ದೋನಿಗೆ ಯಾವುದೇ ಸೂಚನೆ ನೀಡಿಲ್ಲ
ಚೆನ್ನೈ: ಕ್ರಿಕೆಟ್ ನಿಯಮಗಳ ಸಂಬಂಧ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿಗೆ ಐಸಿಸಿ ಜನರಲ್ ಮ್ಯಾನೇಜರ್ ಡೇವ್ ರಿಚರ್ಡ್ಸನ್ ಯಾವುದೇ ರೀತಿಯ ಸೂಚನೆ ನೀಡಿಲ್ಲ. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡು ಮಾಧ್ಯಮಗಳು ವಿವಾದ ಸೃಷ್ಟಿಸಿವೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಸ್ಪಷ್ಟಪಡಿಸಿದೆ. ‘ರಿಚರ್ಡ್ಸನ್ ಮಾತನಾಡಿರುವ ಧ್ವನಿ ಸುರುಳಿ ನಮ್ಮ ಬಳಿ ಇದೆ. ಅದರಲ್ಲಿ ಅವರು ದೋನಿಗೆ ಯಾವುದೇ ಸೂಚನೆ ನೀಡಿಲ್ಲ. ಕ್ರಿಕೆಟ್ ನಿಯಮ ಓದಿ ಎಂದು ಹೇಳಿಲ್ಲ. ಈ ಸಂಬಂಧ ವೆಬ್ಸೈಟ್ವೊಂದು ತಪ್ಪಾಗಿ ವರದಿ ಮಾಡಿದೆ.
ಹೇಳಿಕೆಯನ್ನು ತಿರುಚಲಾಗಿದೆ. ಇದು ಬಿಸಿಸಿಐ ಹಾಗೂ ಐಸಿಸಿ ನಡುವೆ ಘರ್ಷಣೆಗೆ ಕಾರಣವಾಗಿದೆ’ ಎಂದು ಐಸಿಸಿ ಮಾಧ್ಯಮ ವಕ್ತಾರ ಸಮಿ ಉಲ್ ಹಸನ್ ಅವರು ಶುಕ್ರವಾರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ವಿಶ್ವಕಪ್ ಕ್ರಿಕೆಟ್ ಚಾಂಪಿಯನ್ಷಿಪ್ನ ಪಂದ್ಯದ ಬಳಿಕ ಅಂಪೈರ್ ತೀರ್ಪು ಮರು ಪರಿಶೀಲನೆ (ಯುಡಿಆರ್ಎಸ್) ನಿಯಮದ ಸಂಬಂಧ ದೋನಿ ಮಾಡಿದ್ದ ಟೀಕೆ ಹಿನ್ನೆಲೆಯಲ್ಲಿ ಈ ವಿವಾದ ಉದ್ಭವಿಸಿತ್ತು. ‘ಮನುಷ್ಯರ ಯೋಚನೆಗಳಿಂದ ತಂತ್ರಜ್ಞಾನವನ್ನು ಕಲಬೆರಕೆ ಮಾಡುವುದು ಕೆಟ್ಟದ್ದು. ಮುಂದಿನ ದಿನಗಳಲ್ಲಿ ಇಂತಹ ತೀರ್ಪು ನೀಡುವಾಗ ಅದು ತಂತ್ರಜ್ಞಾನ ಅಥವಾ ಮನುಷ್ಯರ ನಿಲುವು ಆಗಿರಲಿ’ ಎಂದು ಅಂಪೈರ್ ನಿರ್ಧಾರವನ್ನು ಟೀಕಿಸಿದ್ದರು.
