ಉದ್ಯಮಿಯ ಚಿಕಿತ್ಸಕ ಕಣ್ಣುಗಳೇ ಇಲ್ಲಿನ ಲೇಖನಗಳ ಜೀವಾಳವಾಗಿದ್ದರೂ ಒಬ್ಬ ಸಾಮಾಜಿಕ ಚಿಂತಕನೂ ಈ ಲೇಖಕನೊಳಗಿದ್ದಾನೆ ಎನ್ನುವುದು ಬರಹಗಳ ವಿಸ್ತಾರವನ್ನು ನೋಡಿದಾಗ ಎದ್ದು ಕಾಣುತ್ತದೆ. ಗೋಪಿನಾಥ್ ಅವರ ರಾಜಕೀಯ ಪ್ರಜ್ಞೆಯೂ ಬೆರಗು ಮೂಡಿಸುತ್ತದೆ. ವರ್ತಮಾನವನ್ನು ಕಾಡಿದ ಸಂಗತಿಗಳ ಕುರಿತು ಅವರು ನಿರ್ಭಿಡೆಯಿಂದ ವಸ್ತುನಿಷ್ಠವಾಗಿ ಸ್ಪಂದಿಸಿರುವುದು ಓದುಗರ ಮೆಚ್ಚುಗೆಗೆ ಪಾತ್ರವಾಗುವುದಲ್ಲದೆ, ಅವರನ್ನು ಹೊಸ ಚಿಂತನೆಗೂ ಹಚ್ಚುತ್ತದೆ. ಹಿಜಾಬ್ ವಿವಾದ ಇರಬಹುದು, ಕೃಷಿ ಕಾನೂನುಗಳು ಇರಬಹುದು, ಯುದ್ಧದ ಸನ್ನಿವೇಶ ಇರಬಹುದು, ಕೋವಿಡ್ ಸಾಂಕ್ರಾಮಿಕ ಇರಬಹುದು, ಎನ್ಕೌಂಟರ್ ಹತ್ಯೆಗಳಿರಬಹುದು –ಈ ಪ್ರಸಂಗಗಳನ್ನು ಲೇಖಕರು ವಿಶ್ಲೇಷಿಸಿದ ರೀತಿ ಹೊಸ ಹೊಳಹುಗಳನ್ನು ನೀಡಬಲ್ಲುದು. ಕೋವಿಡ್ನಂತಹ ಸಂಕಷ್ಟದ ಕಾಲದಲ್ಲಿ ಭಾರತದ ಸಣ್ಣ ಉದ್ಯಮಗಳು ನಲುಗಿದ ಕಥೆಯನ್ನೂ ಅವರು ಹೇಳಿದ್ದಾರೆ.