ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮರ್ಶೆ: ಮಾಸ್ತಿ ಸಾಹಿತ್ಯ ಪ್ರಪಂಚದ ಬೆಳಕಿಂಡಿ

Last Updated 26 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ

ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ಬದುಕು–ಬರಹ

ಲೇ: ಎಸ್‌.ಆರ್‌. ವಿಜಯಶಂಕರ

ಪ್ರ: ಸಾಹಿತ್ಯ ಅಕಾದೆಮಿ,

ದೂ: 080 22245152

ಪುಟ: 224 ಬೆಲೆ: 200

ಎಸ್.ಆರ್. ವಿಜಯಶಂಕರ ಅವರು ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಯಾವ ಪರಿಕರಗಳಿಂದ ಅಧ್ಯಯನ ಮಾಡಬೇಕೆಂಬುದರ ಬಗ್ಗೆ ಪ್ರಾರಂಭದಿಂದಲೇ ಆಲೋಚನೆಯನ್ನು ರೂಪಿಸಿಕೊಳ್ಳುತ್ತಾ ಬಂದಿದ್ದಾರೆ. ಕಾಲದಿಂದ ಕಾಲಕ್ಕೆ ವಿಮರ್ಶೆಯ ಪರಿಕರಗಳನ್ನು, ತಾತ್ವಿಕತೆಯನ್ನು ಪರಾಮರ್ಶಿಸುತ್ತಾ ಸಾರ್ವಕಾಲಿಕ ವಿಚಾರಗಳನ್ನು ಬಳಸಿಕೊಳ್ಳುತ್ತಾ ತಮ್ಮದೇ ಆದ ವಿಶಿಷ್ಟ ಮಾರ್ಗವನ್ನು ರೂಪಿಸಿಕೊಂಡಿದ್ದಾರೆ. ಪ್ರಸ್ತುತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬದುಕು-ಬರಹ ಕೃತಿಯಲ್ಲಿ ಅವರ ವಿಮರ್ಶಾ ಮಾರ್ಗಗಳು ಸ್ಪಷ್ಟವಾಗಿವೆ.

ವಿವಿಧ ಸಾಹಿತ್ಯ ಪ್ರಕಾರಗಳಲ್ಲಿರುವ ಮಾಸ್ತಿಯವರ ಒಟ್ಟು 126 ಕೃತಿಗಳ 20 ಸಾವಿರ ಪುಟಗಳನ್ನು ಏಳು ಅಧ್ಯಾಯಗಳಾಗಿ ವಿಂಗಡಿಸಿಕೊಂಡಿದ್ದಾರೆ. 1. ಬದುಕು-ಬರಹ, 2. ಸಣ್ಣ ಕತೆಗಳು, 3. ಕಾದಂಬರಿಗಳು, 4. ನಾಟಕಗಳು, 5. ಕಾವ್ಯ, ಕಥನ ಕಾವ್ಯ, ಮಹಾಕಾವ್ಯ, 6. ವಿಮರ್ಶೆ, ಸಂಕೀರ್ಣ, ಪತ್ರಿಕೋದ್ಯಮ, 7. ಸಮಾರೋಪ. ಇದರಲ್ಲಿ ಮತ್ತೆ ಉಪಶೀರ್ಷಿಕೆಗಳಿವೆ. ಇದು ಮರು ಓದಿನ ಕೃತಿ.

