ಕೇಜ್ರಿವಾಲ್ ಮುಖಕ್ಕೆ ಮಸಿ

ನವದೆಹಲಿ(ಪಿಟಿಐ): ಆಮ್ ಆದ್ಮಿ ಪಕ್ಷದ (ಎಪಿಪಿ) ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಮುಖಕ್ಕೆ ಪತ್ರಿಕಾಗೋಷ್ಠಿಯಲ್ಲಿ ವ್ಯಕ್ತಿಯೊಬ್ಬ ಕಪ್ಪು ಬಣ್ಣ ಎರಚಿದ ನಾಟಕೀಯ ಬೆಳವಣಿಗೆ ಸೋಮವಾರ ನಡೆದಿದೆ.
ಅಣ್ಣಾ ಹಜಾರೆ ಅವರ ಬೆಂಬಲಿಗ ಮತ್ತು ಮಹಾರಾಷ್ಟ್ರದ ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಂಡ ನಚಿಕೇತ ವಾಘ್ರೇಕರ್ ಈ ಕೃತ್ಯ ಎಸಗಿದ್ದು, ‘ಕೇಜ್ರಿವಾಲ್ ಅವರು ಅಣ್ಣಾ ಹಜಾರೆ ಅವರನ್ನು ತಮ್ಮ ಗುರು ಎನ್ನುತ್ತಾರೆ. ಆದರೆ, ಅವರು ಹಜಾರೆ ಮತ್ತು ಜನರಿಗೆ ದ್ರೋಹ ಬಗೆದಿದ್ದಾರೆ’ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿ ನಡೆಯುತ್ತಿದ್ದ ಸ್ಥಳಕ್ಕೆ ಬಂದ ನಚಿಕೇತ, ಗೋಷ್ಠಿಯಲ್ಲಿದ್ದ ಕೇಜ್ರಿವಾಲ್, ಪಕ್ಷದ ಮುಖಂಡರಾದ ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್, ಹಿರಿಯ ವಕೀಲರಾದ ಶಾಂತಿ ಭೂಷಣ್, ಪ್ರಶಾಂತ್ ಭೂಷಣ್ ಅವರ ಮೇಲೆ ಕಪ್ಪು ಬಣ್ಣದ (ಪೇಂಟ್) ಡಬ್ಬ ಎಸೆದು, ‘ಅಣ್ಣಾ ಹಜಾರೆ ಜಿಂದಾಬಾದ್’ ಎಂದು ಘೋಷಣೆ ಕೂಗಿದರು.
ಕೇಜ್ರಿವಾಲ್ ಅವರ ಮುಖದ ಮೇಲೆ ಕೊಂಚ ಬಣ್ಣ ಬಿತ್ತು. ಸಿಸೋಡಿಯಾ, ಪ್ರಶಾಂತ್ ಭೂಷಣ್ ಮತ್ತು ಸಂಜಯ್ ಸಿಂಗ್ ಅವರ ಮೇಲೂ ಸ್ವಲ್ಪ ಬಣ್ಣ ಬಿತ್ತು. ಗೋಷ್ಠಿಯಲ್ಲಿದ್ದ ಎಪಿಪಿ ಕಾರ್ಯಕರ್ತರು ನಚಿಕೇತ ಅವರನ್ನು ಕೂಡಲೇ ಸ್ಥಳದಿಂದ ಹೊರಗೆಳೆದುಕೊಂಡು ಹೋದರು.
ನಂತರ ಈ ಘಟನೆ ಬಗ್ಗೆ ಯಾರ ಹೆಸರನ್ನೂ ಉಲ್ಲೇಖಿಸದೆ ಮಾತನಾಡಿದ ಕೇಜ್ರಿವಾಲ್, ‘ಎಪಿಪಿ ಜನಪ್ರಿಯತೆಯಿಂದ ಕಂಗಾಲಾಗಿರುವ ಕೆಲವರು ಈ ಕೆಲಸ ಮಾಡಿದ್ದಾರೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.