ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಡುಂಡ ಘಟನೆಗಳ ಕಣ್ಣೋಟ

Last Updated 16 ಮೇ 2020, 19:30 IST
ಅಕ್ಷರ ಗಾತ್ರ

ಅಂಕಣ ಬರಹಗಾರರಿಗೆ ಇರುವ ಸ್ವಾತಂತ್ರ್ಯವೆಂದರೆ ಅದಕ್ಕೆ ದಿನಾಂಕದ ಸೀಲು ಬೇಕೆಂದಿಲ್ಲ. ಬಾಲ್ಯದಲ್ಲೂ ಕಂಡದ್ದು, ಗೆಳೆಯರು ಹೇಳಿದ್ದು, ಟಿವಿಯಲ್ಲಿ ನೋಡಿದ್ದು– ಎಲ್ಲವೂ ಅದರಲ್ಲಿ ಬರಬಹುದು. ಸಿ.ಪಿ.ನಾಗರಾಜ ಅವರು ತಾವು ಹೀಗೆ ಕಂಡುಂಡ ಮತ್ತು ಗೆಳೆಯರು ಕಂಡು ಹೇಳಿದ ಘಟನೆಗಳನ್ನೇ ಇಟ್ಟುಕೊಂಡು ಅದಕ್ಕೆ ಅಂಕಣವೊಂದನ್ನು ಕಟ್ಟಿಕೊಟ್ಟಿದ್ದಾರೆ. ಹಾಗೆ ಬರೆಯುವಾಗಲೂ ಅವರ ಕಣ್ಣೋಟ ನೆಟ್ಟಿರುವುದು ದುಡಿದು ತಿನ್ನುವವರು ಮತ್ತು ದುರ್ಬಲರ ಕಡೆಗೇ. ದುರ್ಬಲರು ಎಂದರೆ ಮಹಿಳೆಯರು ಎಂದು ಬೇರೆ ಹೇಳಬೇಕಿಲ್ಲ. ಹೆಣ್ಣುಮಕ್ಕಳ ಬದುಕು ಎಷ್ಟೊಂದು ಕಠೋರವಾಗಿದೆ ಎನ್ನುವುದನ್ನು ಇಲ್ಲಿಯ ಹಲವು ಬರಹಗಳು ಸೂಚಿಸುತ್ತಿವೆ.

ಒಂದು ರೀತಿಯ ನಿರ್ಲಿಪ್ತತೆಯಿಂದ ಕೆಲವು ಘಟನೆಗಳನ್ನು ಬರೆಯುವ ಲೇಖಕರು, ಇನ್ನು ಕೆಲವು ಬರಹಗಳಲ್ಲಿ ಲಘು ವಿನೋದದ ಮುಳ್ಳು ಚುಚ್ಚಿ ಕಿರುನಗೆಗೆ ಕಾರಣರಾಗುತ್ತಾರೆ. ಅಧ್ಯಾಪಕರಾಗಿದ್ದ ಹಿನ್ನೆಲೆಯಲ್ಲಿ ಇಂತಹ ಬರಹಗಳಲ್ಲಿ ಸ್ವಲ್ಪ ವಾಚಾಳಿತನವಿದ್ದರೂ, ಲಘುಹಾಸ್ಯ ಓದುಗರಿಗೆ ಕಚಗುಳಿ ಇಡುತ್ತದೆ. ಆದರೆ ಕೆಲವು ಬರಹಗಳಲ್ಲಿ ಈ ಕುರಿತು ಅವರ ಅಭಿಪ್ರಾಯವನ್ನು ಇನ್ನಷ್ಟು ವಿಸ್ತರಿಸಬೇಕಿತ್ತು ಅನ್ನಿಸುವುದೂ ಸುಳ್ಳಲ್ಲ. ಪತ್ರಿಕೆಗಳಿಗೆ ಬರೆಯುವಾಗ ಅಂಕಣ ಬರಹಗಳಿಗೆ ಶಬ್ದಮಿತಿಯೂ ಇರುವುದರಿಂದ ಇಲ್ಲಿನ ಕೆಲವು ಲೇಖನಗಳು ಹಠಾತ್ತನೆ ನಿಂತುಬಿಟ್ಟಿರುವುದು ಸಹಜ ಎನ್ನಬಹುದು.

ಸಮಾಜದಲ್ಲಿ ಅನಿವಾರ್ಯ ಎಂಬಂತೆ ಹೂತುಕೊಂಡಿರುವ ಜಾತಿ ಪದ್ಧತಿ, ಪಾಳೇಗಾರಿಕೆ, ಬಡತನ, ದೈವಭಕ್ತಿ ಹಾಗೂ ಹಲವು ಸಾಮಾಜಿಕ ಸಮಸ್ಯೆಗಳ ಕಡೆಗೆ ಹೆಚ್ಚಿನ ಬರಹಗಳು ಗಮನ ಸೆಳೆಯುತ್ತವೆ. ಈ ಲೇಖನಗಳು ಇಪ್ಪತ್ತು ವರ್ಷಗಳ ಹಿಂದಿನದ್ದು ಎಂದರೂ, ಇವತ್ತಿಗೂ ಸಮಕಾಲೀನ ಸ್ಪರ್ಶ ಇರುವುದು ಗಮನಿಸಬೇಕಾದ ಅಂಶ. ಅಥವಾ ನಮ್ಮ ಸಮಾಜ ಇನ್ನೂ ಬದಲಾಗಿಲ್ಲ ಎನ್ನುವುದನ್ನೂ ಇದು ಸೂಚಿಸುತ್ತಿರಬಹುದು. ಸರಳ ಭಾಷೆಯ ನಿರೂಪಣೆಯ ಜೊತೆಗಿರುವ ಕಲಾವಿದ ಎಂ.ಎಲ್‌.ಸೋಮವರದ ಅವರ ರೇಖಾಚಿತ್ರಗಳು ಓದನ್ನು ಇನ್ನಷ್ಟು ಆಪ್ತವಾಗಿಸುತ್ತವೆ.

ಮುದ್ದೆಗಂಟು
ಲೇಖಕ: ಸಿ.ಪಿ.ನಾಗರಾಜ
ಪ್ರಕಾಶಕ: ನಾಗು ಸ್ಮಾರಕ ಪ್ರಕಾಶ, ಬೆಂಗಳೂರು
ಮೊಬೈಲ್: 9986347521
ಪುಟ: 248
ಬೆಲೆ: ₹200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT