ತುಂಗಭದ್ರಾ ಸೆರಗಿನಲ್ಲಿ ಬತ್ತದ ಸಸಿ ಮಡಿ
ಕಾರಟಗಿ: ತುಂಗಭದ್ರಾ ಜಲಾಶಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ನೀರಿನ ಸಂಗ್ರಹಣೆ ಆತಂಕ ಮೂಡಿಸುವಂತಿದೆ. ಜುಲೈ 2 ಅಥವಾ 3ನೇ ವಾರ ನೀರು ಬಿಡುವ ಹಿಂದಿನ ಸಂಪ್ರದಾಯದ ಬಗ್ಗೆ ರೈತರಲ್ಲಿ ಇದೀಗ ಅನಿಶ್ಚತತೆ ಮೂಡಿದೆ. ಆದರೆ ರೈತರು ಹಿಂದಿನ ಲೆಕ್ಕಾಚಾರದಂತೆ ಭತ್ತದ ಸಸಿ ಬೆಳೆಸುವಲ್ಲಿ ನಿರತರಾಗಿದ್ದಾರೆ. ಆದರೆ ಜಲಾಶಯದಲ್ಲಿ ನೀರಿನ ಕೊರತೆ, ಒಳ ಹರಿವು ಏರದಿರುವುದು, ಮಳೆ ಬಾರದಿರುವುದು ರೈತರಲ್ಲಿ ಆತಂಕ ಮೂಡಿಸಿದೆ.
ಎಂದಿನಂತೆ ಮಳೆ ಬರುವುದು, ಜಲಾಶಯ ಭರ್ತಿಯಾಗುವುದು, ಸಂಪ್ರದಾಯದಂತೆ ನಾಲೆಗೆ ನೀರು ಬಿಡುವರು ಎಂಬ ಸಕರಾತ್ಮಕ ಭಾವನೆಯಿಂದ ಎಲ್ಲೆಡೆಯೂ ಭತ್ತದ ಸಸಿ ಮಡಿಗಳು ಹಚ್ಚಹಸಿರಿನಲ್ಲಿ ಕಂಗೊಳಿಸುತ್ತಾ `ನಾಟಿಗೆ ಸಿದ್ಧ~ ಎಂದು ಸಾರಿ ಹೇಳುವಂಥಹ ದೃಶ್ಯಗಳು ಕಾಣುತ್ತಿವೆ.
ನಾಲೆಗೆ ನೀರು ಬಿಡುವುದರೊಳಗೆ ಪಂಪ್ಸೆಟ್ ಹೊಂದಿರುವ ರೈತರ ಜಮೀನಿನಲ್ಲಿ ಭತ್ತದ ಸಸಿಗಳನ್ನು ನೀರು ಬಿಡುವ ಲೆಕ್ಕಾಚಾರದ ಮೇಲೆ ಹಾಕಲಾಗುತ್ತದೆ. ಸಸಿ ಹಾಕುವವರಿಗೆ ಜಮೀನಿನ ಮಾಲಿಕರು ಭೂಮಿ, ನೀರು ನೀಡಬೇಕು. ಬೀಜ ಹಾಕುವ ಪೂರ್ವಭಾವಿ ಕೃಷಿ ಕೆಲಸ, ಬೀಜ, ಗೊಬ್ಬರ, ಕಿತ್ತಿಕೊಂಡು ಹೋಗುವುದು ಸಸಿ ಹಾಕುವವರಿಗೆ ಬಿಟ್ಟ ವಿಷಯ.
ಭೂಮಿ, ನೀರು ಒದಗಿಸುವ ಭೂಮಾಲಿಕರಿಗೆ ಎಕರೆಗಾದರೆ 14 ಸಾವಿರ ರೂ, ಒಂದು ಚೀಲಕ್ಕಾದರೆ 1,200ರೂ. ನೀಡಬೇಕು. ಸೋನಾ ಮಸೂರಿ ತಳಿಯಾದರೆ 60ರಿಂದ 75 ದಿನಗಳಲ್ಲಿ, ಇತರ ತಳಿಯಾದರೆ ಇನ್ನೂ 15ದಿನ ಮೊದಲೆ ಭತ್ತದ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಬಿ. ಮಲ್ಲಿಕಾರ್ಜುನಸ್ವಾಮಿ ಹೇಳುತ್ತಾರೆ.
ಮಳೆ ಅಭಾವ, ಜಲಾಶಯದಲ್ಲಿ ನೀರಿನ ಸಂಗ್ರಹಣೆಯ ವಿಷಯವು ನಮ್ಮನ್ನು ಅಧೈರ್ಯರನ್ನಾಗಿಸಿದೆ. ಮುಂದೇನಾಗುವುದೋ ಆತಂಕದಲ್ಲಿದ್ದೇವೆ ಎನ್ನುವ ಮಲ್ಲಿಕಾರ್ಜುನಸ್ವಾಮಿ ಒಂದೆಡೆ ಮಳೆ ಇಲ್ಲ, ಇನ್ನೊಂದೆಡೆ ಅಂತರ್ಜಲ ಕುಸಿದಿದ್ದು, ಇರುವ ಬೋರವೆಲ್ಗಳ ನೀರಿನ ಪ್ರಮಾಣ ಕಡಿಮೆಯಾಗಿದೆ. ಕೆಲವರ ಬೋರಗಳು ನಿಂತಿವೆ. ಹೀಗಾದರೆ ಕೃಷಿಯನ್ನು ನೆಚ್ಚಿಕೊಂಡಿರುವ ರೈತರ ಗತಿಯೇನು? ಎಂದು ಅವರು ಪ್ರಶ್ನಿಸುತ್ತಾರೆ.
ಭತ್ತದ ಸಸಿಗಳ ನಾಟಿಗೆ ಪಂಪ್ಸೆಟ್, ರಸ್ತೆಯ ಅನುಕೂಲ ಇರುವ ಜಮೀನುಗಳಿಗೆ ಬೇಡಿಕೆ ಸಹಜವಾಗಿರುತ್ತದೆ. ಇಂಥಹ ರೈತರು ಒಂದು ಬೆಳೆಗೆ ಬರಬಹುದಾದಷ್ಟು ಲಾಭವನ್ನು ಸಸಿಗಳ ನಾಟಿಯಿಂದಲೆ ಸಂಪಾದಿಸುವರು. ಆದರೆ ಸಸಿಗಳನ್ನು ಹಾಕಿದ್ದ ಜಮೀನಿನಲ್ಲಿ ನಾಟಿ ಕಾರ್ಯ ಒಂದು ತಿಂಗಳು ವಿಳಂಬವಾಗುತ್ತದೆ.
ನಾಟಿಪೂರ್ವದಲ್ಲಿ ಜಾಮೀನಿನಲ್ಲಿ ಮೂರ್ನಾಲ್ಕು ಸಾರಿ ಪೆಡ್ಲರ್ ಹೊಡೆದು, ನಾಲ್ಕೈದು ಸಾವಿರ ರೂ. ಅಧಿಕ ವೆಚ್ಚ ಮಾಡಬೇಕಾಗುತ್ತದೆ. ಲಾಭದ ಜೊತೆಗೆ ಖರ್ಚಿನ ಪ್ರಮಾಣವು ಹೆಚ್ಚಾಗಿರುತ್ತದೆ. ಮಳೆ ಬಂದರೆ ಎಲ್ಲವೂ ಸಲೀಸು ಎಂದು ಸಜ್ಜನ್ ಶಿವು, ಪನ್ನಾಪೂರದ ಈರಣ್ಣ, ಉದಯಕುಮಾರ ಗಂಗಾಮತ ಹೇಳುತ್ತಾರೆ.
ಮರ್ಲಾನಹಳ್ಳಿಯ ರಾಮ್ಸಿಂಗ್ ಅರ್ಧ ಎಕರೆಯಲ್ಲಿ ಭತ್ತದ ಬೀಜಗಳನ್ನು ಹಾಕಲಾಗಿದೆ. ಸಸಿಗಳ ರಕ್ಷಣೆಯಲ್ಲಿ ಬೀಜ ಹಾಕಿದ ಹಾಗೂ ಜಮೀನು ಒದಗಿಸಿದ ರೈತರ ಜವಬ್ದಾರಿಯೂ ಇರುತ್ತದೆ ಎನ್ನುತ್ತಾರೆ.
ಎಲ್ಲೆಡೆಯೂ ಹಾಕಿದ ಭತ್ತದ ಸಸಿಗಳು ನಾಟಿಗೆ ಸಿದ್ಧಗೊಂಡಿವೆ. ತುಂಗಭದ್ರಾ ಜಲಾಶಯ ಭರ್ತಿಯಾಗಿ, ಎಡದಂಡೆ ಮುಖ್ಯ ನಾಲೆಗೆ ನೀರು ಬಿಡುವುದಕ್ಕಾಗಿ ರೈತರು ಆಕಾಶ ನೋಡುತ್ತಾ, ಮಳೆರಾಯನ ಆಗಮನಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ.
ಕಳೆದ ಸಾಲಿನಲ್ಲಿ ಜಲಾಶಯದಲ್ಲಿಯ ನೀರಿನ ಕೊರತೆಯಿಂದ ಒಂದು ಬೆಳೆ ಬೆಳೆದು ನಷ್ಟ ಅನುಭವಿಸಿರುವ ರೈತರು, ಈ ಬಾರಿ ಭತ್ತ ಬೆಳೆಯುತ್ತೇವೆಯೇ? ಪರ್ಯಾಯ ಬೆಳೆಯತ್ತ ಯೋಚಿಸಬೇಕೇ? ಸೇರಿದಂತೆ ಅನೇಕ ಯೋಚನೆಯಲ್ಲಿ ತೊಡಗಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.