ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಅನುಪಮಾ ಕೆ. ಬೆಣಚಿನಮರಡಿ, ಹಲವು ಪತ್ರಿಕೆಗಳಿಗೆ ಮಕ್ಕಳ ಕಥೆಗಳನ್ನು ಬರೆದಿದ್ದಾರೆ. ಪರಿಸರದಲ್ಲಿನ ಜೀವಪ್ರಪಂಚ ಇವರನ್ನು ಹೆಚ್ಚಾಗಿ ಆಕರ್ಷಿಸುವ ವಿಷಯ. ಈ ಕೃತಿಯಲ್ಲಿ ಅವರು ಆಯ್ದುಕೊಂಡಿರುವ ಕಥೆಯೂ ಅಷ್ಟೇ ಸರಳವಾಗಿದೆ. ರಿಕ್ಕು ಎಂಬ ರಿಕ್ಷಾ ಮತ್ತು ಆನೆಯೊಂದರ ನಡುವೆ ನಡೆಯುವ ಸಂಭಾಷಣೆ ಕಥೆಯಾಗುತ್ತಾ ಸಾಗುತ್ತದೆ. ವನ್ಯಜೀವಿ–ಮಾನವರ ನಡುವಿನ ಸಂಘರ್ಷದ ಪರಿಣಾಮವನ್ನೂ ತೆಳುವಾಗಿ ಕಥೆ ಬಿಚ್ಚಿಟ್ಟಿದೆ. ಈ ಅಕ್ಷರಗಳಿಗೆ ಜೀವ ತುಂಬಿದವರು ಉಡುಪಿ ಜಿಲ್ಲೆಯ ಸಂತೋಷ್ ಸಸಿಹಿತ್ಲು. ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರಕಾರರಾಗಿ ಕೆಲಸ ಮಾಡಿದ ಅನುಭವವುಳ್ಳ ಇವರು ರಿಕ್ಕುವಿಗೆ ಬಣ್ಣದ ಪ್ರಾಣವಾಯು ನೀಡಿದ್ದಾರೆ. ಆನೆಯೊಂದು ರಿಕ್ಷಾದೊಳಗೆ ಕುಳಿತರೆ ರಿಕ್ಷಾವೇ ಆನೆಯಾಗುವಂತಹ ಇವರ ಕೈಚಳಕ ಮಕ್ಕಳ ಕಣ್ಮನಗಳನ್ನು ಸೆಳೆಯುತ್ತದೆ.