ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗದ ಮೇಲೆ ನೃತ್ಯ ಕ್ಷೇತ್ರದ ಧ್ರುವತಾರೆ

Last Updated 18 ಸೆಪ್ಟೆಂಬರ್ 2019, 11:22 IST
ಅಕ್ಷರ ಗಾತ್ರ

ನೃತ್ಯ ಕ್ಷೇತ್ರದಲ್ಲಿ ಆಸಕ್ತಿ ಇರುವವರೆಲ್ಲರಿಗೂ ಪರಿಚಿತ ಹೆಸರು ವಿದುಷಿ ಬಾಲಸರಸ್ವತಿಯವರದು. ಸಂಗೀತದಲ್ಲಿ ವೀಣಾ ಧನಮ್ಮಾಳ್ ಅವರು ಹೇಗೋ ಹಾಗೆ ಆ ಅಜ್ಜಿಗೆ ತಕ್ಕ ಮೊಮ್ಮಗಳಾಗಿ, ನೃತ್ಯ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಮಿನುಗಿದವರು ಬಾಲಸರಸ್ವತಿಯವರು.

ತಮ್ಮ ಸಂಸ್ಕೃತಿ, ಪರಂಪರೆ ಮತ್ತು ಕುಲದ ಮೂಲಕ ಹರಿಯುತ್ತಿದ್ದ ವಿದ್ಯಾವಾಹಿನಿಯನ್ನು ಕಾಪಿಟ್ಟುಕೊಳ್ಳುವುದರಲ್ಲಿ ಆಕೆಗೆ ಅತೀವ ಆಸ್ಥೆ. ಅದರ ಬಗ್ಗೆ ಹೆಮ್ಮೆ, ಗೌರವ. ಆಕೆಯ ನಿಷ್ಠೆಯೇ ಅವರನ್ನು ಒಬ್ಬ ಅದ್ವಿತೀಯ ಕಲಾವಿದೆಯನ್ನಾಗಿ ರೂಪಿಸಿತು ಎಂದರೆ ಅತಿಶಯೋಕ್ತಿ ಅಲ್ಲ. ದೇವದಾಸಿ ಕುಟುಂಬದಲ್ಲಿ ಹುಟ್ಟಿ, ಅದರ ಗೌರವಕ್ಕೆ ಧಕ್ಕೆ ತಾರದಂತೆ ಬಾಳಿದ ಅವರ ಬದುಕೇ ಒಂದು ಮಹಾಕಾವ್ಯದಂತೆ. ಅಲ್ಲಿ ಎಲ್ಲ ರಸಗಳ ಮಿಳಿತವಿದೆ, ಬದುಕಿನ ಏರಿಳಿತಗಳ ರಿಂಗಣವಿದೆ, ಒಬ್ಬ ಛಲಗಾರ್ತಿ ಕಲಾವಿದೆಯ ಯಶೋಗಾಥೆಯಿದೆ.

ಅಂತಹ ಮೇರು ಕಲಾವಿದೆಯ ಬದುಕನ್ನು ರಾಗಮಾಲ ಪ್ರಕಾಶನದ ಟಿ.ಎಸ್.ವೇಣುಗೋಪಾಲ್ ಮತ್ತು ಶೈಲಜಾ ಅವರು ಅಕ್ಷರಗಳಲ್ಲಿ ಹಿಡಿದಿಟ್ಟಿದ್ದಾರೆ. ಅದನ್ನು ಆಧಾರವಾಗಿಟ್ಟುಕೊಂಡು ಶ್ರೀಮತಿ ಡಿ.ಶೀಲಾ ಕುಮಾರಿ ಅವರು ಅದನ್ನು ರಂಗದ ಮೇಲೆ ನಾಟಕ ರೂಪದಲ್ಲಿ ತರುವ ಯತ್ನ ಮಾಡಿದ್ದಾರೆ. ಬಾಲ ಸರಸ್ವತಿಯವರ ಇಡೀ ಬದುಕನ್ನು ಒಂದೂವರೆ ಗಂಟೆಯಲ್ಲಿ ತೋರಿಸುವುದು ಹುಡುಗಾಟದ ಮಾತಲ್ಲ. ಮೊದಲನೆಯದಾಗಿ ಅವರ ಬದುಕನ್ನು ನಾಟಕದ ರೂಪಕ್ಕೆ ಇಳಿಸುವುದೇ ಹರಸಾಹಸದ ಮಾತು. ಅಂತಹುದರಲ್ಲಿ ಹೊಸಬರನ್ನು ಹಾಕಿಕೊಂಡು ನಾಟಕ ಮಾಡಲು ಹೊರಟ ಡಿ.ಶೀಲಾ ಕುಮಾರಿ ಅವರ ಧೈರ್ಯ ಮೆಚ್ಚಲೇಬೇಕು. ನಾಟಕದ ರೂಪಾಂತರವನ್ನು ಅವರೇ ಮಾಡಿರುವುದಲ್ಲದೆ, ಅದರ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರೂ ಕೈಜೋಡಿಸಿ ಬೆನ್ನು ತಟ್ಟಿದ ಪರಿಣಾಮವಾಗಿ ಇದೇ ಸೆಪ್ಟೆಂಬರ್ 8 ರಂದು ಕಲಾ ಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಈ ನಾಟಕದ ಪ್ರಥಮ ಪ್ರದರ್ಶನ ನಡೆಯಿತು.

