ಜಮ್ಮು-ಕಾಶ್ಮೀರ : ಬಿಎಸ್ಎಫ್ ಯೋಧರ ಗುಂಡಿಗೆ ನಾಲ್ವರ ಬಲಿ

ಜಮ್ಮು/ಶ್ರೀನಗರ (ಪಿಟಿಐ/ಐಎಎನ್ಎಸ್): ಗಡಿ ಭದ್ರತಾ ಪಡೆಯ ಶಿಬಿರದ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿದಾಗ ಸೈನಿಕರು ಗುಂಡು ಹಾರಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ.
ಇಲ್ಲಿನ ರಂಬಾನ್ ಜಿಲ್ಲೆಯಲ್ಲಿ ಪ್ರಾರ್ಥನಾಮಂದಿರವೊಂದನ್ನು ಯೋಧರು ಅಪವಿತ್ರಗೊಳಿಸಿದರು ಹಾಗೂ ಧಾರ್ಮಿಕ ನಾಯಕರೊಬ್ಬರ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಿ ಸಾವಿರಾರು ಜನರಿದ್ದ ಗುಂಪು ಬಿಎಸ್ಎಫ್ ಯೋಧರ ಶಿಬಿರದ ಮೇಲೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ. ಇದರಿಂದ ಯೋಧರು ಹಾರಿಸಿದ ಗುಂಡಿಗೆ ನಾಲ್ವರು ಬಲಿಯಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.
ಅನಧಿಕೃತ ಮೂಲಗಳು ಮೃತರ ಸಂಖ್ಯೆಯನ್ನು 4 ಎಂದು ಹೇಳಿವೆ. ಗಾಯಗೊಂಡವರಲ್ಲಿ ಬಿಎಸ್ಎಫ್ ಯೋಧರೂ ಸೇರಿದ್ದಾರೆ ಎನ್ನಲಾಗಿದೆ.
ಘಟನೆ ಕುರಿತಂತೆ ಗೃಹಸಚಿವ ಸುಶೀಲ್ಕುಮಾರ್ ಶಿಂಧೆ ತನಿಖೆಗೆ ಆದೇಶ ನೀಡಿದ್ದಾರೆ.
ಇಲ್ಲಿನ ರಂಬಾನ್, ಗೂಲ್ ಹಾಗೂ ಚಂದ್ರಕೋಟೆ ಪ್ರದೇಶಗಳಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದೆ.
ಮತ್ತೊಂದು ಉದ್ರಿಕ್ತ ಗುಂಪು ರಂಬಾನ್ನ ಜಿಲ್ಲಾಧಿಕಾರಿ ಕಚೇರಿಗೆ ಬೆಂಕಿ ಹಚ್ಚಲು ಯತ್ನಿಸಿದ್ದು, ಪೊಲೀಸರು ಸದ್ಯ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದು ಹೇಳಲಾಗಿದೆ.
ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯನ್ನು ಪ್ರತಿಭಟನಾಕಾರರು ಅಲ್ಲಲ್ಲಿ ತಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.