ಕುರುವಂಗಿ: ಬೆಳೆಹಾನಿ ಪ್ರದೇಶ ಪರಿಶೀಲನೆ
ಚಿಕ್ಕಮಗಳೂರು: ತಾಲ್ಲೂಕಿನ ಕುರುವಂಗಿ ಕ್ಷೇತ್ರದಲ್ಲಿ ಮಳೆಯಿಲ್ಲದೆ ಬೆಳೆಹಾನಿಯಾದ ಪ್ರದೇಶಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯಾ ರಂಗನಾಥ್ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಂಕಷ್ಟಕ್ಕೆ ಒಳಗಾಗಿರುವ ರೈತರ ಸಮಸ್ಯೆಗಳನ್ನು ಅವರು ಆಲಿಸಿದರು. ಈ ಭಾಗದಲ್ಲಿ 700 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಆಲೂಗಡ್ಡೆ, ಬಟಾಣಿ, ತಿಂಗಳವರೆ, ಹುರುಳಿ, ಕೋಸು ಸೇರಿದಂತೆ ವಿವಿಧ ಬೆಳೆ ಬಿತ್ತನೆ ಮಾಡಿದ್ದರು. ಎಲ್ಲ ಬೆಳೆಗಳು ನಾಶವಾಗಿವೆ.
ಕರ್ತಿಕೆರೆ, ತೇಗೂರು, ಬೀಕನಹಳ್ಳಿ ಭಾಗದಲ್ಲಿ ರೈತರು ಮಳೆ ಆಶ್ರಯಿಸಿ ಆಲೂಗಡ್ಡೆ ಬಿತ್ತಿದ್ದಾರೆ. ಕೃಷಿಗೆ ಬಂಡವಾಳ ಹೊಂದಿಸಿಕೊಳ್ಳಲು ಚಿನ್ನಾಭರಣ ಅಡವಿಟ್ಟು ಸಾಲ ತಂದಿದ್ದಾರೆ. ಈಗ ಎಲ್ಲವೂ ಮಣ್ಣುಪಾಲಾಗಿದೆ.
ಶೇ 10 ರಿಂದ 15ರಷ್ಟು ರೈತರು ಮಾತ್ರ ನೀರಾವರಿ ಸೌಲಭ್ಯ ಹೊಂದಿದ್ದು, ಉಳಿದಂತೆ ಶೇ 85ರಷ್ಟು ರೈತರು ಮಳೆ ಇಲ್ಲದೆ ಬೆಳೆ ಕಳೆದುಕೊಂಡಿದ್ದಾರೆ ಎಂದು ರೈತರು ಸಮಸ್ಯೆ ವಿವರಿಸಿದರು.
ತಾಲ್ಲೂಕಿನಲ್ಲಿ 1500 ಹೆಕ್ಟೇರ್ ಪ್ರದೇಶ ವಾಡಿಕೆ ವಿಸ್ತೀರ್ಣವಿದ್ದು, 750 ಹೆಕ್ಟೇರ್ ಪ್ರದೇಶದಲ್ಲಿ ಮಳೆ ನಂಬಿ ಬಿತ್ತನೆ ಮಾಡಲಾಗಿದೆ. ಇದರಲ್ಲಿ ಶೇ 20 ಭಾಗ ನೀರಾವರಿ ಜಮೀನಿದ್ದು, ಬೆಳೆ ಸ್ವಲ್ಪ ಸುಸ್ಥಿತಿಯಲ್ಲಿದೆ. ಉಳಿದ ಬೆಳೆಗಳು ಒಣಗಿ ಹಿಡುವಳಿಯೇ ಇಲ್ಲದಂತಾಗಿದೆ ಎಂದರು.
ಸಿಡಿಎ ಮಾಜಿ ಅಧ್ಯಕ್ಷ ಸಿ.ಎಸ್.ರಂಗನಾಥ್, ತಾ.ಪಂ. ಮಾಜಿ ಅಧ್ಯಕ್ಷ ಕನಕರಾಜ್, ಗ್ರಾ.ಪಂ. ಅಧ್ಯಕ್ಷೆ ಸುಶೀಲಾ ಉಮೇಶ್, ಸದಸ್ಯ ಕೆ.ಪಿ.ನಾಗರಾಜ್, ಪಾಂಡುರಂಗ ಶೆಟ್ಟಿ, ಚನ್ನೇಗೌಡ, ಶೇಖರಪ್ಪ ಇನ್ನಿತರರು ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.