ಈ ಸಂಬಂಧ ಖಾಸಗಿ ಚಾನೆಲ್ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದ ರಿಚರ್ಡ್ಸನ್, ‘ಯುಡಿಆರ್ಎಸ್ನ ನಿಯಮಗಳನ್ನು ಪೂರ್ಣವಾಗಿ ಅರ್ಥ ಮಾಡಿಕೊಂಡು ದೋನಿ ಮಾತನಾಡಬೇಕು. ಆ ಬಗ್ಗೆ ಅವರಿಗೆ ಸರಿಯಾಗಿ ಗೊತ್ತಿದ್ದರೆ ಈ ರೀತಿ ಮಾತನಾಡುತ್ತಿರಲಿಲ್ಲ’ ಎಂದಿದ್ದರು. ಆದರೆ ಈ ಹೇಳಿಕೆಗೆ ಬಿಸಿಸಿಐ ಆಕ್ಷೇಪ ವ್ಯಕ್ತಪಡಿಸಿತ್ತು. ‘ವಿಶ್ವಕಪ್ ಸಂದರ್ಭದಲ್ಲಿ ಇಂತಹ ಹೇಳಿಕೆಯನ್ನು ನೀಡಬಾರದು. ಈ ಹೇಳಿಕೆ ದೋನಿ ಮೇಲೆ ಪರಿಣಾಮ ಬೀರಬಹುದು.
ಈ ರೀತಿ ಮಾತನಾಡದಿರುವಂತೆ ರಿಚರ್ಡ್ಸನ್ಗೆ ಸೂಚನೆ ನೀಡಬೇಕು’ ಎಂದು ಬಿಸಿಸಿಐ ಕಾರ್ಯದರ್ಶಿ ಎನ್.ಶ್ರೀನಿವಾಸನ್ ಐಸಿಸಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೂನ್ ಲಾರ್ಗಟ್ಗೆ ಪತ್ರ ಬರೆದಿದ್ದರು. ‘ಟೈ’ನಲ್ಲಿ ಕೊನೆಗೊಂಡ ಆ ಪಂದ್ಯದ 25ನೇ ಓವರ್ನಲ್ಲಿ ಯುವರಾಜ್ ಸಿಂಗ್ ಬೌಲಿಂಗ್ನಲ್ಲಿ ಇಯಾನ್ ಬೆಲ್ ವಿರುದ್ಧ ಭಾರತದ ಆಟಗಾರರು ಎಲ್ಬಿಡಬ್ಲ್ಯು ಮನವಿ ಸಲ್ಲಿಸಿದ್ದರು.
ತಾವು ಔಟಾಗಿರುವುದು ಖಚಿತ ಎಂದು ಬೆಲ್ ಕೂಡ ಪೆವಿಲಿಯನ್ನತ್ತ ಹೆಜ್ಜೆ ಇಡಲು ಶುರು ಮಾಡಿದ್ದರು. ಆದರೆ ಅಂಪೈರ್ ಬಿಲಿ ಬೌಡೆನ್ ಅದನ್ನು ನಿರಾಕರಿಸಿದ ಕಾರಣ ದೋನಿ ಯುಡಿಆರ್ಎಸ್ ನಿಯಮದ ಮೊರೆ ಹೋಗಿದ್ದರು. ಟಿವಿ ರಿಪ್ಲೇನಲ್ಲಿ ಚೆಂಡು ವಿಕೆಟ್ಗೆ ಬಡಿಯುವಂತಿತ್ತು. ‘ಹಾಕ್ವೇ’ನಲ್ಲಿ ಕೂಡ ಅದು ಸ್ಪಷ್ಟವಾಗಿತ್ತು. ಆದರೂ ಕೊನೆಯಲ್ಲಿ ಬೌಡೆನ್ ತಮ್ಮ ನಿಲುವಿಗೆ ಬದ್ಧರಾಗಿದ್ದರು. ಆಗ 17 ರನ್ ಗಳಿಸಿದ್ದ ಬೆಲ್ ಬಳಿಕ ಅರ್ಧ ಶತಕ ಹೊಡೆದರು. ಪಂದ್ಯ ರೋಚಕ ಟೈನಲ್ಲಿ ಕೊನೆಗೊಂಡಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.