ನಾಟಕಕ್ಕೆ ಮೊದಲು ನಡೆದ ಚಿಕ್ಕ ಸಭಾ ಕಾರ್ಯಕ್ರಮದಲ್ಲಿ ಬಾಲಸರಸ್ವತಿ ಅವರನ್ನು ಕುರಿತು ಪರಿಚಯ ಮಾಡಿಕೊಟ್ಟ ಶೈಲಜಾ ಅವರ ಮಾತುಗಳಿಂದಾಗಿ ಬಾಲಸರಸ್ವತಿಯ ಬಗ್ಗೆ ಅರಿವಿಲ್ಲದ ಅನೇಕರಿಗೆ ಅದು ಬಲು ಉಪಯುಕ್ತವಾಗಿ ಪರಿಣಮಿಸಿತು. ಡಾ.ಎ.ಬಿ.ನಂಜಪ್ಪ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಎಚ್.ಚನ್ನಪ್ಪ ಉಪಸ್ಥಿತರಿದ್ದರು.

ಶೀಲಾ ಕುಮಾರಿಯವರು ಬಾಲ ಸರಸ್ವತಿಯವರ ಇಡೀ ಬದುಕನ್ನು ಚಿಕ್ಕದಾಗಿಸುವ ನಿಟ್ಟಿನಲ್ಲಿ ಅನೇಕ ತಂತ್ರಗಳನ್ನು ಅಳವಡಿಸಿಕೊಂಡಿದ್ದಾರೆ. ಅವರ ಬಾಲ್ಯದ (ಚಿನ್ಮಯಿ) ಕಲಿಕೆಗೆ ಮಹತ್ವ ಕೊಟ್ಟು, ಮುಂದೆ ಅವರ ಬದುಕಿನ ಹಲವು ಮುಖ್ಯ ಘಟನೆಗಳನ್ನು ಪಾತ್ರಗಳ ಬಾಯಲ್ಲಿ ಹೇಳಿ ಮುಗಿಸುವ ಮೂಲಕ ಪ್ರೇಕ್ಷಕರಿಗೆ ಪರಿಚಯ ಮಾಡಿಸುತ್ತಾರೆ. ಉದಾಹರಣೆಗೆ ಅವರ ಶಿಷ್ಯರ ಬಾಯಲ್ಲಿ ಅವರ ವಿದೇಶ ಪ್ರವಾಸ ಮತ್ತು ಅಲ್ಲಿ ಕಲಿಸುವ ವಿಚಾರ, ಕಂದಪ್ಪ ಪಿಳ್ಳೆಯವರ ಮೂಲಕ, ಅವರ ಮನಸಿನ ಮೇಲೆ ಗಾಢವಾಗಿ ಅಚ್ಚೊತ್ತಿದ್ದ ಮೌಲ್ಯಗಳು ಹೀಗೆ. ಆ ಜಾಣ್ಮೆಯಿಂದ ಶೀಲಾ ಅವರು ಸಮಯದ ಉಳಿತಾಯವನ್ನು ಸಾಧಿಸಿದ್ದಾರೆ. ಆದರೆ, ಬಾಲಸರಸ್ವತಿಯವರ ಇಡೀ ಬದುಕಿನ ಒಂದು ಸಂಪೂರ್ಣ ಕಿರು ನೋಟವನ್ನು ಕೊಟ್ಟಿದ್ದಾರೆಯೇ ಎಂಬುದು ಪ್ರಶ್ನಾರ್ಹವಾಗಿಯೇ ಉಳಿಯುತ್ತದೆ.

ಬಾಲಸರಸ್ವತಿಯವರು ಹಾಡುಗಾರಿಕೆಯಲ್ಲಿ ಅಸಾಮಾನ್ಯರಾಗಿದ್ದ ಕಲಾವಿದೆ. ಇಲ್ಲಿ ಅದು ಸೊರಗಿದೆ. ಅನುಷಾ ಎನ್. ರಾಜ್ ಅವರು, ಬಾಲಸರಸ್ವತಿಯಾಗಿ ಉತ್ತಮ ಅಭಿನಯ ನೀಡಿದ್ದಾರಾದರೂ ಆ ಪಾತ್ರವನ್ನು ಅವರು ಇನ್ನೂ ಆಳವಾಗಿ ಅಭ್ಯಸಿಸಿ, ಮತ್ತಷ್ಟು ಗಾಂಭೀರ್ಯವನ್ನು ತುಂಬುವ ಅವಶ್ಯಕತೆ ಇದೆ. ಧನಮ್ಮಾಳ್ ಮತ್ತು ಜಯಮ್ಮಾಳ್ ಪಾತ್ರದಲ್ಲಿ ತಾರಾ ಬಿ.ಜಿ. ಮತ್ತು ಕವಿತಾ ಸಿ.ಎಸ್. ಅವರ ಅಭಿನಯ ಸಹಜವಾಗಿತ್ತು. ಕಂದಪ್ಪ ಪಿಳ್ಳೈ ಅವರು ತಮ್ಮ ಭಾರೀ ನಿಲುವನ್ನು ಮತ್ತಷ್ಟು ಸದುಪಯೋಗಪಡಿಸಿಕೊಳ್ಳಬಹುದು. ಲಕ್ಷ್ಮಿ ಅವರ ಅನಾರೋಗ್ಯವನ್ನು ತುಸುವಾದರೂ ತೋರಿಸಿದ್ದಲ್ಲಿ ಸಹಜವಾಗಿರುತ್ತಿತ್ತು. ಅವರ ಸಂದರ್ಶನದ ದೃಶ್ಯವು ಮತ್ತಷ್ಟು ಪರಿಣಾಮಕಾರಿಯಾಗಬೇಕಿದೆ. ಅತ್ಯಂತ ಕಡಿಮೆ ಪರಿಕರಗಳನ್ನು ಉಪಯೋಗಿಸಿಕೊಂಡು ಬಾಲಸರಸ್ವತಿಯವರ ಬದುಕನ್ನು ಹಿಡಿದಿಡುವ ಯತ್ನದಲ್ಲಿ ಶೀಲಾ ಅವರು ಯಶಸ್ವಿ ಆಗಿದ್ದಾರೆ.

ಮೊದಲ ಪ್ರಯತ್ನದಲ್ಲಿ ಆಗಿರುವ ಆಭಾಸಗಳನ್ನು ಸರಿಪಡಿಸಿಕೊಂಡಲ್ಲಿ ಇದರ ಮುಂದಿನ ಪ್ರಯೋಗಗಳು ಇನ್ನೂ ಉತ್ತಮವಾಗುವುದರಲ್ಲಿ ಸಂಶಯವಿಲ್ಲ. ಇಂತಹ ಪ್ರಯೋಗಗಳು ಹೆಚ್ಚು ಹೆಚ್ಚು ಆಗಬೇಕಾದ ಅವಶ್ಯಕತೆ ಖಂಡಿತಾ ಇದೆ. ಆ ದೃಷ್ಟಿಯಿಂದ ಶೀಲಾಕುಮಾರಿಯವರ ಈ ಯತ್ನವು ಸ್ವಾಗತಾರ್ಹವಾದುದು. ನೇಪಥ್ಯದಲ್ಲಿ ಸಂತೋಷ್‌ ಕುಮಾರ್, ರಾಮಚಂದ್ರ ಬಿ.ಎಂ, ಡಾ.ವಸುಂಧರಾ ದೊರೆಸ್ವಾಮಿ, ಅನುಷಾ ಎನ್. ರಾಜ್, ಸುಂದರೇಶ್, ಶ್ರುತಿರಂಜನಿ, ಅನುಅ, ವನಿತಾ ಮತ್ತು ಜೀವನ್ ಕುಮಾರರ ಸಹಾಯವು ಬೆನ್ನೆಲುಬಾಗಿ ನಿಂತಿದೆ. ಒಟ್ಟಾರೆ ಇದೊಂದು ಸ್ತುತ್ಯರ್ಹ ಪ್ರಯತ್ನ ಎಂಬುದರಲ್ಲಿ ಸಂಶಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT