ಸಖನೆ ಪ್ರಾಣಸುಖನೆ ಒಡಲ ದಂಡಿಗೆಯ ನುಡಿಸಿ ಜಲ ಜಲನೆ ಮಾಗಿಸಿ ಕೋಟಿ ಮಿಂಚು ಲಕ್ಷ ನದಿಗಳ ಜನಕ ಜಾತಕನೆ
ಮಣ್ಣ ಕಾಯವ ಬೆಣ್ಣೆ ಮಾಡಿ ಹುಚ್ಚು ಕುದುರೆಯ ಜೀನು ಬಿಚ್ಚಿ ಮುಳುಗಿ ಮುಳುಗಿಸಿ ಮರಳಿ ಮರಳಿಸಿ ಜೇನ ಕಡಲಿಗೆ ನಾಲಿಗೆ ತಾಗಿಸಿ ಹೊಕ್ಕುಳಾಳವ ಕಡಲ ತೂಫಾನಾಗಿಸಿ ತೋಳ ತಬ್ಬಿ ಝಲ್ಲನೆ ಕರಗಿಸಿ ತೊಟ್ಟಿಕ್ಕಿಸುವ ಮಾಯಕಾರನೆ
ಬಾಳು ಬಿಸಿಲಿಗೆ ಸಿಕ್ಕಿ ಮರಳಾದ ಎದೆ ಒಡಲ ತಿರುಗಣಿಗಳೆಲ್ಲ ಜಡ ಹಾವಿನ ಜೋಂಪು ನೋಂಪಿ ಮುರಿಯಲೆ ಬೇಕು ಕಲ್ಲು ದೀಕ್ಷೆ ಬಿಡಲು!
ಶ್ಯಾಮನೊಂದಿಗೆ ಸಂವಾದ ಮಾಡಿ ಶಿವನ ಸಂಗವ ಮಾಡಿ ಅಮೃತ ಸೋಪಾನ ಕಟ್ಟಿದ ಮಾಯಕಾರನೆ!
ಕ್ರೂರ ಕಾಲನ ಮುಂದಲೆಯ ಹಿಡಿದು ತಿರುಗಿಸಿ ಹದಿನೆಂಟು ಮೈಲಿ ಕಡೆ ಮಲ್ಲಿಗೆ ನೆಟ್ಟು ಮಾವು ಮೋಹದ ಜುಟ್ಟು ಗಿಳಿ ಕೋಗಿಲೆ ಗಾನ ಬೆರೆಸಿ ನಿತ್ಯ ಉಗಾದಿಯ ತೋರಣದ ಜತೆಗಾರನೆ
ಸಾಕು ಮಾಡಯ್ಯ ನೀನು ಕನಸಿನ ದಾಳಿ!
ಬಾ ಒಮ್ಮೆ ನಿಜದ ಕಾಯವ ತಬ್ಬು ಹರಿವ ಕಾಯ ನಿತ್ಯ ನೂತನವೆ ಮೈಯಿಗೆಲ್ಲಿದೆ ಮೈಲಿಗೆ ಮಿತ್ರನೆ? ಕೋರೈಸುವ ಆತ್ಮ ಮಂಟಪದ ಶಿಖರ ಸೂರ್ಯನೆ
ತಬ್ಬಬೇಕು ನಿಜದಲ್ಲಿ ನಾನೂ ಜಲ್ಲ ಜಲ್ಲನೆ ಕರಗಿ ಗಂಗೆಯಾಗಬೇಕು ಆತ್ಮಕ್ಕೆ ಬೆದೆ ಬಂದಿದೆ ಬಾರಯ್ಯ ಬಾ ನನ್ನ ಕಾಲದ ಮಲ್ಲಿಕಾರ್ಜುನ!
ಬಾ ಕುಣಿ ಇನ್ನೂ ಕುಣಿ ಬ್ರಹ್ಮ ವಿಷ್ಣುಗಳ ಪೀಠ ಥರಗುಟ್ಟುವಂತೆ ಕುಣಿ ಥೈಯಗಟ್ಟಿ ತಾಕಿಸಿ ಬೆರಳು ತಿದಿ ಒತ್ತಿ ಬಿಸಿ ಉಸಿರು ಆವಿ ಮೋಡಗಳ ಬೆವರು ಮಂಜು ಬೆಟ್ಟದ ಎದೆಯೊಳಗೆ ರೋಮಾಂಚನ ಹುಟ್ಟಿ ಇಷ್ಟಿಷ್ಟೆ ತೊಟ್ಟಿಕ್ಕಿ ಕಡಲಂತೆ ಹರಿವ ಗಂಗೆಯಾಗಬೇಕು
ಲೋಕದ ಪಾತಕ ಕಳೆವುದಕ್ಕೊಂದೆ ದಾರಿ ಕೂಡಬೇಕು ಕಳೆಯದಂತೆ ಕೂಡಬೇಕು
ತಡ ಬೇಡ ಬೇಗ ಬಾ ಧರೆಗೆ ಬೆಂಕಿ ಹಚ್ಚುತ್ತಿದ್ದಾನೆ ದೊರೆ ಇದ್ದಿಲಾಗುವ ಮುನ್ನ ಬಾ.