ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪ್ಪಾ… ಏನಾಯಿತಪ್ಪಾ?

Last Updated 5 ಜುಲೈ 2019, 19:45 IST
ಅಕ್ಷರ ಗಾತ್ರ

ಸಿಎಮ್ಮು ಗೊರಕೆ ಹೊಡೆಯುತ್ತಿದ್ದರು. ಯಾವುದೋ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲ್ಲ. ನಗರದ ಫೈವ್ ಸ್ಟಾರ್ ಹೋಟೆಲಲ್ಲಂತೂ ಖಂಡಿತ ಅಲ್ಲ. ಹಾಗಾದರೆ ಸ್ವಂತ ಮನೆಯಲ್ಲಿರಬೇಕು ಅಂದುಕೊಂಡಿರಾ? ಅಲ್ಲೂ ಅಲ್ಲ. ಸಾಹೇಬ್ರು ಅಮೆರಿಕದ ಹೋಟೆಲೊಂದರಲ್ಲಿ ‘ವಾಸ್ತವ್ಯ’ ಹೂಡಿದ್ದರು.

ಮಧ್ಯರಾತ್ರಿ ಹೊತ್ತು. ಇದ್ದಕ್ಕಿದ್ದ ಹಾಗೆ ಮೊಬೈಲ್ ಒಂದೇ ಸಮನೆ ರಿಂಗಣಿಸತೊಡಗಿತು. ಎದ್ದು ಫೋನ್ ನೋಡಿದರೆ ಅಪ್ಪನ ಕಾಲ್. ಅವರಿಬ್ಬರ ನಡುವಿನ ಮುಂದಿನ ಸಂಭಾಷಣೆಯನ್ನು ನೀವೇ ಕೇಳಿ… ಕ್ಷಮಿಸಿ ಓದಿ.

‘ಅಪ್ಪಾ… ಏನಾಯಿತಪ್ಪಾ?’

‘ಮಧ್ಯಾಹ್ನದ ಹೊತ್ತು ಫೋನ್ ಮಾಡಬೇಡಿ ಅಂತ ನೀನೇನೋ ಹೇಳಿ ಹೋಗಿದ್ದೀಯಪ್ಪಾ… ಆದರೆ ಇಲ್ಲೀಗ ತುರ್ತು ಪರಿಸ್ಥಿತಿ ಬಂದಿರುವುದನ್ನು ನಿನಗೆ ತುರ್ತಾಗಿ ಹೇಳದೆ ಬೇರೆ ವಿಧಿಯಿಲ್ಲ’.

‘ಹೌದಾ?! ನನಗೆ ಮೊದಲೇ ಗೊತ್ತಿತ್ತು. ಈ ಬಾರಿ ಪ್ರಧಾನಿ ತುರ್ತು ಪರಿಸ್ಥಿತಿ ತಂದೇ ತರುತ್ತಾರಂತ’!

‘ಅಯ್ಯೋ ರಾಮ! ಎಮರ್ಜೆನ್ಸಿ ಅಲ್ಲ ಮಗನೇ… ಇಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರ ವಿಕೆಟ್ ಬಿದ್ದು ಪರಿಸ್ಥಿತಿ ತುಂಬಾ ಬಿಗಡಾಯಿಸಿಬಿಟ್ಟಿದೆ’!

‘ಓಹೋಹೋ… ಹಾಗೋ… ಮಾಜಿ ಸಿಎಮ್ಮಯ್ಯರು ಫೀಲ್ಡ್‌ಗೆ ಇಳಿದಿಲ್ಲವೇ?’

‘ಅವರು ಯಾರ ಪರ ಬ್ಯಾಟಿಂಗ್ ಮಾಡ್ತಿದ್ದಾರೆ ಅಂತ ಗೊತ್ತಾಗ್ತಿಲ್ಲಪ್ಪಾ. ಆದರೆ ರಾಜೀನಾಮೆಯನ್ನು ವಾಪಸ್ ಪಡೆಯುವಂತೆ ಅವರ ಮನವೊಲಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ಎಂದು ಕೈಗಮಾಂಡರು ಅವರಿಗೆ ಅಪ್ಪಣೆ ಮಾಡಿದ್ದಾರಂತೆ’.

‘ರಾಜೀನಾಮೆ ಪತ್ರಗಳನ್ನು ವಾಪಸ್ ಪಡೆಯುವಂತೆ ಮಾಡುವುದು ದೊಡ್ಡ ಸಂಗತಿಯಲ್ಲ ಬಿಡಿ…’

‘ಅಲ್ಲಪ್ಪಾ, ಇನ್ನೂ ಕೆಲವರು ರಾಜೀನಾಮೆ ಕೊಡುವ ಸಾಧ್ಯತೆಗಳಿವೆ’.

‘ನೀವು ಜಾಸ್ತಿ ತಲೆಕೆಡಿಸಿಕೊಳ್ಳಬೇಡಿ. ನಮ್ಮ ಡಿಕೆಸಿವಾಗೆ ಎಲ್ಲಾ ಹೇಳಿ ಬಂದಿದ್ದೇನೆ’.

‘ಆದ್ರೆ ಅವರು ಬಾಜಪ್ಪ ಮುಖಂಡರ ಕಾಲು ಹಿಡಿಯೋಕೆ ಹೋಗಿದ್ದಾರಲ್ಲ!’

‘ನೀವೇನೋ ತಪ್ಪು ತಿಳ್ಕೊಂಡಿರಬೇಕಪ್ಪಾ. ಅವರು ತಮ್ಮ ಮಾಜಿ ಗುರುವನ್ನು ಭೇಟಿಯಾಗಲಿದ್ದೇನೆ ಅಂತಿದ್ರಪ್ಪಾ’.

‘ಈ ರಾಜೀನಾಮೆಗಳಿಗೆ ಬಾಜಪ್ಪರನ್ನು ದೂರುವುದು ಸರಿಯಲ್ಲ. ಸರ್ಕಾರವನ್ನು ಅಸ್ಥಿರಗೊಳಿಸುವ ಯಾವುದೇ ಉದ್ದೇಶ ಪ್ರಧಾನ ಮಂತ್ರಿಗಾಗಲಿ, ಬಾಜಪ ರಾಷ್ಟ್ರಾಧ್ಯಕ್ಷರಿಗಾಗಲಿ ಇಲ್ಲ’.

‘ಅರೆರೆ! ಏನಪ್ಪಾ… ಏನು ಹೇಳ್ತಿದ್ದೀರಾ?’

‘ನಾನಲ್ಲಪ್ಪಾ ಹೇಳ್ತಿರೋದು…’

‘ಓಹ್! ಆಡಿಯೋರಪ್ಪ ಅವರ ಹೇಳಿಕೆನಾ?’

‘ಅಲ್ಲ, ಅದು ನಮ್ಮವರೇ ಆದ ಶಿಕ್ಷಣ ಮಂತ್ರಿ ಮಹೋದಯರ ಹೇಳಿಕೆ ಕಣೋ!’

‘ಹಾಗೋ! ನಾಳೆ ಅವರನ್ನ ಮನೆಗೆ ಕರೆಸಿ, ಇನ್ನು ಮುಂದೆ ಪಕ್ಷವಿರೋಧಿ ಹೇಳಿಕೆಗಳನ್ನು ಕೊಡುವುದಿಲ್ಲ ಅಂತ ಸಾವಿರ ಸಲ ಬರೆಯಿಸಿ’.

‘ಒಟ್ಟಾರೆ ಬಾಜಪ್ಪರಿಗೆ ಎಷ್ಟು ಹುಮ್ಮಸ್ಸು ಬಂದಿದೆಯೆಂದರೆ, ಆಗಲೇ ಸಚಿವಾಕಾಂಕ್ಷಿಗಳು ಹುಟ್ಟಿಕೊಂಡು, ಆಡಿಯೋರಪ್ಪರ ಬೆನ್ನು ಬಿದ್ದಿದ್ದಾರಂತೆ. ಅಷ್ಟೇ ಅಲ್ಲ, ಈ ಬಾರಿ ಆಗಸ್ಟ್ 15ರಂದು ಅವರ ಪಕ್ಷದ ಮುಖ್ಯಮಂತ್ರಿಯೇ ಧ್ವಜಾರೋಹಣ ಮಾಡುವುದಂತೆ’!

‘ಹೇಳಕ್ಕಾಗಲ್ಲಪ್ಪಾ… ಅವರ ಕಸರತ್ತು ಹೀಗೇ ಮುಂದುವರಿದರೆ ಖಂಡಿತವಾಗ್ಲೂ ಅವರೇ ‘ಸ್ವ-ತಂತ್ರ ದಿನಾಚರಣೆ’ ನಡೆಸ್ತಾರೆ!’

‘ನಿಜ, ನಿಜ… ಅವರೀಗ ನಾವೇನೂ ಸನ್ಯಾಸಿಗಳಲ್ಲ ಅನ್ನೋಕೆ ಶುರು ಮಾಡಿದ್ದಾರೆ’.

‘ಅಹ್ಹ...ಹ್ಹಹ್ಹ… ಅವರ ಪಕ್ಷದಲ್ಲಿ ರಾಜಕಾರಣಿಗಳಿಗೂ, ಸನ್ಯಾಸಿಗಳಿಗೂ ವ್ಯತ್ಯಾಸವೇ ಇಲ್ಲ. ಈ ಆಡಿಯೋರಪ್ಪ ಸ್ವಾಮೀಜಿಯಾಗಿದ್ದರೂ ಸುಮ್ಮನಿರುತ್ತಿರಲಿಲ್ಲ’.

‘ಹೌದೌದು… ನಾಳೆ ಆ ಪಕ್ಷದ ಶೆಹನ್ ಶಾ ಮನಸ್ಸು ಮಾಡಿದರೆ ಯಾವುದಾದರೂ ಮಠದ ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಅವರಿಗೆ ಮುಖ್ಯಮಂತ್ರಿ ದೀಕ್ಷೆ ನೀಡಬಹುದು!’

‘ಡ್ಯಾಡ್… ಓಹ್ ಸಾರಿ…ಅಮೆರಿಕದಲ್ಲಿದ್ದರೆ ಇದು ಸಮಸ್ಯೆ…. ಅಪ್ಪಾ, ಲಿಂಬೆಯಣ್ಣ ಏನು ಮಾಡ್ತಿದ್ದಾನೆ?’

‘ನಿಧಾನಸೌಧದ ಮೂಲೆ ಮೂಲೆಯಲ್ಲಿ ಲಿಂಬೆಹಣ್ಣುಗಳನ್ನ ಇಟ್ಟಿದ್ದೀನಿ ಅಂತ ನಿನ್ನೆ ಫೋನ್ ಮಾಡಿದ್ದ’.

‘ನೊ ನೊ… ಅವನ ಲಿಂಬೆಹಣ್ಣುಗಳು ಏನೂ ಕೆಲಸ ಮಾಡುತ್ತಿಲ್ಲಾಂತ ಮೊನ್ನೆ ಚುನಾವಣೆಯಲ್ಲಿ ಸಾಬೀತಾಗಿದೆ. ಈಗ ನನ್ನ ಚಿಂತೆ ಏನೆಂದರೆ, ಒಂದು ವೇಳೆ ನಮ್ಮ ಶೋಷಕರು ಸಾಮೂಹಿಕ ರಾಜೀನಾಮೆ ಕೊಟ್ಟರೆ…?’

‘ನೋಡಪ್ಪಾ, ನೀನೇನೂ ಚಿಂತೆ ಮಾಡ್ಬೇಡ. ಹತ್ತಿಪ್ಪತ್ತು ಶಾಸಕರು ರಾಜೀನಾಮೆ ಕೊಟ್ಟರೆ ನಿಧಾನಸಭೆಯನ್ನು ವಿಸರ್ಜನೆ ಮಾಡಿಬಿಟ್ಟರಾಯಿತು’.

‘ಅಂದರೆ ಮಧ್ಯಂತರ ಚುನಾವಣೆನಾ?’

‘ಹ್ಞೂ ಕಣೋ, ಚುನಾವಣೆಯಲ್ಲಿ ಅವರು ಮಣ್ಣು ಮುಕ್ಕೋದನ್ನು ಸಾಯೋಕ್ ಮುಂಚೆ ಈ ಮಣ್ಣಿನ ಮಗ ನೋಡ್ಬೇಕು!’

‘ಅದು ಸಾಧ್ಯವಿಲ್ಲಪ್ಪಾ! ರಾಜ್ಯದಲ್ಲಿ ಬಾಜಪ್ಪರು 170- 190 ಬಾರಿಸಿಬಿಡುವುದರಲ್ಲಿ ಸಂಶಯವಿಲ್ಲ’.

‘ಅದೇ ಕಣೋ… ಕಾಂಗ್ರೆಸ್ನೋರನ್ನ ಮಣ್ಣು ಮುಕ್ಕಿಸಿದಂತಾಗುತ್ತದೆ ಅಂತ ನಾನು ಹೇಳ್ತಿರೋದು’.

‘ಸರಿಯಪ್ಪಾ, ಫೋನ್ ಇಡ್ತೀನಿ… ನಾಳೆ ಹೂಡಿಕೆ ಸಮಾವೇಶವಿದೆ’.

‘ಸರಿ, ಅದನ್ನ ಚುನಾವಣೆ ಹೂಡಿಕೆ ಸಮಾವೇಶ ಅಂತ ಬದ್ಲಾಯಿಸು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT