ಗ್ರಾಮೀಣ ಪತ್ರಕರ್ತರಿಗೂ ಸೌಲಭ್ಯ ದೊರೆಯಲಿ
ಹೊಳಲ್ಕೆರೆ: ಗ್ರಾಮೀಣ ಪತ್ರಕರ್ತರು ಮಾಧ್ಯಮ ರಂಗಕ್ಕೆ ಅಮೂಲ್ಯ ಸೇವೆ ಸಲ್ಲಿಸುತ್ತಿದ್ದು, ಅವರಿಗೂ ಹೆಚ್ಚು ಸೌಲಭ್ಯಗಳನ್ನು ನೀಡಬೇಕು ಎಂದು ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಮಂಡಿಬೆಲೆ ರಾಜಣ್ಣ ಒತ್ತಾಯಿಸಿದರು.
ಪಟ್ಟಣದಲ್ಲಿ ಶನಿವಾರ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರೋಟರಿ ಕ್ಲಬ್ ವತಿಯಿಂದ ನಡೆದ ಪತ್ರಿಕಾ ಹಾಗೂ ಮಾಧ್ಯಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಕೇವಲ ರಾಜಧಾನಿಯಲ್ಲಿ ಕೆಸ ಮಾಡುವ ಪತ್ರಕರ್ತರಿಗಷ್ಟೇ ವಿವಿಧ ಸೌಲಭ್ಯ ನೀಡುತ್ತಿದೆ. ವಿಧಾನಸೌಧ, ರಾಜಕೀಯ ವರದಿಗಾರರು ಮತ್ತು ಪ್ರಭಾವಿ ಪತ್ರಕರ್ತರಿಗಷ್ಟೇ ಸರ್ಕಾರಿ ಸೌಲಭ್ಯ ದೊರೆಯುತ್ತಿದ್ದು, ಗ್ರಾಮೀಣ ಪತ್ರಕರ್ತರನ್ನು ನಿರ್ಲಕ್ಷ್ಯಿಸಲಾಗಿದೆ. ನಿಸ್ವಾರ್ಥ ಸೇವೆ ಸಲ್ಲಿಸುವ ಗ್ರಾಮೀಣ ಪತ್ರಕರ್ತರ ಹಿತ ಕಾಪಾಡಲು ಸರ್ಕಾರ ಮುಂದಾಗಬೇಕು ಎಂದರು.
ಪರ್ತಕರ್ತ ಎಸ್. ನಾಗಣ್ಣ ಮಾತನಾಡಿ, ದರ ಸಮರದಿಂದ ಒಂದು ಪತ್ರಿಕೆ ಬೆಳೆಯುತ್ತದೆ ಎಂಬುದು ಕೇವಲ ಭ್ರಮೆಯಷ್ಟೆ. ಒಂದು ಪತ್ರಿಕೆ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಮಾತ್ರ ಅದಕ್ಕೆ ಭವಿಷ್ಯ ಇದೆ. ಜನರ ಅಪೇಕ್ಷೆಗಳಿಗೆ ತಕ್ಕ ವರದಿಗಳನ್ನು ಪ್ರಕಟಿಸುವ ಪತ್ರಿಕೆಯನ್ನು ಜನ ಕೊಂಡು ಓದುತ್ತಾರೆ.
ಕೇವಲ ವ್ಯವಹಾರಿಕ ದೃಷ್ಟಿಕೋನದಿಂದ ಹುಟ್ಟಿಕೊಂಡ ಪತ್ರಿಕೆಗಳು ಅರ್ಧಕ್ಕೇ ಸಾಯುತ್ತವೆ. ತನ್ನದೇ ಆದ ತತ್ವ ಸಿದ್ಧಾಂತಗಳ ಮೂಲಕ ಪತ್ರಿಕೆ ನಡೆಯಬೇಕು. ಯಾವುದೇ ರಾಜಕೀಯ ಪಕ್ಷ, ಸರ್ಕಾರ, ಪ್ರಭಾವಿಗಳಿಗೆ ಮಣಿಯದೆ ನಿಷ್ಪಕ್ಷಪಾತ ವರದಿ ನೀಡಬೇಕು. ವ್ಯಕ್ತಿಗತವಾಗಿ ಕೆಲಸ ಮಾಡದೆ, ಸಮಾಜಮುಖಿಯಾಗಿ ಸೇವೆ ಮಾಡಬೇಕು ಎಂದರು.
ಸಂಘದ ಮಾಜಿ ಅಧ್ಯಕ್ಷ ಕೆ.ಬಿ. ಬಸವರಾಜಯ್ಯ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್. ವೇದಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಾರ್ತಾಧಿಕಾರಿ ಮಹೇಶ್ವರಯ್ಯ ಮತ್ತು ಮಾಳೇನಹಳ್ಳಿ ಬಿ. ತಿಪ್ಪೇರುದ್ರಪ್ಪ ಅವರನ್ನು ಸನ್ಮಾನಿಸಲಾಯಿತು.
ಪತ್ರಕರ್ತ ರಾಕೇಶ್ ಪೂಂಜ, ರೋಟರಿ ಅಧ್ಯಕ್ಷ ವಿಜಯಕುಮಾರ್, ಜಿಲ್ಲಾ ಸಂಘದ ಕಾರ್ಯದರ್ಶಿ ಎಚ್. ಲಕ್ಷ್ಮಣ್, ಎಚ್.ಪಿ. ಸುದರ್ಶನ ಕುಮಾರ್, ಡಾ.ಎನ್.ಬಿ. ಸಜ್ಜನ್, ಎ. ಚಿತ್ತಪ್ಪ ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.