ಒತ್ತಡದಲ್ಲಿ ವಿರಾಟ್ ಕೊಹ್ಲಿ ಪಡೆ

ಮೀರ್ಪುರ, ಬಾಂಗ್ಲಾದೇಶ (ಪಿಟಿಐ): ಏಷ್ಯಾದ ರಾಷ್ಟ್ರಗಳಲ್ಲಿ ಬಲಿಷ್ಠವೆನಿಸಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಮುಖಾಮುಖಿಯಾಗಲಿವೆ. ಹಿಂದಿನ ಪಂದ್ಯದಲ್ಲಿ ಶ್ರೀಲಂಕಾ ಎದುರು ನಿರಾಸೆ ಅನುಭವಿಸಿರುವ ವಿರಾಟ್ ಕೊಹ್ಲಿ ಬಳಗ ಪುಟಿದೇಳಬೇಕಾದ ಒತ್ತಡಕ್ಕೆ ಸಿಲುಕಿದೆ.
ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪ್ರತಿಷ್ಠಿತ ಪಂದ್ಯಕ್ಕೆ ಇಲ್ಲಿನ ಷೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂ ಗಣದಲ್ಲಿ ಮೂಹುರ್ತ ನಿಗದಿಯಾಗಿದೆ. ಹೋದ ವರ್ಷ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ತಂಡಗಳು ಕೊನೆಯ ಸಲ ಪೈಪೋಟಿ ನಡೆಸಿದ್ದವು. ಆಗ ಭಾರತ ಗೆಲುವು ಸಾಧಿಸಿತ್ತು.
ಐದು ಬಾರಿ ಏಷ್ಯಾಕಪ್ ಗೆದ್ದಿರುವ ಭಾರತ ಮತ್ತು ಹಾಲಿ ಚಾಂಪಿಯನ್ ಪಾಕ್ ತಂಡಗಳ ನಡುವಿನ ಈ ಪಂದ್ಯ ಕ್ರಿಕೆಟ್ ಪ್ರೇಮಿಗಳ ಕುತೂಹಲಕ್ಕೆ ಕಾರಣ ವಾಗಿದೆ. ಭಾರತ ತಂಡ ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿದ್ದರೆ, ಪಾಕ್ ಬೌಲಿಂಗ್ ನಲ್ಲಿ ಶಕ್ತಿಯುತವಾಗಿದೆ. ಆದ್ದರಿಂದ ಈ ಪಂದ್ಯ ‘ಭಾರತದ ಬ್ಯಾಟ್ಸ್ಮನ್ಗಳು ಮತ್ತು ಪಾಕಿಸ್ತಾನದ ಬೌಲರ್ಗಳ ನಡುವಿನ ಹೋರಾಟ’ ಎಂದು ಪಾಕ್ ತಂಡದ ಮಾಜಿ ನಾಯಕ ಜಹೀರ್ ಅಬ್ಬಾಸ್ ಅಭಿಪ್ರಾಯಪಟ್ಟಿದ್ದಾರೆ.
ಗೆಲುವು ಅನಿವಾರ್ಯ: ಪಾಯಿಂಟ್ ಪಟ್ಟಿಯಲ್ಲಿ ಮೇಲಕ್ಕೇರಬೇಕಾದರೆ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯ. ಭಾರತ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ಎದುರು ಜಯ ಸಾಧಿಸಿ, ಎರಡನೇ ಪಂದ್ಯದಲ್ಲಿ ಲಂಕಾ ಎದುರು ಸೋಲು ಕಂಡಿತ್ತು.
ಪಾಕ್ ತಂಡ ಪ್ರಥಮ ಪಂದ್ಯದಲ್ಲಿ ಲಂಕಾ ಎದುರು ನಿರಾಸೆ ಅನುಭವಿಸಿತ್ತು. ನಂತರ ಆಫ್ಘಾನಿಸ್ತಾನ ವಿರುದ್ಧ ಬೋನಸ್ ಅಂಕದೊಂದಿಗೆ ಗೆಲುವು ಸಾಧಿಸಿತ್ತು. ಆದ್ದರಿಂದ ಮಿಸ್ಬಾ ಉಲ್ ಹಕ್ ಸಾರಥ್ಯದ ತಂಡ ಪಾಯಿಂಟ್ ಪಟ್ಟಿಯಲ್ಲಿ ಐದು ಪಾಯಿಂಟ್ಸ್ನಿಂದ ಎರಡನೇ ಸ್ಥಾನ ಹೊಂದಿದೆ. ನಾಲ್ಕು ಪಾಯಿಂಟ್ ಗಳಿಸಿರುವ ಕೊಹ್ಲಿ ಬಳಗ ಮೂರನೇ ಸ್ಥಾನದಲ್ಲಿದೆ.
ಮಧ್ಯಮ ಕ್ರಮಾಂಕದ ದೌರ್ಬಲ್ಯ: ಬಾಂಗ್ಲಾ ಎದುರು ಶತಕ ಮತ್ತು ಲಂಕಾ ಎದುರು 48 ರನ್ ಕಲೆ ಹಾಕಿರುವ ಕೊಹ್ಲಿ ಉತ್ತಮ ಲಯದಲ್ಲಿದ್ದಾರೆ. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ವೈಫಲ್ಯ ಭಾರತದ ಚಿಂತೆಗೆ ಕಾರಣವಾಗಿದೆ.
ಅಂಬಟಿ ರಾಯುಡು (18), ದಿನೇಶ್ ಕಾರ್ತಿಕ್ (4), ಸ್ಟುವರ್ಟ್ ಬಿನ್ನಿ (0) ಲಂಕಾ ಎದುರು ನೀರಸ ಪ್ರದರ್ಶನ ತೋರಿದ್ದರು. ವರುಣ್ ಆ್ಯರನ್ ಮತ್ತು ಬಿನ್ನಿಗೆ ಅವಕಾಶ ಕೊಟ್ಟಿದ್ದ ನಾಯಕ ಕೊಹ್ಲಿ ಪಾಕ್ ಎದುರಿನ ಪಂದ್ಯದಲ್ಲಿ ಚೇತೇಶ್ವರ ಪೂಜಾರಗೆ ಅಂತಿಮ ಇಲೆವೆನ್ನಲ್ಲಿ ಸ್ಥಾನ ನೀಡುವರೇ ಎನ್ನುವುದನ್ನು ಕಾದು ನೋಡಬೇಕಿದೆ. ಪೂಜಾರ ಎರಡು ಪಂದ್ಯಗಳಿಂದ ‘ಬೆಂಚ್’ ಕಾದಿದ್ದಾರೆ.
ಬೌಲಿಂಗ್ಗೆ ಬೇಕಿದೆ ಬಲ: ಹಿಂದಿನ ಪಂದ್ಯಗಳಲ್ಲಿ ವೇಗಿಗಳು ಉಪಯುಕ್ತ ಬೌಲಿಂಗ್ ಮಾಡಿದರೂ, ಸ್ಪಿನ್ ವಿಭಾಗದಿಂದ ಹೇಳಿಕೊಳ್ಳುವಂತ ಪ್ರದರ್ಶನ ಮೂಡಿಬಂದಿಲ್ಲ. ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜ ಎರಡು ಪಂದ್ಯಗಳಿಂದ ತಲಾ ಮೂರು ವಿಕೆಟ್ಗಳನ್ನಷ್ಟೆ ಪಡೆದಿದ್ದಾರೆ.
ಜೊತೆಗೆ ಕೊನೆಯ ಓವರ್ಗಳಲ್ಲಿ ಹೆಚ್ಚು ರನ್ ಬಿಟ್ಟುಕೊಡದಂತೆ ಎಚ್ಚರಿಕೆ ವಹಿಸಬೇಕಿದೆ. ಅದರಲ್ಲೂಕ್ಷೇತ್ರರಕ್ಷಣೆ ವಿಭಾಗದಲ್ಲಿ ಆಗಿರುವ ತಪ್ಪು ಮರುಕಳಿ ಸದಂತೆ ಜಾಗರೂಕತೆ ವಹಿಸುವುದು ಅನಿವಾರ್ಯ. ಲಂಕಾ ಎದುರು ನಾಲ್ಕು ಕ್ಯಾಚ್ಗಳನ್ನು ಕೈಚೆಲ್ಲಿದ್ದ ಭಾರತ ಸೋಲಿನ ಪ್ರಪಾತಕ್ಕೆ ಬಿದ್ದಿತ್ತು.
ಬೌಲಿಂಗ್ ವಿಭಾಗವೇ ಅಸ್ತ್ರ: ಮೊಹಮ್ಮದ್ ಹಫೀಜ್, ಉಮರ್ ಗುಲ್, ಶಾಹೀದ್ ಅಫ್ರಿದಿ ಅವರ ನ್ನೊಳ ಗೊಂಡ ಪಾಕ್ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಜೊತೆಗೆ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಕೂಡಾ ಸಮರ್ಥ ಆಟಗಾರರರಿಗೆ ಕೂಡಿದೆ. ಲಂಕಾ ಎದುರು ಮಿಸ್ಬಾ (73) ಮತ್ತು ಉಮರ್ ಅಕ್ಮಲ್ (74) ರನ್ ಗಳಿಸಿದ್ದರು. ಆಫ್ಘನ್ ವಿರುದ್ಧದ ಪಂದ್ಯದಲ್ಲಿ ಅಕ್ಮಲ್ ಶತಕ ಸಿಡಿಸಿದ್ದರು. ಆದ್ದರಿಂದ, ಭಾರತದ ಬೌಲರ್ಗಳ ಮೇಲೆ ಹೆಚ್ಚು ಜವಾಬ್ದಾರಿಯಿದೆ.
ಏಷ್ಯಾಕಪ್ನ ಮೊದಲ ಐದು ಪಂದ್ಯ ಗಳು ಫಟುಲ್ಲಾದಲ್ಲಿ ನಡೆದ ಬಳಿಕ ಈಗ ಮೊದಲ ಪಂದ್ಯ ಮೀರ್ಪುರದಲ್ಲಿ ಆಯೋಜನೆಯಾಗಿದೆ. ಜೊತೆಗೆ, ಟಾಸ್ ಸಹ ಮುಖ್ಯವಾಗುತ್ತದೆ. ಇಲ್ಲಿನ ಪಿಚ್ ಬೌಲರ್ಗಳಿಗೆ ನೆರವಾಗುವ ಕಾರಣ ಟಾಸ್ ಗೆಲ್ಲುವ ನಾಯಕರು ಮೊದಲು ಫೀಲ್ಡಿಂಗ್ ಆರಿಸಿಕೊಳ್ಳುವ ಸಾಧ್ಯತೆ ಅಧಿಕವಾಗಿದೆ.
ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶಿಖರ್ ಧವನ್, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಸ್ಟುವರ್ಟ್್ ಬಿನ್ನಿ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ವರುಣ್ ಆ್ಯರನ್, ಈಶ್ವರ್ ಪಾಂಡೆ, ಅಮಿತ್ ಮಿಶ್ರಾ ಮತ್ತು ಅಂಬಟಿ ರಾಯುಡು.
ಪಾಕಿಸ್ತಾನ: ಮಿಸ್ಬಾ ಉಲ್ ಹಕ್ (ನಾಯಕ), ಅಬ್ದುರ್ ರೆಹಮಾನ್, ಅಹ್ಮದ್ ಶೆಹ್ಜಾದ್, ಅನ್ವರ್ ಅಲಿ, ಬಿಲ್ವಾಲ್ ಭಟ್ಟಿ, ಫವಾದ್ ಅಲಾಂ, ಜುನೈದ್ ಖಾನ್, ಮೊಹ ಮ್ಮದ್ ಹಫೀಜ್, ಮೊಹಮ್ಮದ್ ತಲ್ಹಾ, ಸಯೀದ್ ಅಜ್ಮಲ್, ಶಾಹೀದ್ ಅಫ್ರಿದಿ, ಶಾರ್ಜೀಲ್ ಖಾನ್, ಶೊಹೇಬ್ ಮಕ್ಸೂದ್, ಉಮರ್ ಅಕ್ಮಲ್, ಉಮರ್ ಗುಲ್.
ಪಂದ್ಯ ಆರಂಭ: ಮಧ್ಯಾಹ್ನ 1.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಡಿ1
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.