‘ಮೌನದ ಎಳೆ ಬಿಸಿಲ ಮೇಲೆ/ ಒಡಲುರಿಯ ದನಿಯೊಂದು ಕೈ ಚಾಚಿ/ ಭಾವ ಬಿಂದುವಿನ ಹೆಗಲ ಹಕ್ಕಿ/ ಬೆರಳ ಮೇಲೆ ಹಾರಿ ಕುಳಿತು/ ಎದೆಯೊಳಗೆ ಬಲೆ ನೇಯ್ದ ದಾರಿ ಕಂಡಿತು’ ಎಂಬ ಸಾಲುಗಳು ಓದುಗನಲ್ಲೂ ಆರ್ದ್ರ ಭಾವವನ್ನು ಮೂಡಿಸುವಷ್ಟು ಸಶಕ್ತವಾಗಿವೆ. ಇಂತಹ ನೋವನ್ನು ನುಂಗಿದ ಕಾರಣಕ್ಕಾಗಿಯೋ ಏನೋ ಒಡಲ ಉರಿ ಸಹ ಹೆಚ್ಚಿದೆ. ಹೀಗಾಗಿ ನಿಂತ ನೆಲದ ತುಂಬ ಕವಿಗೆ ಬೆಂಕಿ ಕಂಡಿದೆ. ಹೀಗಿದ್ದರೂ ದೂರದಲ್ಲಿ ಎಲ್ಲೋ ಒಂದು ಭರವಸೆ ಇದೆ. ‘ಸಣ್ಣಗೆ ಬೆಳಗುವ ಚುಕ್ಕಿಗೂ ಒಂದು ಕನಸಿದೆ’ ಎಂದು ಸಮಾಧಾನವನ್ನೂ ಇಲ್ಲಿನ ಕಾವ್ಯ ಹೇಳಿಕೊಳ್ಳುತ್ತದೆ. ರೂಪಕ – ಇಲ್ಲಿನ ಕವಿತೆಗಳ ಶಕ್ತಿಯೂ ಹೌದು, ಮಿತಿಯೂ ಕೂಡ. ಕೆಲವು ಕವಿತೆಗಳಲ್ಲಿ ಬಳಕೆಯಾದ ಪ್ರತಿಮೆ–ರೂಪಕಗಳು ಬೆರಗು ಮೂಡಿಸಿದರೆ, ಇನ್ನು ಕೆಲವು ಕವಿತೆಗಳಲ್ಲಿ ಅವುಗಳು ಭಾರ ಎನಿಸುವಷ್ಟು ಅತಿಯಾಗಿ ಬಳಕೆಯಾಗಿವೆ. ಈ ಭಾರದಿಂದ ಹಗುರವಾದರೆ ಬಿದಲೋಟಿ ಅವರ ಕಾವ್ಯ ಇನ್ನೂ ಎತ್ತರಕ್ಕೆ ಹಾರಬಲ್ಲದು.