ಜಿಮ್ ಫಲಕಕ್ಕೆ ಮಸಿ ಬಳಿದ ರೈತರು
ಮಾಲೂರು: ಸರ್ಕಾರ ರೈತರಿಂದ ಕೃಷಿ ಭೂಮಿ ಕಸಿಯುವುದನ್ನು ನಿಲ್ಲಿಸಿ, ವ್ಯವಸಾಯವನ್ನೆ ಕೈಗಾರಿಕೆಗಳನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ರೈತ ಸಂಘದ ಜಿಲ್ಲಾ ಸಂಚಾಲಕ ಎ.ಅಶ್ವಥರೆಡ್ಡಿ ಆಗ್ರಹಿಸಿದರು.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಲು ತಾಲ್ಲೂಕು ರೈತ ಸಂಘದ ಸದಸ್ಯರು ತೆರಳುವ ಮುನ್ನ, ಪಟ್ಟಣದ ತಾಲ್ಲೂಕು ಕಚೇರಿ ಎದುರು ಗುರುವಾರ ಜಿಮ್ ಫಲಕಕ್ಕೆ ಮಸಿ ಬಳಿದರು. ಆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ವಿಶ್ವಬಂಡವಾಳ ಹೂಡಿಕೆದಾರರ ಸಮಾವೇಶ ಮಾಡಲು ಹೊರಟಿರುವ ಸರ್ಕಾರ, ಬಹುರಾಷ್ಟ್ರೀಯ ಕಂಪೆನಿಗಳಿಗೆ ಲಕ್ಷಾಂತರ ಎಕರೆ ಗೋಮಾಳ, ಗುಂಡುತೋಪು ಸೇರಿದಂತೆ ಕೃಷಿಗೆ ಪೂರಕವಾದ ಭೂಮಿಯನ್ನು ಪರಭಾರೆ ಮಾಡಲು ಹೊರಟಿದೆ. ಕೃಷಿಗಾಗಿ ವಿಶೇಷ ಬಜೆಟ್ ಮಂಡಿಸಿದ ಸರ್ಕಾರ ರೈತರನ್ನೇ ಮರೆತಿದೆ.
ಇದೇ ರೀತಿ ಮುಂದುವರಿದರೆ ಮುಂದೊಂದು ದಿನ ವಿದೇಶೀಯರ ದಾಸ್ಯಕ್ಕೆ ಒಳಗಾಗಬೇಕಾಗುತ್ತದೆ ಎಂದರು.
ಜನ ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ. ಆಹಾರ ವಸ್ತುಗಳ ಉತ್ಪಾದನೆಗೆ ಅಗತ್ಯವಾದ ಭೂಮಿ, ನೀರು, ಗೊಬ್ಬರ, ಬೀಜ ಪೂರೈಸಬೇಕಾದ ಸರ್ಕಾರ, ವಿದೇಶಿ ಬಂಡವಾಳ ಹೂಡಿಕೆ ನೆಪದಲ್ಲಿ ಕತ್ತಲ ಕೂಪಕ್ಕೆ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದರು.
ತಾಲ್ಲೂಕು ರೈತ ಸಂಘದ ಅಧ್ಯಕ್ಷ ಬೆಡಶೆಟ್ಟಹಳ್ಳಿ ರಮೇಶ್, ಗೌರವಾಧ್ಯಕ್ಷ ಚನ್ನವೀರದೇವರು, ಉಪಾಧ್ಯಕ್ಷ ಚನ್ನಬಚ್ಚೇಗೌಡ, ಪ್ರಧಾನ ಕಾರ್ಯದರ್ಶಿ, ಟಿ.ಇ.ದೇವರಾಜ್ ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.