ಇದು ಸತ್ಯೋತ್ತರ ಕಾಲ, ನಮ್ಮ ಅನುಕೂಲಕ್ಕೆ ಬೇಕಾದ ನಂಬಿಕೆಗಳನ್ನು ಮಾತ್ರ ಪರಮ ಸತ್ಯವೆಂದು ನಂಬುವ ಕಾಲಘಟ್ಟವಿದು. ರಾಜಕೀಯ ಅಧಿಕಾರ ಪಡೆಯುವ ದಾಳವಾಗಿ ಧರ್ಮ, ದೇವರು ಬಳಕೆಯಾಗುತ್ತಿವೆ. ‘ಇಂತಹ ಕಾಲಮಾನದಲ್ಲಿ ಮಾಸ್ತಿಯವರ ಸಾಹಿತ್ಯದ ಮರುಓದು, ನಿರ್ಮಲ ಜೀವನ, ನಿರುದ್ವಿಗ್ನ ನಂಬುಗೆ, ನೈತಿಕ ನೈರ್ಮಲ್ಯ, ಕ್ರೌರ್ಯದ ಅರಿವಿದ್ದೂ ಹುಟ್ಟುವ ಸಾತ್ವಿಕ ನಂಬುಗೆ, ನಿಧಾನ ಶ್ರುತಿಯಲ್ಲಿ ಅರಳುವ ಜೀವನದ ಸಜ್ಜನ ಮೌಲ್ಯಗಳನ್ನು ಎತ್ತಿ ತೋರಿಸುತ್ತದೆ. ಲಾಭ, ಸ್ವಾರ್ಥ, ಪ್ರಯೋಜನವಾದಿ ಚಿಂತನೆಗಳ ವಾತಾವರಣದಲ್ಲಿ ಪ್ರಾಮಾಣಿಕ ನಿರ್ಮಲ ಬದುಕಿನ ಜೀವಪರ ಮೌಲ್ಯಗಳನ್ನು ಪುನಃ ನೆನಪಿಸುತ್ತದೆ. ನಮ್ಮ ಕಾಲಕ್ಕೂ ಸಲ್ಲುವ ಇಂದಿಗೂ ಬೇಕಾದ ಸಾಹಿತ್ಯವಾಗಿ ಅದರ ಸಮಕಾಲೀನ ಮಹತ್ವವನ್ನು ಮಾಸ್ತಿಯವರ ಬರಹಗಳ ಮರುಓದು ತೋರಿಸಿಕೊಡುತ್ತದೆ’ (ಪುಟ 41). ಇದರಿಂದಾಗಿ ಇಲ್ಲಿನ ಈ ಕೃತಿ ಹಲವು ಒಳನೋಟಗಳನ್ನು ಒಳಗೊಳ್ಳಲು ಸಾಧ್ಯವಾಗಿದೆ.

ಮಾಸ್ತಿಯವರು ಬಳಸಿರುವ ರೂಪಕಗಳನ್ನು ವಿಶ್ಲೇಷಿಸುವ ಮೂಲಕ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಸ್ವರೂಪಗಳನ್ನು ಮನುಷ್ಯನ ಬದುಕಿನ ವಿವರಗಳನ್ನು ಅವನ ಘನತೆಯನ್ನು ಲೇಖಕರು ಚರ್ಚಿಸುತ್ತಾರೆ. ಸಾಹಿತ್ಯದಲ್ಲಿ ರೂಪಕಕ್ಕೆ ಪ್ರಥಮ ಸ್ಥಾನ. ರೂಪಕವು ಸಾಹಿತ್ಯದಲ್ಲಿ ಒಂದು ಶಕ್ತಿ, ಶಬ್ದ, ಅರ್ಥದಂತೆ ಅದೊಂದು ಅನುಭವ. ಇರುವುದನ್ನು ಹೇಳುವುದರ ಜೊತೆಗೆ ಇಲ್ಲದ್ದನ್ನು ಸೃಷ್ಟಿಸುವ ಶಕ್ತಿ ಅದಕ್ಕಿದೆ. ಆದ್ದರಿಂದಲೇ ಮಾಸ್ತಿಯವರಲ್ಲಿ ತತ್ವ ಜಿಜ್ಞಾಸೆಯು ಭಕ್ತಿ, ನಂಬುಗೆ ಹಾಗೂ ಪರಂಪರಾಗತ ಶ್ರದ್ಧೆ ಆಚರಣೆಗಳಿಂದ ಹೇಗೆ ಬಿಡುಗಡೆಗೊಂಡು ಸ್ವತಂತ್ರ ಹಾಗೂ ಮಾನವೀಯ ಚಿಂತನೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಅವರ ರೂಪಕಶಕ್ತಿಯ ಸ್ವರೂಪವನ್ನು ಲೇಖಕರು ವಿವರಿಸಿಕೊಳ್ಳುತ್ತಾರೆ. ಇದನ್ನು ಸ್ಪಷ್ಟಪಡಿಸಲು ವಿಶಿಷ್ಟಾದ್ವೈತದ ಶರಣಾಗತಿಯ ವಿಶಿಷ್ಟ ರೂಪವಾದ ‘ಪ್ರಪತ್ತಿ’ಯ ಪರಿಕಲ್ಪನೆಯನ್ನು ಬಳಸಿಕೊಳ್ಳುತ್ತಾರೆ. ರೂಪಕ ಚಿಂತನೆಯನ್ನು ವಿಶ್ಲೇಷಿಸಿಕೊಳ್ಳುವಾಗ ‘ಉದ್ಯಾನದಲ್ಲಿ’ (ಕವಿತೆ), ‘ಯಶೋಧರಾ’ (ನಾಟಕ) ಮಂತ್ರೋದಯ, ಆಚಾರ್ಯರ ಪತ್ನಿ (ಕತೆಗಳು) ಮುಂತಾದವುಗಳನ್ನು ಉದಾಹರಿಸುತ್ತಾರೆ.

ಮಾಸ್ತಿಯವರ ಕೃತಿಗಳಲ್ಲಿ ಅಂತರ್ಗತವಾಗಿರುವ ಸಮಾನತೆ, ಜೀವಪರತೆ, ಸ್ತ್ರೀ ಸ್ವಾತಂತ್ರ್ಯದ ಹೊಸ ದೃಷ್ಟಿಕೋನ, ನ್ಯಾಯಪರತೆಯ ನೈತಿಕ ದೃಷ್ಟಿಕೋನ, ಮುಖ್ಯವಾಗಿ ಎಲ್ಲಾ ಸಮುದಾಯದ ಮಾನವ ಜೀವಿಗಳನ್ನು ಸಮಾನವಾಗಿ ಕಾಣುವ, ಮಾನವ ಘನತೆಯನ್ನು ಎತ್ತಿ ಹಿಡಿಯುವ ಸ್ವರೂಪಗಳನ್ನು ವಿಶ್ಲೇಷಣೆ ಮಾಡುವ ಕ್ರಮ ಅನನ್ಯವಾಗಿದೆ.

ಕೃತಿಯ ಉದ್ದಕ್ಕೂ ಸಾಧ್ಯವಾದ ಕಡೆಯಲ್ಲೆಲ್ಲಾ ತೌಲನಿಕ ಅಧ್ಯಯನ ಮಾಡಲಾಗಿದೆ. ತೌಲನಿಕ ವಿಶ್ಲೇಷಣೆ ವಿಮರ್ಶೆಯಲ್ಲಿ ಮುಖ್ಯ. ಆಗ ವಿಮರ್ಶೆ ಪೂರ್ಣವಾಗಲು ಸಾಧ್ಯವಾಗುತ್ತದೆ. ವಸ್ತು, ರಚನೆ, ಸಂಕೀರ್ಣ ಮತ್ತು ರಹಸ್ಯಮಯ ಬದುಕು, ಕಷ್ಟ ಪರಂಪರೆಗಳನ್ನು ಎದುರಿಸುವ ಪಾತ್ರಗಳನ್ನು ಮತ್ತೊಂದು ಕೃತಿಯೊಂದಿಗೆ ಹೋಲಿಸಿದಾಗ ಮಹತ್ವದ ಒಳನೋಟಗಳು ದೊರೆಯುತ್ತವೆ. ಏಕೆಂದರೆ, ಈ ಬಗೆಯ ವಿಶ್ಲೇಷಣೆಯಲ್ಲಿ ಭಾಷೆ, ಜನಾಂಗ, ದೇಶಗಳಿಗೆ ಬದ್ಧವಾಗದೆ ಜಗತ್ತಿನ ಎಲ್ಲ ಸಾಹಿತ್ಯಗಳ ಸೃಷ್ಟಿ ಮತ್ತು ಅನುಭವದ ಏಕತೆಯನ್ನು ಗಮನದಲ್ಲಿಟ್ಟುಕೊಳ್ಳಲಾಗಿರುತ್ತದೆ.

ಮಾಸ್ತಿಯವರ ಕೃತಿಗಳಲ್ಲಿ ಸಮಾನ ವಸ್ತು, ಪಾತ್ರಗಳ ವರ್ತನೆ ಇತ್ಯಾದಿಗಳನ್ನು ತೌಲನಿಕವಾಗಿ ಚರ್ಚಿಸಲು ಸುಬ್ಬಣ್ಣ ಮತ್ತು ‘ಭಾವ’, ಮುನೇಶ್ವರನ ಮರ ಮತ್ತು ಮೊಸರಿನ ಮಂಗಮ್ಮ ಕತೆಗಳನ್ನು ಆಯ್ಕೆಮಾಡಿ ವಿವರಿಸಿದ್ದಾರೆ. ಪಾಶ್ಚಾತ್ಯ ಸಾಹಿತ್ಯದೊಂದಿಗೆ ಸುಬ್ಬಣ್ಣ (ಪುಟ 102), ‘ಶಾನ್ತಾ’ ನಾಟಕ ಶೇಕ್ಸ್‌ಪಿಯರನ ಹನ್ನೆರಡನೇ ರಾತ್ರಿ (ಪುಟ 112), ತಾಳೀಕೋಟೆ – ಜೂಲಿಯಸ್ ಸೀಸರ್ (ಪುಟ 118) – ಇವುಗಳನ್ನು ತೌಲನಿಕವಾಗಿ ಅಧ್ಯಯನ ಮಾಡಿರುವುದನ್ನು ನೋಡಬಹುದು.

ಈ ಕೃತಿಯಲ್ಲಿ ಜೀವನ ಚರಿತ್ರಾತ್ಮಕ ವಿಮರ್ಶೆಯೂ ಇದೆ. ಹಾಗೆ ನೋಡಿದರೆ ಇದರ ಶೀರ್ಷಿಕೆಯೇ ಮಾಸ್ತಿಯವರ ಬದುಕು-ಬರಹ. ಹೀಗಾಗಿ ಕೃತಿಯ ಉದ್ದಕ್ಕೂ ಮಾಸ್ತಿಯವರ ಬದುಕಿನ ಘಟನೆಗಳು, ನೆನಪುಗಳು, ಅನುಭವಗಳು ಪ್ರತಿಯೊಂದು ಪ್ರಕಾರದ ಕೃತಿಯ ವಿಶ್ಲೇಷಣೆಯಲ್ಲಿ ಬಂದು ಹೋಗುತ್ತವೆ. ಮಾಸ್ತಿಯವರ ಪಾಂಡಿತ್ಯ, ಪಕ್ವತೆ, ಅವರ ಜೀವನ ಸಿದ್ಧಾಂತದ ಆಳ ವ್ಯಾಪಕತೆ, ಸಂಸ್ಕಾರ – ಇವುಗಳನ್ನು ಗಣನೆಗೆ ತೆಗೆದುಕೊಳ್ಳುವುದರ ಜೊತೆಗೆ ಕೃತಿಯ ಮೂಲ, ಸಾಮಾಜಿಕ ಪರಿಸರದಲ್ಲಿ ಹುಟ್ಟಿರುವ ಅದರ ಉಪಯುಕ್ತತೆ ಇವುಗಳನ್ನು ಗಣನೆಗೆ ತೆಗೆದುಕೊಂಡು ನಡೆಸಿರುವ ವಿಶ್ಲೇಷಣೆ ಸೊಗಸಾಗಿದೆ. ಮಾಸ್ತಿಯವರ ಜೀವನ ಕಥೆಯಾದ ‘ಭಾವ’ದ ಮೂರು ಸಂಪುಟಗಳ ಕೆಲವು ಘಟನೆಗಳನ್ನು ಕತೆ, ಕಾದಂಬರಿ, ಮಹಾಕಾವ್ಯ, ಕಾವ್ಯ – ಕೃತಿಗಳಿಗೆ ಅನ್ವಯಿಸಿ ಅಧ್ಯಯನ ಮಾಡಲಾಗಿದೆ. ಇದರಿಂದ ಮಾಸ್ತಿಯವರ ಕೃತಿಗಳ ಒಳನೋಟಗಳು ವಿಸ್ತಾರಗೊಳ್ಳಲು ಸಾಧ್ಯವಾಗಿದೆ.

ವಿಜಯಶಂಕರ ಅವರು ಮಾಸ್ತಿಯವರ ಕತೆಗಳನ್ನು ಬಹಳ ದೀರ್ಘವಾಗಿ ಆಳವಾಗಿ ವಿಶ್ಲೇಷಿಸಿದ್ದಾರೆ. ಬಹುಶಃ ಇದಕ್ಕೆ ಅವರು ಸಣ್ಣಕತೆಗಳ ಜನಕ, ಕತೆಗಾರ ಮಾಸ್ತಿ ಎಂದು ಪ್ರಸಿದ್ಧರಾಗಿರುವುದು ಕಾರಣವಿರಬಹುದು. ಈ ಕೆಳಗಿನ ಸಾಲುಗಳನ್ನು ಉಲ್ಲೇಖಿಸುವುದರ ಮೂಲಕ ಅವರ ವಿಮರ್ಶಾ ಸ್ವರೂಪವನ್ನು ಮನವರಿಕೆ ಮಾಡಿಕೊಡುತ್ತೇನೆ: ‘ವಿಶ್ವಾತ್ಮಕ ದೃಷ್ಟಿಕೋನ ಮಾಸ್ತಿಯವರು ತಮ್ಮನ್ನು ಹಾಗೂ ಜಗತ್ತನ್ನೂ ತಿಳಿಯಲು ಪರಿಭಾವಿಸಿದ ಕ್ರಮ. ಮೊದಲಿಗೆ ವ್ಯಕ್ತಿ, ಆ ಬಳಿಕ ವ್ಯಕ್ತಿಯಿಂದ ಸಮಾಜ, ಮುಂದೆ ಸಮಾಜದಿಂದ ಲೋಕ, ಅಲ್ಲಿಂದ ಸಮಸ್ತ ಪ್ರಪಂಚ. ಅಂದರೆ ವಿಶ್ವಕುಲದ ಭಾಗವಾಗಿ ಮನುಷ್ಯ ಚೇತನವನ್ನು ಅರಿಯುವುದು ಅವರ ಪರಿಭಾವನೆಯ ಮಾರ್ಗ. ಅದು ಕೊನೆಗೊಳ್ಳುವುದು ವಿಶ್ವದ ಅಖಂಡತ್ವದಲ್ಲಿ. ಅದು ದೈವಶಕ್ತಿಯ ತಾತ್ವಿಕ ನೆಲೆಗಳನ್ನು ‘ಮಂತ್ರೋದಯ’ ಕತೆಯಲ್ಲಿ ತೋರಿಸಿಕೊಟ್ಟಿತು. ಅದೇ ರೂಪಕ ಚಿಂತನೆಯ ತಾತ್ವಿಕತೆ. ಅದೇ ತತ್ವವನ್ನು ಸಾಮಾನ್ಯ ಗ್ರಹಿಕೆಯ ‘ದೇವರು’ ಕಲ್ಪನೆಯಲ್ಲಿ ‘ಶ್ರೀಕೃಷ್ಣನ ಅಂತಿಮ ಸಂದರ್ಶನ’ ಕತೆಯಲ್ಲಿ ಕಾಣಿಸಿತು. (ಪುಟ 58)

ಮಾಸ್ತಿಯವರ ಕೃತಿಗಳನ್ನು ವಿಮರ್ಶಿಸುವಾಗ ಬಾಹ್ಯ ಮತ್ತು ಆಂತರಿಕ ವಿಮರ್ಶಾ ವಿಧಾನಗಳೆರಡನ್ನೂ ಲೇಖಕರು ಬಳಸಿದ್ದಾರೆ. ಕವಿಯ ಮನೋಧರ್ಮ, ಸಮಾಜ, ಮನಃಶಾಸ್ತ್ರ, ನೀತಿಧರ್ಮ, ತತ್ವಶಾಸ್ತ್ರ, ಎಲ್ಲಾ ಮಾನವಿಕಗಳನ್ನು ಬಳಸಿ ಅಧ್ಯಯನ ಮಾಡಿರುವುದರಿಂದ ಅವರ ಮರು ಓದು ಸಾರ್ಥಕ್ಯವನ್ನು ಪಡೆದಿದೆ.

⇒v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT