ಪದವಿಪೂರ್ವ ಕಾಲೇಜುಗಳ ಹಾಕಿ ಟೂರ್ನಿ
ಸೆಮಿಫೈನಲ್ಗೆ ಬೆಂಗಳೂರು ದಕ್ಷಿಣ, ಬಳ್ಳಾರಿ
ಬಳ್ಳಾರಿ: ಬೆಂಗಳೂರು ದಕ್ಷಿಣ ತಂಡದವರು ಇಲ್ಲಿ ನಡೆದಿರುವ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಹಾಕಿ ಟೂರ್ನಿಯ ಬಾಲಕರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಇಲ್ಲಿನ ಸ್ವತಂತ್ರ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶುಕ್ರವಾರ ಆರಂಭವಾದ ಟೂರ್ನಿಯ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಬೆಂಗಳೂರು ದಕ್ಷಿಣ ತಂಡ 6-0 ಗೋಲುಗಳಿಂದ ಚಿತ್ರದುರ್ಗ ಜಿಲ್ಲಾ ತಂಡವನ್ನು ಸುಲಭವಾಗಿ ಪರಾಭವಗೊಳಿಸಿತು.
ಬೆಂಗಳೂರು ತಂಡದ ಗೆಲುವಿಗೆ ರಾಹಿಲ್ ಅಹ್ಮದ್ ಅವರ ಹ್ಯಾಟ್ರಿಕ್ ಗೋಲುಗಳು ನೆರವಾದವು. ತಂಡದ ಪರ ಸೋಮಣ್ಣ ಎರಡು ಹಾಗೂ ಅಚ್ಚಪ್ಪ ಒಂದು ಗೋಲು ಗಳಿಸಿದರು.
ಗದಗ, ಬಾಗಲಕೋಟೆ, ಬೆಂಗಳೂರು ಉತ್ತರ, ದಾವಣಗೆರೆ, ಧಾರವಾಡ ಮತ್ತು ಮಂಗಳೂರು ಜಿಲ್ಲಾ ತಂಡಗಳು ಶನಿವಾರ ನಡೆಯಲಿರುವ ಕ್ವಾರ್ಟರ್ ಫೈನಲ್ನಲ್ಲಿ ಸೆಣೆಸಲಿವೆ.
ಸೆಮಿಫೈನಲ್ಗೆ ಬಳ್ಳಾರಿ: ಆತಿಥೇಯ ಬಳ್ಳಾರಿ, ಮೈಸೂರು ಹಾಗು ಕೊಡಗು ತಂಡಗಳು ಬಾಲಕಿಯರ ವಿಭಾಗದಲ್ಲಿ ಸೆಮಿಫೈನಲ್ಗೆ ಅರ್ಹತೆ ಗಳಿಸಿವೆ.
ಬೆಳಿಗ್ಗೆ ನಡೆದ ಕ್ವಾರ್ಟರ್ ಫೈನಲ್ನಲ್ಲಿ ಬಳ್ಳಾರಿ ತಂಡವು ತನುಜಾ ಅವರು ಗಳಿಸಿದ ಏಕೈಕ ಗೋಲಿನ ನೆರವಿನೊಂದಿಗೆ ಧಾರವಾಡ ತಂಡದ ವಿರುದ್ಧ ಜಯಿಸಿತು.
ಟೇಬಲ್ ಟೆನಿಸ್: ಸುನಂದ್ ವಾಸನ್ಗೆ ಪ್ರಶಸ್ತಿ
ಪ್ರಜಾವಾಣಿ ವಾರ್ತೆ
ಬೆಂಗಳೂರು: ಸುನಂದ್ ವಾಸನ್ ಇಲ್ಲಿ ನಡೆಯುತ್ತಿರುವ ಡಾ. ಎಂ.ಎಸ್. ರಾಮಯ್ಯ ಸ್ಮಾರಕ ಟೇಬಲ್ ಟೆನಿಸ್ ಟೂರ್ನಿಯ ಜೂನಿಯರ್ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಆದರು.
ಮಲ್ಲೇಶ್ವರಂ ಸಂಸ್ಥೆ ಹಾಲ್ನಲ್ಲಿ ಶುಕ್ರವಾರ ನಡೆದ ಫೈನಲ್ನಲ್ಲಿ ಸುನಂದ್ 12-10, 11-9, 6-11, 5-11, 11-8, 12-10 ರಲ್ಲಿ ಶ್ರೇಯಲ್ ಕೆ. ತೆಲಾಂಗ್ ಅವರನ್ನು ಮಣಿಸಿದರು.
ಸೆಮಿಫೈನಲ್ ಪಂದ್ಯಗಳಲ್ಲಿ ಸುನಂದ್ 11-9, 11-7, 6-11, 12-10, 11-3 ರಲ್ಲಿ ಕೇಶವರಾಜ್ ವಿರುದ್ಧ ಗೆಲುವು ಪಡೆದಿದ್ದರೆ, ಶ್ರೇಯಲ್ 9-11, 11-2, 15-13, 7-11, 9-11, 11-9, 11-8 ರಲ್ಲಿ ವಿ.ಪಿ. ಚರಣ್ ಅವರನ್ನು ಸೋಲಿಸಿದ್ದರು.
ಕರಣ್ ಜಿ. ನಾನ್ ಮೆಡಲಿಸ್ಟ್ ವಿಭಾಗದ ಪ್ರಶಸ್ತಿ ಗೆದ್ದರು. ಅವರು ಫೈನಲ್ನಲ್ಲಿ 11-4, 11-6, 11-9 ರಲ್ಲಿ ದಿನಕರ ನಾಯ್ಡು ವಿರುದ್ಧ ಗೆದ್ದರು. ಎಂ. ಮಾಧುರ್ಯ ಹಾಗೂ ಮೈತ್ರೇಯಿ ಬೈಲೂರ್ ಜೂನಿಯರ್ ಬಾಲಕಿಯರ ವಿಭಾಗದ ಫೈನಲ್ ಪ್ರವೇಶಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.