ಕವಿತೆ | ಸೃಷ್ಟಿಶೀಲತೆ

ಎಷ್ಟೇ ಮಳೆ ಸುರಿದು
ನೆಲವ ತಂಪು ಮಾಡಿದರೂ
ಈ ನೋವು ಶಮನವಾಗದು
ಪ್ರಸವ ವೇದನೆಯಲ್ಲಿ
ಒಂಬತ್ತು ತಿಂಗಳು ಹೊತ್ತು ಹೆರುವ
ಸಹಜ ಹೆರಿಗೆಯ ನೋವಲ್ಲವಿದು
ಇದು ಬೇರೆ
ಮಳೆಯ ಆರ್ಭಟದೊಡನೆ
ಮುಳುಗುತ್ತಿರುವ ಬದುಕು
ಹುಲು ಮಾನವನ ತಾಕತ್ತೆಷ್ಟೆಂದು
ತೋರುತ್ತಿದೆ
ಬೇಕೋ ಬೇಡವೋ
ಅಂಕೆ ಮೀರಿ ಸುರಿವ ಮಳೆ
ಹೀರಿಕೊಳ್ಳುವ ನೆಲದ ಪಾತ್ರಕ್ಕಷ್ಟೇ
ಗೆಳೆಯ
ಒಂಟಿತನ ಕಾಡುವ ಈ ನೋವಿಗೆ
ತಾಯಿ ಮಡಿಲಿನ ಪ್ರೇಮ ಬೇಕು
ಮಳೆಯಂತೆ ದುಗುಡ ಕಳೆದು
ಹಗುರಾಗಲು
ತಾಯಿ ಮಡಿಲಿಲ್ಲದಿದ್ದರೇನಂತೆ
ನಮ್ಮೊಡಲೊಳಗೇ ಹೃದಯ ಕವಾಟದೊಳಗೇ
ನಮಗೆ ನಾವೇ ಒಂದು
ಮಡಿಲು ಸೃಷ್ಟಿ ಮಾಡಬೇಕು
ಕೊನೆಯ ಉಸಿರವರೆಗಿನ
ನೆಮ್ಮದಿಯ ತಾಣಕ್ಕೆ;
ಮೌನ ಉಸಿರಾಡುವ ನಮ್ಮತನದ
ಏಕಾಂತ ಧಾಮಕ್ಕೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.