಶಿಕ್ಷಕರು ಶಾಲಾ ಕೊಠಡಿಗಳನ್ನು ಸ್ವಚ್ಛ ಮಾಡಿಸಿ, ತರಗತಿಗಳನ್ನು ಬೋಧನೆಗೆ ಅಣಿಗೊಳಿಸಿದ್ದರು. ಮಕ್ಕಳಿಗಾಗಿ ಶುದ್ಧ ಕುಡಿಯುವ ನೀರು, ಮಧ್ಯಾಹ್ನದ ಬಿಸಿಯೂಟಕ್ಕೆ ವ್ಯವಸ್ಥೆ ಮಾಡಿಸಿದ್ದರು.
ಮಂಗಳವಾರ ಶಾಲೆಯನ್ನು ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು. ಹೀಗಾಗಿ ಅಲ್ಲೆಲ್ಲಾ ಹಬ್ಬದ ವಾತಾವರಣ ತುಂಬಿತ್ತು. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಮೊದಲ ದಿನವೇ ಮಕ್ಕಳಿಗೆ ಸಮವಸ್ತ್ರ, ಪಠ್ಯಪುಸ್ತಕ ವಿತರಿಸಲಾಯಿತು. ಇದರಿಂದ ಮಕ್ಕಳ ಮನಸ್ಸು ಹಿಗ್ಗಿತ್ತು.
ಮಧ್ಯಾಹ್ನದವರೆಗೂ ಸಂತಸದಿಂದ ಆಟ–ಪಾಠಗಳಲ್ಲಿ ತೊಡಗಿಸಿಕೊಂಡಿದ್ದ ಕೆಲ ಶಾಲೆಗಳ ಶಿಕ್ಷಕರು–ಮಕ್ಕಳು, ಮಧ್ಯಾಹ್ನದ ನಂತರ ವಿಶೇಷ ದಾಖಲಾತಿ ಆಂದೋಲನದ ಬಗ್ಗೆ ಅರಿವು ಮೂಡಿಸಲು ಶಾಲೆ ಸುತ್ತಮುತ್ತ ಜಾಗೃತಿ ಜಾಥಾ ನಡೆಸಿದರು. ಮಕ್ಕಳನ್ನು ಶಾಲೆಗೆ ಸೇರಿಸಿ, ಶಿಕ್ಷಣ ಕೊಡಿಸುವಂತೆ ಮನವಿ ಮಾಡಿದರು.