‘ಯಾರಾದ್ರೂ ಹೇಳಿ ಸ್ವಲ್ಪ ಹಿಂಗ್ಯಾಕೆ ಆಗಿದೆ ಸೀರೆಗೆ ಬರಗಾಲ...’ ಅಂತ ‘ಮಾದೇಸ್ವರ’ ರಘು ದೀಕ್ಷಿತ್ ಕೈಗೆ ಮೈಕ್ ತಗೊಂಡಿದ್ದೇ ತಡ ಕಿವಿ ತೂತಾಗೋ ಹಾಗೆ ಮೈಕ್ ಶಿಳ್ಳೆ ಹೊಡೆಯೋದಕ್ಕೆ ಶುರು ಮಾಡಿತು. ಮತ್ತೆ ಮೂಡ್ ಪಿಕಪ್ ಮಾಡಿಕೊಂಡ ರಘು, ‘ಕೋಟೆ’ ಚಿತ್ರದ ಈ ಹಾಡಿನ ನಾಲ್ಕೈದು ಸಾಲುಗಳನ್ನ ಮುಂದುವರಿಸಿದರು.
‘ಸಿಕ್ಕಾಪಟ್ಟೆ ಬಿಜಿ ಇರೋ ಯೋಗರಾಜ್ ಭಟ್ರಿಗೆ ಗಂಟುಬಿದ್ದು ಈ ಹಾಡು ಬರೆಸಿದ್ವಿ. ಹದಿನೈದು ನಿಮಿಷದಲ್ಲಿ, ಶೂಟಿಂಗ್ ಸೆಟ್ನಲ್ಲೇ ಅವರು ಬರೆದು ಕೊಟ್ರು. ಹುಬ್ಬಳ್ಳಿಯ ಮನೆಯೊಂದರ ಬ್ಯಾಕ್ಡ್ರಾಪ್ನಲ್ಲಿ ಈ ಹಾಡು ಶೂಟ್ ಆಗಿದೆ. ನನ್ನ ಕಾಲೇಜ್ಮೇಟ್ ವಿಜಯ್ ಪ್ರಕಾಶ್ ಹಾಡಿದಾರೆ. ಹಾಡು ಚೆನ್ನಾಗಿದೆ. ಐಟಂ ಸಾಂಗ್ ಆದ್ದರಿಂದ ರೇಡಿಯೋನಲ್ಲಿ ಕೇಳೋದಕ್ಕೆ ಚೆನ್ನಾಗಿರತ್ತೋ ಏನೋ...’ ಎಂದು ದೀಕ್ಷಿತರು ಅನುಮಾನಿಸುತ್ತಾ ಹೇಳಿದರು.
ಅಷ್ಟೊತ್ತಿಗೆ ನಿರ್ದೇಶಕ ಶ್ರೀನಿವಾಸರಾಜು, ‘ಹುಬ್ಬಳ್ಳಿ ಬ್ಯಾಕ್ಡ್ರಾಪ್ನಿಂದ ಫಿಲಮ್ ಶುರು ಆಗತ್ತೆ. ಲವ್ ಸ್ಟೋರಿ ಅಲ್ಲ. ಆದರೆ ಫ್ಯಾಮಿಲಿ ಎಮೋಷನ್ಸ್ ಇದೆ. ಬ್ಯಾಡ್ ಎಲಿಮೆಂಟ್ಸ್ನ್ನ ಗುಡ್ ಎಲಿಮೆಂಟ್ಸ್ ಮೂಲಕ ಹೇಗೆ ನಾಶ ಮಾಡಬಹುದು ಅನ್ನೋದೇ ಈ ಫಿಲಂನ ಥೀಮ್. ಒಟ್ಟು ಆರು ಸಾಂಗ್ಸ್. ನಿರ್ದೇಶಕನಿಗೆ ಕಂಪ್ಲೀಟ್ ಫ್ರೀಡಮ್ ಸಿಕ್ಕಿದೆ’ ಅಂತ ನಾಜೂಕಿನಿಂದ ಮಾತು ಮುಗಿಸಿದರು.
ಲೈಟ್ ಆಗಿ ಮೇಕಪ್ ಮಾಡ್ಕೊಂಡು, ಜಾಸ್ತಿನೇ ಕೆಂಪುಕೆಂಪಾಗಿ ಕಾಣ್ತಿದ್ದ ನಾಯಕ ಪ್ರಜ್ವಲ್ ಕಣ್ಣುಗಳೂ ಕೆಂಪಗೇ ಕಾಣ್ತಿದ್ವು. ಚಿತ್ರಕ್ಕಾಗಿ ಸಂಯಮದಿಂದ ಬೆಳೆಸಿದ ಮೀಸೆ, ಗಡ್ಡದ ಬಗ್ಗೆ ಜಾಸ್ತಿನೇ ಅಭಿಮಾನ ಇಟ್ಟುಕೊಂಡಂತಿತ್ತು, ‘ಇದೊಂಥರಾ ಕನಸಿನ ಪಾತ್ರ ಅನ್ನಹುದು. ಆ್ಯಕ್ಷನ್ ಪ್ಯಾಟರ್ನ್ ಸಿನಿಮಾ ಸಖತ್ ಇಷ್ಟಾ ಆಯ್ತು. ಟಪ್ಪಾಂಗುಚಿ ಸಾಂಗ್ ಮತ್ತೆ ಕ್ಲಾಸಿಕಲ್ ಬೇಸ್ಡ್ ಸಾಂಗ್ ನನ್ನ ಫೇವರಿಟ್. ಈ ಚಿತ್ರದಲ್ಲಿ ತುಂಬಾ ಮೆಚ್ಯೂರ್ ಪಾತ್ರ ಇದ್ದಿದ್ದರಿಂದ ಮೊದಲನೇ ಸಲ ಗಡ್ಡ, ಮೀಸೆ ಬಿಟ್ಟಿದೀನಿ’ ಎಂದರು ಪ್ರಜ್ವಲ್.
‘ಕೋಟೆ’ಯ ಧ್ವನಿಸುರುಳಿ ಬಿಡುಗಡೆ ಮಾಡಿದ ನಟ ಆದಿತ್ಯ, ‘ಬಹುತಾರಾಗಣವುಳ್ಳ ಚಿತ್ರಗಳನ್ನು ನಿರ್ಮಿಸಿ. ಇದರಿಂದ ಇಂಡಸ್ಟ್ರೀಗೂ ಒಳ್ಳೇದಾಗತ್ತೆ. ನಾನಂತೂ ರೆಡಿ. ಪ್ರಜ್ವಲ್ ನೀನೇನಂತೀಯಾ?’ ಅಂತ ಕೇಳಿದಾಗ, ಪ್ರಜ್ವಲ್ ‘ಆದಿಯಣ್ಣ, ಡನ್’ ಅಂದರು. ನಿರ್ಮಾಪಕ ಮಂಜುನಾಥ್ ಅವರೆಡೆ ನೋಡುತ್ತ ‘ಅಡ್ವಾನ್ಸ್ ಪ್ಲೀಸ್‘ ಅಂದರು ಆದಿತ್ಯ. ‘ನಾವೂ ರೆಡಿನೇ... ಈಗಾಗ್ಲೇ ಟೈಟಲ್ ಕೂಡ ರಿಜಿಸ್ಟರ್ ಆಗಿದೆ. ಕಥೆ ಸಿಗಬೇಕು. ಕಥೆ ಕೊಡ್ರಣ್ಣ ಮೊದ್ಲು’ ಅಂತ ‘ಜಾಣ’ರಾದರು ಮಂಜುನಾಥ್.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.