ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ದಾರಿಯಲ್ಲಿ ಅಲ್ಲೋಲಕಲ್ಲೋಲ

Last Updated 12 ಆಗಸ್ಟ್ 2019, 7:15 IST
ಅಕ್ಷರ ಗಾತ್ರ

ಕಾಡಿನಲ್ಲಿ ನೆಮ್ಮದಿಯಾಗಿರಬೇಕಾದ ಪ್ರಾಣಿಗಳೇಕೆ ನಾಡಿನತ್ತ ನುಗ್ಗಿ ಬರುತ್ತಿವೆ? ಅಭಿವೃದ್ಧಿಯ ಹೊಡೆತಕ್ಕೆ ಕಂಗಾಲಾದ ಪ್ರಾಣಿಗಳನ್ನು ಕಾಪಾಡಲು ನಮ್ಮ ಸರ್ಕಾರ ಕಂಡುಕೊಂಡಿರುವ ಹೊಸ ದಾರಿಗಳು ಎಷ್ಟರಮಟ್ಟಿಗೆ ಪರಿಣಾಮಕಾರಿ? ಈ ಪ್ರಶ್ನೆಗಳು ನಿಮ್ಮವೂ ಆಗಿದ್ದರೆ ಜನವರಿ 1, 2012

---

‘ಆನೆ ನಡೆದದ್ದೇ ದಾರಿ’ ಎಂಬ ಗಾದೆ ಮಾತಿದೆ. ಅದು ಆನೆಯ ಶಕ್ತಿ ಸಾಮರ್ಥ್ಯಗಳನ್ನು ವಿವರಿಸಲು ಬಳಸುವ ನುಡಿಗಟ್ಟು. ಆದರೆ ಆನೆಗಳಿಗೆ ಈ ಅಹಂಕಾರವಿಲ್ಲ. ಅವು ಯಾವತ್ತೂ ಶಿಸ್ತಿನಿಂದ, ಶತಮಾನಗಳಷ್ಟು ಕಾಲದಿಂದ ತಮ್ಮ ಪೂರ್ವಜರು ಸಂಚರಿಸುತ್ತಿದ್ದ ದಾರಿಯಲ್ಲೇ ಓಡಾಡುವುದು. ಪಶ್ಚಿಮಘಟ್ಟಗಳಲ್ಲೂ ‘ಆನೆದಾರಿ’ಗಳಿವೆ. ಆದರೆ ಈಗ ಅಲ್ಲಿ ಮನುಷ್ಯ ಹಲವು ಬಗೆಯಲ್ಲಿ ಅಡ್ಡ ನಿಂತಿದ್ದಾನೆ. ಆದ್ದರಿಂದಲೇ ತಮ್ಮ ನೆಲೆಯಿಂದ ಕದಲಿ ಹೋಗಿರುವ ಆನೆಗಳು ಮಾತ್ರವಲ್ಲ ಅನೇಕ ಕಾಡು ಪ್ರಾಣಿಗಳು ಸಹ ಇಂದು ಎಲ್ಲೆಂದರಲ್ಲಿ ಜನವಸತಿಗಳತ್ತ ನುಗ್ಗಿ ಬರುತ್ತಿವೆ. ದೇಶದೆಲ್ಲೆಡೆ ಕಂಡುಬರುತ್ತಿರುವ ವಿದ್ಯಮಾನವಿದು.

ಆನೆದಾರಿ ನಾಶವಾಗುವ ಪ್ರಕ್ರಿಯೆಗೆ ದೊಡ್ಡ ಇತಿಹಾಸವಿದೆ. ಆದರೆ ಆನೆಗಳೂ ಸೇರಿದಂತೆ ಕಾಡು ಪ್ರಾಣಿಗಳೆಲ್ಲಾ ಜನವಸತಿ ಪ್ರದೇಶಕ್ಕೆ ಅಸಾಧಾರಣ ಪ್ರಮಾಣದಲ್ಲಿ ನುಗ್ಗುತ್ತಿರುವುದು ಮಾತ್ರ ಇತ್ತೀಚಿನ ವಿದ್ಯಮಾನ. ಹಾಸನ ಜಿಲ್ಲೆಯೊಂದರಲ್ಲಿ ಆನೆಗಳಿಗೆ ಬಲಿಯಾದ ಮನುಷ್ಯರ ಸಂಖ್ಯೆ ಮೂವತ್ತು ದಾಟುತ್ತದೆ. ಸಹಜವಾಗಿಯೇ ಇದು ಜನರನ್ನು ರೊಚ್ಚಿಗೆಬ್ಬಿಸಿತು. ಅವರು ಪ್ರತಿಭಟನೆಗೆ ಮುಂದಾದರು. ಅಲ್ಲಿಯ ತನಕ ಸುಮ್ಮನಿದ್ದ ಸರ್ಕಾರ ಈಗ ಒಮ್ಮೆಗೇ ಪರಿಸರ ಪ್ರಜ್ಞೆಯನ್ನು ಆವಾಹಿಸಿಕೊಂಡು ಆನೆದಾರಿಯನ್ನು ನಿರ್ಮಿಸುವ ಯೋಜನೆಯನ್ನು ಜನರ ಮುಂದಿಟ್ಟಿವೆ. ಆನೆದಾರಿ ನಿರ್ಮಾಣವೆಂದರೆ, ಆನೆಗಳು ಪರಂಪರಾಗತವಾಗಿ ಬಳಸುತ್ತಿರುವ ಆನೆದಾರಿಗಳನ್ನು ಮತ್ತೆ ಅವುಗಳಿಗೆ ಮುಕ್ತಗೊಳಿಸುವುದಲ್ಲ. ಬದಲಿಗೆ ಹೊಸ ದಾರಿಗಳನ್ನು (elephant corridor) ನಿರ್ಮಿಸುವುದು. ಹೀಗೆ ಸರ್ಕಾರ ನಿರ್ಮಿಸಿದ ದಾರಿಗಳನ್ನು ಕಾಡಾನೆಗಳೇಕೆ ಆರಿಸಿಕೊಳ್ಳಬೇಕು? ಈ ಪ್ರಶ್ನೆಗೆ ಈ ಹೊತ್ತಿನ ತನಕ ಯಾವ ಸಚಿವರೂ ಉತ್ತರಿಸಿಲ್ಲ.

