ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಓದು: ‘ರಾಮ’ರಾಜ್ಯ ಸ್ಥಿರೀಕರಣದ ಆಶಯ

Last Updated 1 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಇತಿಹಾಸ, ಅಧ್ಯಾತ್ಮ ಮತ್ತು ಪ್ರಸ್ತುತ ನೆಲೆಗಟ್ಟಿನಲ್ಲಿ ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಅವರ ಚಿಂತನೆಯ ದೃಷ್ಟಿಕೋನದಲ್ಲಿ ಭಾರತದ ಪ್ರಜಾತಂತ್ರದ ನೋಟ ಕೊಡಲು ಈ ಕೃತಿ ಪ್ರಯತ್ನಿಸಿದೆ. ಇದುವರೆಗಿನ ಶಿಕ್ಷಣದ ಪಠ್ಯದಲ್ಲಿರುವ ಇತಿಹಾಸದ ಉಲ್ಲೇಖಗಳನ್ನೂ, ಇತರ ದೃಷ್ಟಿಕೋನದ ಇತಿಹಾಸವನ್ನೂ ಸಮತೋಲಿಸಿಕೊಂಡು ಅವಲೋಕನ ಮಾಡಲಾಗಿದೆ.

ಕೃತಿಯಲ್ಲಿ ಮೂರು ಭಾಗಗಳಿವೆ. ವಂಶವೃಕ್ಷ, ಜಟಿಲಸಿಕ್ಕು, ಹಾಲಿ ಮತ್ತು ಭವಿಷ್ಯದ ಭಾರತದ ದೃಷ್ಟಿಯ ಅಸ್ತಿ ಭಾರ ಎಂಬ ವಿಭಾಗಗಳಿವು. ಒಟ್ಟಿನಲ್ಲಿ 2014ರ ನಂತರ ಬದಲಾದ, ಬದಲಾಗುತ್ತಿರುವ ಭಾರತದತ್ತ, ರಾಜಕೀಯ ವಿದ್ಯಮಾನಗಳತ್ತ ಹೆಚ್ಚು ಗಮನಹರಿಸಿದೆ ಈ ಕೃತಿ. ಸಹಜವಾಗಿ 2014ರ ನಂತರದ ಬದಲಾವಣೆಯನ್ನು ಬಲವಾಗಿ ಸ್ಥಿರೀಕರಿಸುವ ಆಶಯವೂ ಕೃತಿಗಿದೆ. ಹಾಗಾಗಿ ‘ಅಸ್ತಿಭಾರ’ ವಿಭಾಗದಲ್ಲಿ ಆಡಳಿತ ವ್ಯವಸ್ಥೆ (ಧರ್ಮ ರಾಜ್ಯ)ಯಿಂದ ಹಿಡಿದು ರಾಮ ರಾಜ್ಯ– ಆದರ್ಶ ರಾಜ್ಯ, ಆರ್ಥಿಕತೆ, ಸದ್ಯ ಪ್ರತಿಪಾದಿಸುತ್ತಿರುವ ಆತ್ಮ ನಿರ್ಭರ ಭಾರತದ ಕುರಿತೇ ಚರ್ಚೆ ಕೇಂದ್ರೀಕೃತವಾಗಿದೆ. ಸಣ್ಣ ಸಣ್ಣ ವಿಷಯಗಳಿಗೂ ವಿವರಗಳಿವೆ. ಆರ್ಥಿಕ ಸಮೃದ್ಧಿಯೇ ಅಂತಿಮವಲ್ಲ ಎಂಬ ಧೋರಣೆಯನ್ನು ಇಲ್ಲಿನ ಚರ್ಚೆ ಪ್ರತಿಪಾದಿಸುತ್ತಿದೆ. ಭಾರತೀಯನೊಬ್ಬ ಸ್ವಾವಲಂಬಿಯಾಗಿ ವ್ಯಕ್ತಿ ಘನತೆಯನ್ನು ಕಾಪಾಡಿಕೊಂಡು ಬಾಳುವ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಹೊಂದುವ ಪರಿಕಲ್ಪನೆಗಳನ್ನು ನೀಡಲಾಗಿದೆ.

‘ಬದಲಾದ‘ ಭಾರತವನ್ನು ಸಮರ್ಥಿಸುವ, ಪ‍್ರತಿರೋಧದ ಧ್ವನಿಗಳಿಗೆ ಚುಚ್ಚುವ, ಹಾಲಿ ನಾಯಕತ್ವವೇ ಪರಿಪೂರ್ಣವಾದದ್ದು ಎಂದೇ ಬಿಂಬಿಸುವ ಪ್ರಯತ್ನಗಳು ಕೃತಿಯಲ್ಲಿ ಢಾಳಾಗಿ ಇವೆ. ಹಾಗಾಗಿ ‘ರಾಮ’ ರಾಜ್ಯದ ಆಶಯವೇ ಕೃತಿಯದ್ದು. ಕೃತಿಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರ ಮುನ್ನುಡಿಯಿದೆ. ಇದು ಆರ್‌ಎಸ್‌ಎಸ್ ಸಿದ್ಧಾಂತದ ವಿವರಗಳನ್ನೂ ಹೊಂದಿದ ಕೃತಿ. ಓದುವಿಕೆ, ಹೊಸ ಆಯಾಮದ ಚರ್ಚೆಗಾಗಿ ಓದಬಹುದಾದ ಪುಸ್ತಕ.

ಕೃತಿ: ದೇಸಿ ಪ್ರಜಾತಂತ್ರ
ಲೇ: ವಿಕಾಸ್‌ ಕುಮಾರ್‌ ಪಿ.
ಪ್ರ: ಅಯೋಧ್ಯಾ ಪಬ್ಲಿಕೇಷನ್ಸ್‌ ಬೆಂಗಳೂರು
ಪುಟಗಳು: 340
ಬೆಲೆ: ₹ 399
ಮೊ. 9620916996

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT