ಬಿಸಿಲಲಿ ಬಸವಳಿದ ಸಹಚರರ ಸುಟ್ಟ ನೆತ್ತಿ,
ರಕ್ತವೊಸರುವ ನೊಂದ ಪಾದಗಳ ಬಿರುಕು,
ಹುಟ್ಟನೇ ನೆಪಮಾಡಿ, ನೂರಾರು ವರುಷ
ಬಿಸಿಲನೇ ಕುಡಿಸಿ ಬಿಸಿಲನೇ ತಿನ್ನಿಸಿ
ತನ್ನವರನೆಲ್ಲ ನೋವ ಕೂಪಕೆ ದೂಡಿ
ತಾವಷ್ಟೇ ತಿಂದುಂಡು ತೇಗಿ, ಉಟ್ಟು ಮರೆದಾಡಿ
ಗೆರೆ ಎಳೆದು, ನೆರಳ ವಶ ಮಾಡಿಕೊಂಡವರ
ನರಿತನದ ನಡು ಮುರಿದು ನೆರಳನರಸಿ ಹೊರಟ.
ಅವ ನೆಟ್ಟ ಗಿಡ, ಹೆಮ್ಮರವಾಯ್ತು
ಭದ್ರವಾದ ಬೇರು, ಸಹಸ್ರಾರು ಬಿಳಲುಗಳು
ಅರಸಿ ಬಂದ ಬಾಯಿ ಸತ್ತವರಿಗೆ ನೆರಳೋ, ನೆರಳು…
ಬರಿ ನೆರಳಲ್ಲ ಉಸಿರು, ಮಾತು ಕೊಟ್ಟಿತು ಮರ.
ತಲೆ ಎತ್ತಿ ನಡೆವುದ ಕಲಿಸಿದ ಮರದೊಡೆಯ.