ಫೆ.25ರ ವರೆಗೆ ಕಾಲುವೆಗೆ ನೀರು?

ಕೆಂಭಾವಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಬೇಡಿಕೆಯಾಗಿರುವ ಎರಡನೇ ಬೆಳೆಗೆ ನೀರು ಹರಿಸುವ ಮಹತ್ವದ ನಿರ್ಣಯವು ಸೋಮವಾರ (ನ.18) ಆಲಮಟ್ಟಿಯಲ್ಲಿ ನಡೆಯುವ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳು ತೆಗೆದುಕೊಳ್ಳಲಿದ್ದಾರೆ.
ಆಲಿಮಟ್ಟಿ ಹಾಗೂ ನಾರಾಯಣಪುರ ಜಲಾಶಯಗಳಲ್ಲಿ ಸದ್ಯ ಲಭ್ಯವಿರುವ ನೀರು ನಿತ್ಯ ಫೆ. 25ರವರೆಗೆ ಮಾತ್ರ ಕಾಲುವೆಯಲ್ಲಿ ಹರಿಸಬಹುದು ಎಂದು ಕೃಷ್ಣಾ ಭಾಗ್ಯ ಜಲ ನಿಗಮದ ಮೂಲಗಳಿಂದ ತಿಳಿದು ಬಂದಿದೆ. ವಾರಾ ಬಂದಿ ಮೂಲಕ ನೀರು ಹರಿಸಿದರೆ ಮಾರ್ಚ್ ಅಂತ್ಯದವರೆಗೆ ನೀರು ಕೊಡಬಹುದು ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದರೆ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಯುವ ಬೇಸಿಗೆ ಬೆಳೆಗೆ ಕನಿಷ್ಠ ಮಾರ್ಚ್ ಅಂತ್ಯದವರೆಗಾದರೂ ನೀರು ಹರಿಸಲೇಬೇಕು ಎನ್ನುತ್ತಾರೆ ರೈತರು.
ಈ ಪ್ರದೆೇಶದಲ್ಲಿ ಹತ್ತಿ, ಮೆಣಸಿನಕಾಯಿ, ಶೇಂಗಾ, ಸಜ್ಜೆ, ಬಿಳಿಜೋಳ ಹಾಗೂ ಅತಿಹೆಚ್ಚು ಭತ್ತ ಬೆಳೆಯಲಾಗುತ್ತದೆ. ಶೇಂಗಾ ಕೂಡಾ ಹೆಚ್ಚಾಗಿ ಬೆಳೆಯುತ್ತಿದ್ದು, ಭತ್ತ ಹಾಗೂ ಶೇಂಗಾ ಬೆಳೆಗೆ ಮಾರ್ಚ್ ಅಂತ್ಯದವರೆಗೆ ನೀರು ಹರಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಫೆ. 25 ರ ವರೆಗೆ ನೀರು ಹರಿಸಿದರೆ, ಯಾವುದೇ ಬೆಳೆ ಬರುವುದು ಎಂದು ಹೇಳುತ್ತಾರೆ ರೈತ ಭೀಮಣ್ಣ.
ಕೃಷ್ಣಾ ಅಚ್ಚುಕಟ್ಟು ಪ್ರದೇಶದ ರೈತರ ಹಿತ ಕಾಪಾಡಲು ಮಾರ್ಚ್ ಅಂತ್ಯದವರೆಗಾದರೂ ನೀರು ಹರಿಸಬೇಕು. ಈ ಸಭೆ ರೈತರ ಹಿತ ಕಾಪಾಡುವ ಮಹತ್ವದ ಸಭೆಯಾಗಬೇಕಾಗಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಕಾಲುವೆ ನವೀಕರಣಕ್ಕಿಂತ ರೈತರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. ಕಾಲುವೆಗೆ ಸಮರ್ಪಕ ನೀರು ಕೊಟ್ಟು ರೈತನನ್ನು ಸಬಲರನ್ನಾಗಿ ಮಾಡಬೇಕು. ಇಲ್ಲದಿದ್ದರೆ ಈ ಭಾಗದ ಬಹುತೇಕ ಜನ ಕೆಲಸ ಅರಸಿ ಗುಳೆ ಹೋಗಬೇಕಾಗುತ್ತದೆ ಎಂದು ಕೆಜೆಪಿ ಮುಖಂಡ ವಿಕಾಸ ಸೊನ್ನದ ಹೇಳುತ್ತಾರೆ.
ಭತ್ತದ ಎರಡನೇ ಬೆಳೆಗೆ ನೀರು ಕೊಡುವಲ್ಲಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಶಾಸಕರು ಮತ್ತು ಸಚಿವರು ಮುತವರ್ಜಿ ವಹಿಸಿ, ನೀರಾವರಿ ಸಚಿವರು ಹಾಗೂ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಎರಡನೇ ಬೆಳೆಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.