ಸಂಘರ್ಷ ಮತ್ತು ಸಂಬಂಧಗಳ ಸ್ವರೂಪ

ಹಾಸನ, ಕೊಡಗು ಜಿಲ್ಲೆಗಳಲ್ಲಿರುವ ಆನೆ ಉಪಟಳವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಸ್ವಲ್ಪ ಹಿಂದಕ್ಕೆ ಹೋಗಬೇಕು. ಈ ಪ್ರದೇಶದಲ್ಲಿ ಕಾಡಾನೆಗಳು ಮತ್ತು ಮನುಷ್ಯರ ಮಧ್ಯೆ ಸಂಬಂಧವಿತ್ತು. ಅದು ಸಂಘರ್ಷದ ಸ್ವರೂಪ ಪಡೆದುಕೊಂಡದ್ದಕ್ಕೆ ಇರುವ ಇತಿಹಾಸ ಕೇವಲ ಒಂದೂವರೆ ದಶಕಗಳದ್ದು. ಈ ರೀತಿ ಉಪಟಳ ನೀಡುವ ಆನೆಗಳಲ್ಲಿ ಎರಡು ವಿಧಗಳಿವೆ. ಮೊದಲನೆಯವು ಹೆಚ್ಚು ತೊಂದರೆ ಕೊಡುವ ಮತ್ತು ಯಾವಾಗಲೂ ಜನವಸತಿಗಳ ಪಕ್ಕದಲ್ಲೇ ಇರುವ ಆನೆಗಳ ಗುಂಪು. ಇವು ಬಯಲು ಸೀಮೆಗೂ ದಾಳಿ ಮಾಡುತ್ತವೆ. ಹಗಲು ಹತ್ತಿರದಲ್ಲಿರುವ ಕಾಡಿನಲ್ಲಿ ಆಶ್ರಯ ಪಡೆದು ರಾತ್ರಿವೇಳೆ ಆಹಾರ ಅರಸಿ ಹೊರಡುತ್ತವೆ. ಈ ವಿದ್ಯಮಾನ ನಮ್ಮ ನೀರಾವರಿ ಯೋಜನೆಗಳ ಕೊಡುಗೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ಜಲಾಶಯಗಳ ನಿರ್ಮಾಣವಾದಾಗಲೆಲ್ಲ ಆನೆಗಳ ಆಶ್ರಯತಾಣದ ಕೆಲವು ಪ್ರದೇಶಗಳು ಮುಳುಗಡೆಯಾಗುತ್ತವೆ. ಆನೆಗಳು ಸ್ಥಳಾಂತರಗೊಳ್ಳುತ್ತವೆ.

ಹಾಸನ-ಕೊಡಗಿನ ಗಡಿ ಭಾಗಗಳಲ್ಲಿ, ಹೇಮಾವತಿ ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ಬೀಡು ಬಿಟ್ಟಿರುವ ಆನೆಗಳು ಈ ಬಗೆಯವು. ತಮ್ಮ ಸಹಜನೆಲೆಯನ್ನು ಕಳೆದುಕೊಂಡಿರುವ ಈ ಆನೆಗಳು ಅನಿವಾರ್ಯವಾಗಿ ಹಳ್ಳಿಗಳತ್ತ ಬಂದು, ಸುಲಭದಲ್ಲಿ ಸಿಗುವ ಬೆಳೆಗಳನ್ನು ತಿಂದು ಬದುಕುವುದನ್ನು ಕಲಿತುಬಿಟ್ಟಿವೆ. ಕಾಡಿನಲ್ಲಿ ಅಲೆದು ಆಹಾರ ಸಂಪಾದಿಸುವುದನ್ನು ಸಂಪೂರ್ಣವಾಗಿ ಮರೆತುಬಿಟ್ಟಿರುವ ಇವುಗಳು ತುಂಬಾ ಅಪಾಯಕಾರಿ. ಇವು ಸಾಮಾನ್ಯವಾಗಿ ರಾತ್ರಿವೇಳೆ ಬೆಳೆ ತಿಂದು-ನಾಶಮಾಡಿ ಬೆಳಗಿನ ಜಾವ ತಮ್ಮ ಅಡಗುತಾಣ ಸೇರುತ್ತವೆ. (ಒಂದು ಕಾಡಾನೆ ತನ್ನ ಆಹಾರಕ್ಕಾಗಿ ಅರಣ್ಯದಲ್ಲಿ ದಿನವೊಂದಕ್ಕೆ ಹತ್ತು ಹದಿನೈದು ಕಿ.ಮೀ.ಗಳಷ್ಟು ಸಂಚರಿಸುತ್ತದೆ, ಅಷ್ಟು ವಿಸ್ತಾರವಾದ ಪ್ರದೇಶ ಈ ಅಡಗುತಾಣಗಳಲ್ಲಿ ಇಲ್ಲ).

ಮುಂಜಾನೆ ಸ್ವಸ್ಥಾನ ಸೇರುವ ತವಕದಲ್ಲಿರುವಾಗ ಅಡ್ಡ ಸಿಕ್ಕಿದ ಪ್ರಾಣಿ ಅಥವಾ ಮನುಷ್ಯರ ಮೇಲೆ ದಾಳಿ ನಡೆಸುತ್ತವೆ. ಯಂತ್ರೋಪಕರಣಗಳನ್ನೂ ಹಾಳುಗೆಡವುತ್ತವೆ. ಆ ಹೊತ್ತಿನಲ್ಲಿ ಹೊಲಗಳತ್ತ ಹೊರಟ ರೈತ- ಕಾರ್ಮಿಕರೇ ಹೆಚ್ಚಾಗಿ ಇಂಥ ಆನೆಗಳಿಂದ ದಾಳಿಗೊಳಗಾಗಿದ್ದಾರೆ. ಕಾಡಿಗೆ ಅಟ್ಟಿದರೂ ಮರಳಿ ಬರುವ ಇಂತಹ ಆನೆಗಳನ್ನು ಪುಂಡಾನೆಗಳೆಂದು ಕರೆಯತ್ತಾರೆ. ಇತ್ತೀಚೆಗೆ ಮೈಸೂರು ನಗರಕ್ಕೆ ಬಂದು ಹಾವಳಿ ಮಾಡಿದ್ದೂ ಇಂತಹ ಪುಂಡಾನೆಯೇ. ಇಂಥ ಆನೆಗಳನ್ನು ಹಿಡಿದು ಆನೆಧಾಮಗಳನ್ನು ನಿರ್ಮಿಸಿ ಅಲ್ಲಿಗೆ ಸಾಗಿಸುವುದೊಂದೇ ಪರಿಹಾರದ ದಾರಿ.

ಎರಡನೇ ವಿಧದ ಆನೆಗಳು ಈ ರೀತಿಯವಲ್ಲ. ಅಪರೂಪಕ್ಕೊಮ್ಮೆ ದಟ್ಟ ಅರಣ್ಯಗಳಿಂದ ಹೊರಬಂದು ಹೊಟ್ಟೆ ತುಂಬಿಸಿಕೊಂಡು ಹಿಂದಿರುಗುವ ಇವುಗಳಿಗೆ ಬಾಳೆ-ಬೈನೆಗಳಂತಹ ಸಸ್ಯಗಳೇ ಸುಲಭದ ತುತ್ತು. ಇವುಗಳು ಇತರೆ ಬೆಳೆಗಳನ್ನು ನಾಶ ಮಾಡುವುದು ಕಡಿಮೆ. ಹೆಚ್ಚಿನ ಸಂದರ್ಭಗಳಲ್ಲಿವು ದಾರಿತಪ್ಪಿಬರುವ ಆನೆಗಳು. ಸಾಮಾನ್ಯ ಪರಿಸ್ಥಿತಿಯಲ್ಲಿ ಇಂತಹ ಆನೆಗಳು ನೇರವಾಗಿ ಮನುಷ್ಯನನ್ನೇ ಗುರಿಯಾಗಿಸಿ ದಾಳಿ ಮಾಡುವುದಿಲ್ಲ.

ಕೆಲವು ಬಾರಿ ಇವುಗಳನ್ನು ಓಡಿಸಲೆಂದು ಮಾಡಿದ ಗಲಾಟೆಯಿಂದ ಸಿಟ್ಟಿಗೆದ್ದು ಅಥವಾ ಇವುಗಳನ್ನು ಗಾಯಗೊಳಿಸಿದ ಸಂದರ್ಭಗಳಲ್ಲಿ ರೊಚ್ಚಿಗೆದ್ದು ದಾಳಿ ಮಾಡಿವೆ. ಇತ್ತೀಚೆಗೆ ಮಾತ್ರ ಕೇವಲ ಪುಂಡಾನೆಗಳಲ್ಲದೆ ಕಾಡಾನೆಗಳೂ ಸಹ ಹಿಂಡುಹಿಂಡಾಗಿ ಬಂದು ಎಕರೆಗಟ್ಟಲೆ ಭತ್ತ, ಕಬ್ಬು ಮುಂತಾದಬೆಳೆಗಳನ್ನೂ, ಕಾಫಿ-ಅಡಿಕೆ ತೋಟಗಳನ್ನೂ ನಾಶಮಾಡಿವೆ.

ಆನೆಗಳಿಂದ ಅನೇಕ ರೀತಿಯ ತೊಂದರೆಗೊಳಗಾಗಿದ್ದರೂ, ಸಾಮಾನ್ಯ ರೈತರಿಗೆ ಆನೆಗಳ ಬಗ್ಗೆ ಸಿಟ್ಟಾಗಲೀ ದ್ವೇಷವಾಗಲೀ ಇಲ್ಲ. ಕೆಲವರು ದುಷ್ಕರ್ಮಿಗಳೋ, ದಂತ ಚೋರರೋ ಆನೆಗಳನ್ನು ಕೊಂದಿದ್ದಾರೆ. ಆದರೆ, ರೈತರು ಆನೆಗಳನ್ನು ಕೊಂದಿರುವ ಪ್ರಕರಣಗಳು ಕಡಿಮೆ. ಇದಕ್ಕೆ ಸ್ವಲ್ಪ ಮಟ್ಟಿಗೆ ಧಾರ್ಮಿಕ ಭಾವನೆಗಳು ಹಾಗೂ ಕಾನೂನಿನ ಭಯ ಕಾರಣವಾಗಿದೆ.

ಎರಡನೇ ರೀತಿಯ ಆನೆಗಳು ಅನೇಕ ವರ್ಷಗಳಿಂದಲೂ ಅರಣ್ಯದ ಅಂಚಿನ ಹಳ್ಳಿಗಳಿಗೆ ಬಂದು ಹೋಗುವುದು ಮಾಮೂಲಾದ ಸಂಗತಿಯಾಗಿತ್ತು. ಮಲೆನಾಡಿನ ಜನ ಈ ರೀತಿಯ ಆನೆಯೊಂದೇ ಅಲ್ಲ ಅನೇಕ ಕಾಡುಪ್ರಾಣಿಗಳ ಜೊತೆಗೂ ಸಹಬಾಳ್ವೆ ಸಾಧಿಸಿಕೊಂಡಿದ್ದರು. ಇಂದು ರಕ್ಷಿತಾರಣ್ಯವಾಗಿರುವ ಸಕಲೇಶಪುರ, ಮೂಡಿಗೆರೆ, ಸೋಮವಾರಪೇಟೆ ತಾಲ್ಲೂಕುಗಳ ದಟ್ಟ ಅರಣ್ಯ ಪ್ರದೇಶದ ಭಾಗಗಳಲ್ಲಿ ಕೂಡಾ ಜನವಸತಿಗಳಿದ್ದವು. ಈ ಪ್ರದೇಶಗಳ ಚಂದ್ರಮಂಡಲ, ಮಣಿಭಿತ್ತಿ, ಅರಮನೆಗದ್ದೆ, ಕಬ್ಬಿನಾಲೆ, ಇಟ್ಟಿಗೆ ಗೂಡು ಮುಂತಾದ ಸ್ಥಳಗಳಿಗೆ ಹೋಗಿ ನೋಡಿದರೆ ಅಥವಾ ಇಂದು ಕೂಡಾ ಜನವಸತಿಯಿರುವ ಮಂಜನಹಳ್ಳ, ಕುಮಾರಳ್ಳಿ, ಹೊಡಚಳ್ಳಿ, ಅತ್ತಿಹಳ್ಳಿ, ಜಗ್ಗಾಟ ಮುಂತಾದ ಪ್ರದೇಶಗಳ ಜನರನ್ನು ಭೇಟಿಮಾಡಿದರೆ ಈ ವಿಷಯ ತಿಳಿಯುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಆನೆಗಳು ಮಾತ್ರವಲ್ಲ ಎಲ್ಲ ಕಾಡು ಪ್ರಾಣಿಗಳ ಬದುಕಿನ ವಿನ್ಯಾಸವೇ ಕಲಕಿಹೋಗಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಆನೆ ನೀರು ಕುಡಿಯುತ್ತಿರುವ ದೃಶ್ಯ -ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಆನೆ ನೀರು ಕುಡಿಯುತ್ತಿರುವ ದೃಶ್ಯ -ಪ್ರಜಾವಾಣಿ ಚಿತ್ರ: ಎಂ.ಎಸ್.ಮಂಜುನಾಥ್

ಘಟ್ಟ ಪ್ರದೇಶಗಳಲ್ಲಿ ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಚಟುವಟಿಕೆಗಳು ಮನುಷ್ಯನನ್ನೂ ಬದಲಿಸಿಬಿಟ್ಟಿವೆ.

ಅರಣ್ಯದ ನಡುವೆ ಸಾಗಿಹೋಗುತ್ತಿರುವ, ನಾಗರಿಕತೆಯ ರಕ್ತನಾಳವಾಗಿರುವ ರೈಲ್ವೇ ಹಳಿಗಳ ಮೇಲೆ ಹಗಲೂ ರಾತ್ರಿ ಗೂಡ್ಸ್ ರೈಲುಗಳು ಆರ್ಭಟಿಸುತ್ತಿವೆ. ಘಟ್ಟ ಪ್ರದೇಶವನ್ನು ಸೀಳಿಕೊಂಡು ಸಾಗಿರುವ ಹೆದ್ದಾರಿಗಳಲ್ಲಿ ಸಾವಿರಗಳ ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಇದೀಗ ಹಲವು ಜಲವಿದ್ಯುತ್ ಯೋಜನೆಗಳು ದಟ್ಟ ಅರಣ್ಯದ ನಡುವೆಯೇ ಬಂದು ಕುಳಿತಿವೆ. ಅವುಗಳಿಗಾಗಿ ರಸ್ತೆ ಮಾಡಲು, ಸುರಂಗ ಕೊರೆಯಲು ದಿನವಿಡೀ ಬಂಡೆಗಳನ್ನು ಸಿಡಿಸುತ್ತಿದ್ದಾರೆ. ಅದರ ಸದ್ದಿಗೆ ವನ್ಯಜೀವಿಗಳೆಲ್ಲ ದಿಕ್ಕಾಪಾಲಾಗಿ ಹೋಗಿವೆ.
ಪರಂಪರಾಗತ ಆನೆದಾರಿಗಳು ತುಂಡರಿಸಿಹೋಗಿವೆ. ಇಷ್ಟೆಲ್ಲ ಸಮಸ್ಯೆಗಳಿಗೆ ಅನಾಹುತಗಳಿಗೆ, ಮಲೆನಾಡಿನಲ್ಲಿ ವ್ಯಾಪಕವಾಗಿ ತಲೆಯತ್ತಿರುವ ರೆಸಾರ್ಟು ಹಾಗೂ ಹೋಂ-ಸ್ಟೇಗಳು ನೀಡುತ್ತಿರುವ ಕೊಡುಗೆಯೂ ಸಣ್ಣದೇನಲ್ಲ. ಇವುಗಳಿಂದಾಗಿ ಅರಣ್ಯ ಪ್ರದೇಶಗಳೊಳಗೆ ವ್ಯಾಪಕ ಜನಸಂಚಾರ, ವಾಹನಸಂಚಾರ ಹೆಚ್ಚಿರುವುದು ಮಾತ್ರವಲ್ಲ, ಕೆಲವೊಮ್ಮೆ ಮೋಟಾರ್ ರ‌್ಯಾಲಿಗಳು ಕೂಡಾ ಈ ಪ್ರದೇಶದಲ್ಲಿ ನಡೆಯುತ್ತವೆ. ಗಾಂಜಾ ಬೆಳೆ ಮತ್ತು ಕಳ್ಳನಾಟಾ ದಂಧೆಯಂತಹ ಕಾನೂನುಬಾಹಿರ ಕೃತ್ಯಗಳು ಕೂಡಾ ಪಶ್ಚಿಮಘಟ್ಟ ಪ್ರದೇಶದಲ್ಲಿ ವನ್ಯಜೀವಿಗಳಿಗೆ ತೊಂದರೆಯನ್ನುಂಟುಮಾಡಿವೆ. ಈ ತೊಂದರೆಗಳು ಹೊಸ ಬಗೆಯ ಪುಂಡಾನೆಗಳನ್ನು ಸೃಷ್ಟಿಸುತ್ತಿವೆ. ಇವುಗಳನ್ನು ಇರುವಲ್ಲಿಯೇ ಇರಲು ಬಿಟ್ಟಿದ್ದರೆ ಯಾವ ಕಾರಣಕ್ಕೂ ಇವು ಮನುಷ್ಯನ ಸುದ್ದಿಗೆ ಬರುತ್ತಿರಲಿಲ್ಲ. ಈಗ ಅವುಗಳ ಸ್ಥಳಕ್ಕೆ ನಾಗರಿಕ ಜಗತ್ತು ಲಗ್ಗೆ ಇಟ್ಟಿರುವುದರಿಂದ ಅವುಗಳಿಗೆ ಮನುಷ್ಯನೊಂದಿಗೆ ಸೆಣಸದೆ ವಿಧಿ ಇಲ್ಲ ಎಂಬ ಸ್ಥಿತಿ ಉದ್ಭವವಾಗಿದೆ.

ಸಮಸ್ಯೆಯ ಸಂಕೀರ್ಣ ಸ್ವರೂಪವನ್ನೇ ಅರ್ಥ ಮಾಡಿಕೊಳ್ಳದೆ `ಆನೆದಾರಿಗಳಲ್ಲಿ ಕೃಷಿ ಮಾಡಿಕೊಂಡಿರುವ ರೈತರನ್ನೆಲ್ಲ ಪರಿಹಾರ ನೀಡಿ ಸ್ಥಳಾಂತರಿಸಿ ತೆರವುಗೊಳಿಸುತ್ತೇವೆ~ ಎನ್ನುವ ಮಾತೇ ದಾರಿತಪ್ಪಿಸುವಂಥದ್ದು. ಸರ್ಕಾರ ನಿರ್ಮಾಣ ಮಾಡಲು ಬಯಸುವ ಆನೆದಾರಿ ಅವುಗಳ ಪರಂಪರಾಗತ ಮಾರ್ಗದಲ್ಲಿ ಇಲ್ಲ, ಬದಲಿಗೆ ಹೊಸರಸ್ತೆ ನಿರ್ಮಾಣದಂತೆ ಭಾವಿಸಿ ಅವೈಜ್ಞಾನಿಕವಾಗಿ ಮಾಡಲಿರುವ ಹೊಸ ಆನೆದಾರಿಗಳಿವು.

ನಿಜಸಂಗತಿಯೆಂದರೆ ಹೆಚ್ಚಿನ ಹಳೆಯ ಆನೆ ದಾರಿಗಳಲ್ಲಿ ಯಾರೂ ಕೃಷಿ ಮಾಡಿಕೊಂಡಿಲ್ಲ. ಆನೆದಾರಿಗಳನ್ನು ತುಂಡರಿಸಿರುವುದು ನಮ್ಮ ಅಭಿವೃದ್ಧಿ ಯೋಜನೆಗಳೇ. ಕೃಷಿಕರು ನೆಲೆಸಿದ್ದ ಒಂದೆರಡು ಆನೆದಾರಿಗಳಲ್ಲಿ ಕೂಡಾ ಆನೆಗಳು ಉಪಟಳ ಕೊಟ್ಟಿದ್ದಿಲ್ಲ.

ಸಾಮಾನ್ಯವಾಗಿ ವರ್ಷಕ್ಕೆರಡು ಬಾರಿ ಅವು ಅಲ್ಲಿ ಹಾದು ಹೋಗುತ್ತಿದ್ದವು. ಆಗೆಲ್ಲ ಒಂದೆರಡು ಬಾಳೆಯನ್ನೋ ಬೈನೆಯನ್ನೋ ಮುರಿದು ತಿಂದಿರುತ್ತಿದ್ದವು. ಆನೆ ಬಂದು ಹೋದದ್ದೇ ಮಹಾಪ್ರಸಾದವೆಂದು ರೈತರು ನಂಬಿ ನಡೆದು ಸಹಬಾಳ್ವೆ ಸಾಧಿಸಿದ್ದರು. ಆದರೆ ಈಗ ಅಭಿವೃದ್ಧಿಯ ಹೆಸರಿನಲ್ಲಿ ನಾಶ ಮಾಡಿದ ಆನೆದಾರಿಗಳಿಗೆ ಬದಲಾಗಿ ಇನ್ನೆಲ್ಲೋ ದಾರಿ ನಿರ್ಮಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಇದು ಆನೆ ದಾರಿ ನಿರ್ಮಿಸುತ್ತೇವೆಂದು ಅರಣ್ಯದ ಅಂಚಿನಲ್ಲಿರುವ ಕೃಷಿಕರನ್ನು ಹೊರದಬ್ಬಿ ಮತ್ತಷ್ಟು ಅಭಿವೃದ್ಧಿಗಾಗಿ ಜಲವಿದ್ಯುತ್ ಕಂಪನಿಗಳಿಗೆ ಭೂಮಿನೀಡುವ ಹುನ್ನಾರದ ಭಾಗವಷ್ಟೇ ಆಗಿದೆ.

ಆನೆದಾರಿಯಲ್ಲಿ ಕವಲೊಡೆದ ರೈತರು

ಆನೆದಾರಿಗಾಗಿ ತಮ್ಮ ಜಮೀನನ್ನು ಬಿಟ್ಟುಕೊಡಲು ಅನೇಕ ರೈತರು ಸಿದ್ಧರಿದ್ದಾರೆಂದು ಸ್ಥಳ ಪರಿಶೀಲನೆ ನಡೆಸಿದ ರಾಜ್ಯದ ಸಚಿವರು ಹೇಳಿದ್ದಾರೆ. ಆನೆದಾರಿಯೇನು ವಿದ್ಯುತ್ ಯೋಜನೆಯಿರಲಿ, ಗಣಿಗಾರಿಕೆಯಿರಲಿ, ಯಾವುದೇ ಉದ್ಯಮಕ್ಕಾದರೂ ಸರಿ ದೇಶದ ಪ್ರಗತಿಯನ್ನು ಬಯಸುವ ಆಭಿವೃದ್ಧಿಪರ ರೈತರು ತಮ್ಮ ಜಮೀನನ್ನು ಬಿಟ್ಟು ಕೊಡಲು ತಯಾರಿದ್ದಾರೆಂಬ ಹೇಳಿಕೆಯನ್ನು ಅಧಿಕಾರದಲ್ಲಿರುವ ಪ್ರತಿಯೊಂದು ಸರ್ಕಾರವೂ (ಪಕ್ಷಭೇದವಿಲ್ಲದೆ) ನೀಡುತ್ತಲೇ ಇರುತ್ತವೆ.

ರೈತರು ತಮ್ಮ ಕಣ್ಣೆದುರೇ ಇರುವ ದುರಂತವನ್ನು ತಿಳಿದೂ ಈ ನಿರ್ಧಾರಕ್ಕೆ ಬರಲು ಅನೇಕ ಕಾರಣಗಳಿವೆ. ಇದು ವ್ಯಾಪಾರೀ ಸಂಸ್ಕೃತಿಯ ಕೊಡುಗೆಯಾದ ಜಾಗತಿಕ ವಿದ್ಯಮಾನ. ಆದರೆ ಈ ವಿಚಾರವನ್ನು ಆನೆದಾರಿ ನಿರ್ಮಾಣದ ಯೋಜನೆಯ ಪ್ರಸ್ತಾಪವಾಗುತ್ತಿರುವ ಘಟ್ಟ ಪ್ರದೇಶಕ್ಕೆ ಮಾತ್ರ ಸೀಮಿತಗೊಳಿಸಿ ಹೇಳುವುದಾದರೆ, ಮುಖ್ಯವಾಗಿ ಅಲ್ಲಿನ ಕೃಷಿಕರು ಹಲವು ರೀತಿಗಳಿಂದ ಬಳಲಿಹೋಗಿದ್ದಾರೆ. ಯಾವ ಕೃಷಿಯೂ ನಿರಂತರ ಲಾಭದಾಯಕವಲ್ಲದೆ ಕೃಷಿಕ ಸಾಲದಲ್ಲಿ ಮುಳುಗಿದ್ದಾನೆ. ಈಗಾಗಲೇ ಹಣದ ಅವಶ್ಯಕತೆಗಳಿಗಾಗಿಯೋ ಇನ್ನಾವುದೇ ಕಾರಣಕ್ಕೋ ತನ್ನ ಜಮೀನಿನಲ್ಲಿದ್ದ ಮರಗಳನ್ನು ಮಾರಾಟ ಮಾಡಿ, ಆ ಜಮೀನು ಕೂಡಾ ಭೂಸವಕಳಿಯಿಂದ ಬರಡಾಗಿದೆ. ಆ ಕಾರಣದಿಂದ ವರ್ಷಕ್ಕೆ ನೂರೈವತ್ತರಿಂದ ಇನ್ನೂರು ಇಂಚುಗಳಷ್ಟು ಮಳೆಯಾಗುವ ಘಟ್ಟ ಪ್ರದೇಶದ ಈ ಭಾಗದಲ್ಲಿರುವ ರೈತ ಇಲ್ಲಿನ ಪಾರಂಪರಿಕ ಬೆಳೆಗಳನ್ನೂ ಬೆಳೆಯಲಾರದ ಸ್ಥಿತಿ ತಲುಪಿದ್ದಾನೆ. ಇವೆಲ್ಲದರ ಜೊತೆ ಕೂಲಿಕಾರ್ಮಿಕರು ಸಿಗದಿರುವುದರಿಂದ ಕೃಷಿಕ ಇನ್ನಷ್ಟು ಸೋತುಹೋಗಿದ್ದಾನೆ.

ಘಟ್ಟಪ್ರದೇಶದ ದುರ್ಗಮ ನೆಲೆಯಲ್ಲಿರುವ ತನ್ನ ಜಮೀನನ್ನು ಮಾರಾಟ ಮಾಡಿ ಹೋಗೋಣವೆಂದರೆ, ಜಮೀನನ್ನು ಕೊಳ್ಳುವವರಿಲ್ಲ. ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುವ ಯಾವುದೇ ಯೋಜನೆ ಅವನಿಗೆ ಹೊಸ ಆಸೆಗಳನ್ನು ತರುತ್ತದೆ.

ರೈತರಲ್ಲಿ ಕೆಲವರ ಮಕ್ಕಳು ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಹಿಡಿದು, ಈಗಾಗಲೇ ಇಲ್ಲಿಂದ ದೂರವಾಗಿದ್ದಾರೆ. ಹೇಗಾದರೂ ಇಲ್ಲಿಂದ ಬಿಡುಗಡೆ ದೊರೆಯಲಿ ಎಂಬ ಹತಾಶ ಸ್ಥಿತಿಯಲ್ಲಿ, ಈ ಎಲ್ಲ ಪರಿಸರ ನಾಶದ ಯೋಜನೆಗಳನ್ನು ಸಮರ್ಥಿಸುತ್ತಿರುವ ಇವರ ದೌರ್ಭಾಗ್ಯವನ್ನು ಅರ್ಥಮಾಡಿಕೊಳ್ಳಬೇಕಿದೆ. ಅವರಿಗೆ ಅತ್ಯಂತ ಹೆಚ್ಚಿನ ಪರಿಹಾರವನ್ನು ಕೊಟ್ಟು ಅವರು ಬೇರೆಡೆಗೆ ಹೋಗಲು ಅನುವು ಮಾಡಿಕೊಡಬೇಕಿದೆ. ಇಲ್ಲಿರುವ ಕೂಲಿ ಕಾರ್ಮಿಕರಲ್ಲಿ ಹೆಚ್ಚಿನವರು ಅಧಿಕ ಕೂಲಿದೊರೆಯುವ ಇತರ ಪ್ರದೇಶಗಳಿಗೋ ನಗರಗಳಿಗೋ ಹೋಗಿದ್ದಾರೆ. ಉಳಿದಿರುವವರು, ಹೊಸ ಯೋಜನೆಗಳೇನಾದರೂ ಬಂದರೆ ಉತ್ತಮ ಕೂಲಿದೊರೆಯುವ ನಿರೀಕ್ಷೆಯಲ್ಲಿದ್ದರೆ, ಸಣ್ಣ ಪುಟ್ಟ ವ್ಯಾಪಾರಿಗಳು ಟೀ ಅಂಗಡಿಗಳವರೂ ಇದೇ ಮನಸ್ಥಿತಿಯಲ್ಲಿದ್ದಾರೆ. ದೂರಗಾಮೀ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಳ್ಳದ, ತಮ್ಮ ಇಂದಿನ ಬದುಕು ಉತ್ತಮಗೊಂಡೀತೆಂಬ ಮನುಷ್ಯ ಸಹಜ ಆಸೆ ಅವರದು.

ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲಾಗದ, ಅಥವಾ ಇನ್ನಿತರ ಯಾವುದೇ ಕಸುಬನ್ನು ಅರಿಯದ ರೈತರೂ ಇದ್ದಾರೆ. ಇವರಿಗೆ ತಾವು ಜಮೀನನ್ನು ಕೊಟ್ಟು ಇಲ್ಲಿಂದ ಹೊರನಡೆದರೆ ಮುಂದೆ ಗತಿಯೇನೆಂಬ ಆತಂಕವಿದೆ. ಅವರಲ್ಲಿ ಕೆಲವರು ಇಲ್ಲಿನ ಜಮೀನನ್ನು ಕೊಟ್ಟು ಹೋಗಲು ನಿರಾಕರಿಸುತ್ತಿದ್ದಾರೆ. ಅಥವಾ ಬೇರೆಕಡೆಯಲ್ಲಿ ಉತ್ತಮ ಜಮೀನು ಸಿಕ್ಕಿದರೆ ಮಾತ್ರ ಇಲ್ಲಿಂದ ಹೊರಡುವ ಯೋಚನೆಯಲ್ಲಿದ್ದಾರೆ. ಆದರೆ ಇದುವರೆಗಿನ ಯಾವುದೇ ಸರ್ಕಾರವೂ ಈ ರೀತಿ ಸ್ಥಳಾಂತರಗೊಂಡ ರೈತರಿಗೆ ಸಮರ್ಪಕವಾಗಿ ಜಮೀನು ನೀಡಿದ ಉದಾಹರಣೆಗಳಿಲ್ಲ. ಜಮೀನಿಗೆ ಬದಲಾಗಿ ನೀಡುವ ಪರಿಹಾರದ ಹಣ ರೈತನ ಕೈ ಸೇರಿದೊಡನೆ ಖರ್ಚಾಗಿ ಹೋಗಲು ನೂರೆಂಟು ದಾರಿಗಳಿವೆ. ಒಂದುವೇಳೆ ರೈತರು ವಿವೇಕಶಾಲಿಗಳಾಗಿ ಜಮೀನು ಕೊಳ್ಳಲು ಹುಡುಕಾಡಿದರೂ ಆ ವೇಳೆಗೆ ಇವರು ಕೊಳ್ಳಬಯಸುವ ಜಮೀನಿನ ಬೆಲೆ ಹಲವುಪಟ್ಟು ಏರಿರುತ್ತದೆ.

ಈಗಾಗಲೇ ಸಾಕಷ್ಟು ಸಮಯ ಕಳೆದು ಹೋಗಿದೆ. ಅಭಿವೃದ್ಧಿ ಯೋಜನೆಗಳ ಪರಿಣಾಮವಾಗಿ ಅಂಡಲೆಯುತ್ತಿರುವ ಕಾಡಾನೆಗಳು ಕೂಡಾ ಈಗ ಪುಂಡಾನೆಗಳಾಗಿ ಪರಿವರ್ತನೆಯಾಗುತ್ತಿವೆ. ಆದರೆ ಸರ್ಕಾರ ಆನೆದಾರಿ ನಿರ್ಮಿಸುತ್ತೇನೆಂದು ಹೇಳುತ್ತಾ ಅರಣ್ಯದ ಅಂಚಿನಲ್ಲಿರುವ ನೂರಾರು ಕೃಷಿಕರ ಜಮೀನನ್ನು ವಶಪಡಿಸಿಕೊಳ್ಳುವ ಮಾತನಾಡುತ್ತಿದೆ. ಇವರಲ್ಲೂ ಸರಿಯಾದ ದಾಖಲೆಗಳಿರುವವರು, ಇಲ್ಲದವರು, ಒತ್ತುವರಿದಾರರು- ಎಲ್ಲರೂ ಇದ್ದಾರೆ. ಅರಣ್ಯ ಭೂಮಿಯಾಗಲೀ ಕಂದಾಯ ಭೂಮಿಯಾಗಲೀ ಒತ್ತುವರಿಯಾಗಿ ಕೃಷಿಗೊಳಪಟ್ಟಿರುವ ವಿದ್ಯಮಾನ ನಾಲ್ಕೈದು ದಶಕಗಳಿಂದ ನಡೆದೇ ಇದೆ. ಆದರೆ ಆಗ ಇರದಿದ್ದ ಆನೆಗಳ ಹಾವಳಿ ಈಗೇಕೆ ಉಲ್ಬಣವಾಗಿದೆಯೆಂಬ ಸರಳ ಸತ್ಯ ಯಾರಿಗಾದರೂ ತಿಳಿಯುವಂತಹದ್ದೇ ಆಗಿದೆ.

ಶ್ರೀಲಂಕಾದ ಮಾದರಿ

ಸರ್ಕಾರ ತುರ್ತಾಗಿ ಪುಂಡಾನೆಗಳಿಗಾಗಿ ಶ್ರಿಲಂಕಾದ ಮಾದರಿಯಲ್ಲಿ ಆನೆಧಾಮ ನಿರ್ಮಿಸಬೇಕು. ಇವು ಸೀಮಿತ ಪ್ರದೇಶದಲ್ಲಿ ಆನೆಗಳಿಗೆ ಆಹಾರವನ್ನೂ ನೀಡುವ ಆಶ್ರಯತಾಣಗಳಾಗಿರುತ್ತವೆ. ಇನ್ನುಳಿದ ಕಾಡಾನೆಗಳಿಗಾಗಿ ನಾವು ಏನನ್ನೂ ಮಾಡಬೇಕಾಗಿಲ್ಲ. ಪಶ್ಚಿಮ ಘಟ್ಟದ ಅರಣ್ಯ ಪದೇಶದಲ್ಲಿ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಿ, ಇಡೀ ಘಟ್ಟ ಪ್ರದೇಶವನ್ನೇ ಸಂರಕ್ಷಿತ ಪ್ರದೇಶವನ್ನಾಗಿಸಿ ಆನೆಗಳು ಮತ್ತು ಇನ್ನಿತರ ಪ್ರಾಣಿಗಳಿಗೆ ಬದುಕಲು ಬಿಡುವುದೊಂದೇ ಪರಿಹಾರ ಮಾರ್ಗ. ಇದು ಪ್ರಾಣಿಗಳ ಉಳಿವಿಗೆ ಮಾತ್ರವಲ್ಲ ಮಹಾ ವೈವಿಧ್ಯದ ತಾಣವಾಗಿರುವ ಇಡೀ ಪಶ್ಚಿಮಘಟ್ಟಗಳ ಮತ್ತು ಆ ಮೂಲಕ ಜೀವಸಂಕುಲದ ಉಳಿವಿಗೆ ಅನಿವಾರ್ಯ.

ಆದರೆ ಸರ್ಕಾರಗಳು ಅಲ್ಲಿನ ಯಾವುದೇ ವಿದ್ಯುತ್ ಯೋಜನೆಯನ್ನಾಗಲಿ, ಇನ್ನಿತರ ಕಾಮಗಾರಿಗಳನ್ನಾಗಲೀ ನಿಲ್ಲಿಸುವ ಮಾತನಾಡುತ್ತಿಲ್ಲ. ಒಂದೊಮ್ಮೆ ಆನೆದಾರಿಯ ನೆಪದಲ್ಲಿ ಸರ್ಕಾರ ರೈತರ ಜಮೀನನ್ನು ವಶಪಡಿಸಿಕೊಂಡರೆ ಆ ನೆಲವೂ ಕೂಡಾ ಈ ಯೋಜನೆಗಳ ಪಾಲಾಗುವ ಸಾಧ್ಯತೆಯಿದೆ. ಇದರಿಂದಾಗಿಯೇ ಕೆಲವು `ಅಭಿವೃದ್ಧಿಪರ~ ಹಿತಾಸಕ್ತಿಗಳು ಪಶ್ಚಿಮ ಘಟ್ಟ ಪ್ರದೇಶವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ವಿರೋಧಿಸುತ್ತಿರುವುದು. ನಮ್ಮ ಶಾಸಕಾಂಗ ಮತ್ತು ನಮ್ಮ ನೀತಿ ನಿರೂಪಕರುಗಳು ಸರಿದಾರಿಗೆ ಬರುವ ತನಕ ಆನೆದಾರಿಯ ಸಮಸ್ಯೆಗೆ ಉತ್ತರ ದೊರೆಯಲಾರದು.

ಕೊನೆಗೂ ಪರಿಸರಾಸಕ್ತರ, ರೈತರ, ಹೋರಾಟಕ್ಕೆ ಸಣ್ಣ ಜಯವೊಂದು ದೊರೆತ ಸುದ್ದಿ ಬಂದಿದೆ. ಜನರ ಒತ್ತಡಕ್ಕೆ ಮಣಿದು ಘಟ್ಟಪ್ರದೇಶದಲ್ಲಿ ಅನಾಹುತ ನಡೆಸಿದ್ದ ಜಲವಿದ್ಯುತ್ ಕಂಪನಿಯೊಂದರ ಕೆಲಸವನ್ನು ಸ್ಥಗಿತಗೊಳಿಸಿ ಸರ್ಕಾರ ಆದೇಶ ನೀಡಿದೆ, ಆದರೆ ಅದಕ್ಕೆ ನೀಡಿದ್ದ ಅನುಮತಿಯನ್ನು ಹಿಂತೆಗೆದುಕೊಂಡಿಲ್ಲ. ಹಾಗೇ ಪುಂಡಾನೆಗಳನ್ನು ಹಿಡಿದು ದೂರದ ಮಧ್ಯಪ್ರದೇಶಕ್ಕೆ ಸಾಗಿಸುವಂತಹ ಅವೈಜ್ಞಾನಿಕ ಕ್ರಮವನ್ನೂ ಹಿಂತೆಗೆದುಕೊಂಡು, ಕಾವೇರಿನದಿಯ ಪಕ್ಕದಲ್ಲೇ ಆಶ್ರಯತಾಣ ನಿರ್ಮಿಸುತ್ತೇವೆಂದು ಹೇಳಿದೆ. ಇದೆಲ್ಲಾ ಆಗುವ ತನಕ ಅದನ್ನು ನಿಜವೆಂದು ನಂಬುವುದು ಕಷ್ಟವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT