<p>ಎ. ಕೆ. ರಾಮಾನುಜನ್ ಅವರ `ಥ್ರೀ ಹಂಡ್ರೆಡ್ ರಾಮಾಯಣಾಸ್: ಫೈವ್ ಎಕ್ಸಾಂಪಲ್ಸ್ ಅಂಡ್ ಥ್ರೀ ಥಾಟ್ಸ್ ಆನ್ ಟ್ರಾನ್ಸ್ಲೇಷನ್ಸ್~ (Three Hundred Ramayanas: Five Examples and Three Thoughts on Translations) ಎಂಬ ಪ್ರಸಿದ್ಧ ಲೇಖನ ಮೊದಲಿಗೆ ಚಿಕಾಗೋ ವಿ.ವಿ.ಯಲ್ಲಿ 1985-86ರಲ್ಲಿ ನಡೆದ ಕಮ್ಮಟವೊಂದರಲ್ಲಿ ಮಾಡಿದ ಭಾಷಣ; ಅನಂತರ ಅದನ್ನು ವಿಸ್ತರಿಸಿ, ಬರೆದ ಲೇಖನ ಪಾಲಾ ರಿಚ್ಮನ್ ಅವರ Many Ramayanas (1991) ಎಂಬ ಸಂಕಲನದ ಮೊದಲ ಲೇಖನವಾಗಿ ಪ್ರಕಟವಾಯಿತು.<br /> <br /> ವಿನಯ್ ಧಾರ್ವಾಡಕರ್ ಸಂಪಾದಿಸಿರುವ ರಾಮಾನುಜನ್ ಅವರ ಸಮಗ್ರ ಲೇಖನಗಳ ಸಂಕಲನದಲ್ಲಿ ಇದು ಸೇರ್ಪಡೆಯಾಗಿದೆ (1999; ಪು. 131-160). <br /> <br /> ತಮ್ಮ ಕಾಲದಲ್ಲಿ ಪ್ರಚಲಿತವಿದ್ದ ರಾಮ ಕಥೆಗಳನ್ನಾಧರಿಸಿ ವಾಲ್ಮೀಕಿ ಮುನಿಗಳು ಸಂಸ್ಕೃತದಲ್ಲಿ ಭಾರತದ ಆದಿಕಾವ್ಯವನ್ನು ಬರೆದ ನಂತರ, ಕಳೆದ 2500 ವರ್ಷಗಳ ಅವಧಿಯಲ್ಲಿ, ಭಾರತದ ಹಾಗೂ ದಕ್ಷಿಣ ಏಷ್ಯಾದ ಎಲ್ಲಾ ಭಾಷೆಗಳಲ್ಲಿಯೂ ರಾಮಕಥೆಯು ಮತ್ತೆ ಮತ್ತೆ ಕಥಿಸಲ್ಪಟ್ಟಿದೆ; ಮತ್ತು, ಈ ಪರಂಪರೆ ಇನ್ನೂ ಮುಂದುವರಿದಿದೆ. <br /> <br /> ಪ್ರಾಯಃ ಸಾವಿರವನ್ನೂ ಮೀರುವ ಇವೆಲ್ಲಾ ರಾಮಾಯಣಗಳನ್ನು ಯಾವ ಪರಿಪ್ರೇಕ್ಷ್ಯದಿಂದ ನೋಡಬಹುದು? ಈ ರಾಮಾಯಣಗಳಲ್ಲಿ ಕಂಡುಬರುವ ಭಿನ್ನತೆಗಳಲ್ಲಿ ಏನಾದರೂ ಸಮಾನ ವಿನ್ಯಾಸವಿದೆಯೆ? ರಾಮಾನುಜನ್ ಅವರ ತೌಲನಿಕ ಲೇಖನ ಈ ಕಠಿಣ ಪ್ರಶ್ನೆಗಳಿಗೆ ಉತ್ತರವನ್ನು ಶೋಧಿಸುತ್ತದೆ. <br /> <br /> ಈ ದೀರ್ಘ ಲೇಖನದಲ್ಲಿ ಚರ್ಚಿಸಲ್ಪಟ್ಟಿರುವ ವಿಷಯಗಳ ಹರಹು ಹೀಗಿದೆ: ಪೀಠಿಕೆ, ವಾಲ್ಮೀಕಿ ಮತ್ತು ಕಂಬನ್, ಜೈನ ರಾಮಾಯಣಗಳು, ಲಿಖಿತ-ಮೌಖಿಕ ಕಥನಗಳು, ದಕ್ಷಿಣ ಏಷ್ಯಾದ ಒಂದು ರಾಮಕಥೆ, ಭಿನ್ನತೆಗಳ ವಿನ್ಯಾಸ, ಭಾಷಾಂತರಗಳ ಸ್ವರೂಪ, ಮತ್ತು ರಾಮಾಯಣ ಶ್ರವಣದ ಪರಿಣಾಮ.<br /> <br /> ಪೀಠಿಕೆಯಲ್ಲಿ, ಒಂದು ಜಾನಪದ ಕಥೆಯ ಮೂಲಕ ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ, ಮೌಖಿಕ ಹಾಗೂ ಲಿಖಿತ ಪರಂಪರೆಗಳಲ್ಲಿ ಅನೇಕ ರಾಮಾಯಣಗಳಿರುವುದನ್ನು ದಾಖಲಿಸಿ, ತಮ್ಮ ಲೇಖನದ ಉದ್ದೇಶ `ಈ ಬಗೆಯ ನೂರಾರು ರಾಮಾಯಣಗಳ ಭಿನ್ನತೆಗಳಲ್ಲಿ ಇರಬಹುದಾದ `ವಿನ್ಯಾಸ~ವನ್ನು ಗುರುತಿಸುವುದು~ ಎಂದು ರಾಮಾನುಜನ್ ಮಂಡಿಸುತ್ತಾರೆ.<br /> <br /> ಅನಂತರ, ವಾಲ್ಮೀಕಿ-ಕಂಬನ್ ರಾಮಾಯಣಗಳಲ್ಲಿರುವ ಅಹಲ್ಯಾ ಪ್ರಕರಣವನ್ನು ತುಲನಾತ್ಮಕವಾಗಿ ವಿಶ್ಲೇಷಿಸುತ್ತಾ, ಕಂಬನ್ ರಾಮಾಯಣದಲ್ಲಿರುವ ಈ ಪ್ರಸಂಗದ ನಾಟಕೀಯತೆ ಹಾಗೂ ತಮಿಳು ಭಕ್ತಿಪಂಥದ ಪ್ರಭಾವ ಇತ್ಯಾದಿ ಅಂಶಗಳನ್ನು ರಾಮಾನುಜನ್ ವಿವರಿಸುತ್ತಾರೆ: ವಾಲ್ಮೀಕಿ ರಾಮಾಯಣದಲ್ಲಿ ಇಂದ್ರನು ಅಹಲ್ಯೆಯನ್ನು ವಂಚಿಸಿ ಭೋಗಿಸಿದರೆ, ಕಂಬನ್ ಕೃತಿಯಲ್ಲಿ, ತಾನು ತಪ್ಪು ಮಾಡುತ್ತಿದ್ದೆೀನೆಂದು ಅಹಲ್ಯೆಗೆ ಗೊತ್ತಿದ್ದರೂ ತನ್ನ ಮೋಹವನ್ನು ಜಯಿಸಲಾರದೆ ಅವಳು ಇಂದ್ರನಿಗೆ ವಶವಾಗುತ್ತಾಳೆ. <br /> <br /> ಅನಂತರ, ವಿಮಲಸೂರಿಯ ಪಉಮ ಚರಿಯದಿಂದ ಪ್ರಾರಂಭವಾಗುವ ಜೈನ ರಾಮಾಯಣಗಳು ಮತ್ತು ವಾಲ್ಮೀಕಿ ರಾಮಾಯಣ ಇವುಗಳ ನಡುವಿನ ಭಿನ್ನತೆಗಳನ್ನು ಹೀಗೆ ಗುರುತಿಸುತ್ತಾರೆ: ಜೈನ ರಾಮಾಯಣಗಳಲ್ಲಿ ರಾವಣನು ಕ್ರೂರ ರಾಕ್ಷಸನಲ್ಲ.<br /> <br /> 63 ಶಲಾಕಾಪುರುಷರಲ್ಲಿ ಒಬ್ಬ ಪ್ರತಿವಾಸುದೇವ; ಉದಾತ್ತ ರಾವಣನಿಗಿರುವ ಒಂದೇ ಒಂದು ಮಿತಿಯೆಂದರೆ ಸೀತಾ ವ್ಯಾಮೋಹ; ರಾವಣ ವಧೆಯಾಗುವುದು ಲಕ್ಷ್ಮಣನಿಂದ; ರಾವಣ, ಕುಂಭಕರ್ಣ, ವಾಲಿ, ಹನುಮಂತ, ಜಾಂಬವಂತ, ಮುಂತಾದವರು ರಾಕ್ಷಸರಾಗಲಿ ಕಪಿ ಕರಡಿಗಳಾಗಲಿ ಅಲ್ಲ. ಅವರೆಲರ್ಲೂ ವಿದ್ಯಾಧರ ಕುಲಕ್ಕೆ ಸೇರಿದವರು; ಇತ್ಯಾದಿ.<br /> <br /> ಮುಂದಿನ ಭಾಗದಲ್ಲಿ, ಲಿಖಿತ-ಮೌಖಿಕ ರಾಮಾಯಣ ಪರಂಪರೆಗಳನ್ನು ವ್ಯಾಖ್ಯಾನಿಸುತ್ತಾ, ರಾಮಾನುಜನ್ ಕನ್ನಡದ (ರಾಗೌ ಮುಂತಾದವರು ಸಂಪಾದಿಸಿರುವ, 1973ರಲ್ಲಿ ಪ್ರಕಟವಾದ) `ತಂಬೂರಿ ರಾಮಾಯಣ~ವನ್ನು ದೀರ್ಘವಾಗಿ ಚರ್ಚಿಸುತ್ತಾರೆ. <br /> <br /> ಮಕ್ಕಳಿಲ್ಲದ ರಾವಣನು ಮುನಿ ಕೊಟ್ಟ ಹಣ್ಣನ್ನು ತಾನೇ ಸೇವಿಸಿ, ಗರ್ಭವನ್ನು ಧರಿಸಿ, `ಸೀತಾಗ~ ಹೊರಬಂದ ಮಗು `ಸೀತೆ~; ಮುಂದೆ, ಅವಳು ತನ್ನ ಕುಲವನ್ನೇ ನಾಶಮಾಡುತ್ತಾಳೆಂಬ ಜೋತಿಷ್ಕರ ಹೇಳಿಕೆಯನ್ನು ನಂಬಿ, ಅವಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲಿ ಬಿಡುತ್ತಾನೆ ಮತ್ತು ಜನಕನಿಗೆ ಆ ಪೆಟ್ಟಿಗೆ ಸಿಕ್ಕಿ, ಅವನು ಆ ಮಗುವನ್ನು ತಂದು ಸಾಕುತ್ತಾನೆ. <br /> <br /> ರಾಮಾನುಜನ್ ಇಲ್ಲಿ ಗಮನಿಸುವ ಎರಡು ಪ್ರಮುಖ ಅಂಶಗಳೆಂದರೆ 1) ಸೀತೆ ರಾವಣನ ಮಗಳು, 2) ರಾವಣನು ಗರ್ಭಧಾರಣೆ ಮಾಡುವುದು. ಈ ಎರಡೂ ಘಟನೆಗಳ ಆಳದಲ್ಲಿ ಸ್ತ್ರೀವಿಶಿಷ್ಟ ಗರ್ಭಕೋಶ ಹಾಗೂ ಪ್ರಸವ ಇವುಗಳನ್ನು ಕುರಿತು ಪುರುಷನಿಗಿರುವ ಅಸೂಯೆ ಮತ್ತು ತನ್ನ ಮಗಳನ್ನು ಕುರಿತು ತಂದೆಗಿರುವ `ಈಡಿಪಸ್~ ಅಥವಾ `ಅಗಮ್ಯ ಗಮನ~ದ ಆಶಯ, ಇತ್ಯಾದಿಗಳನ್ನು ಗುರುತಿಸಿ, ರಾಮಾನುಜನ್ ಈ ಆಶಯಗಳು ಭಾರತೀಯ ಸಾಹಿತ್ಯದಲ್ಲಿ ವಿಫುಲವಾಗಿವೆ ಎಂದು ಮಂಡಿಸುತ್ತಾರೆ. <br /> <br /> ಅನಂತರ, ಥಾಯ್ ಭಾಷೆಯಲ್ಲಿರುವ ರಾಮಾಕೀನ್ ಎಂಬ ಹೆಸರಿನ ರಾಮಾಯಣ ವನ್ನು ವಿಶ್ಲೇಷಿಸುತ್ತಾ, ರಾಮಾನುಜನ್ ಈ ರಚನೆಯ ಭಿನ್ನತೆಗಳನ್ನು ಗುರುತಿಸುತ್ತಾರೆ: ಇಲ್ಲಿ ಸೀತೆಗೆ ವನವಾಸ ಪ್ರಾಪ್ತವಾಗುವುದು ಶೂರ್ಪನಖಿಯ ಕುಯುಕ್ತಿಯಿಂದ (ಕನ್ನಡದ ಚಿತ್ರಪಟ ರಾಮಾಯಣದಲ್ಲಿರುವಂತೆ); ಸೀತೆ ರಾವಣ-ಮಂಡೋದರಿಯರ ಮಗಳು, ಆದರೆ ಭವಿಷ್ಯದ್ವಾಣಿಗೆ ಹೆದರಿ ರಾವಣನು ಅವಳನ್ನು ದೂರಮಾಡುತ್ತಾನೆ; ಇತ್ಯಾದಿ.<br /> <br /> ಈ ಬಗೆಯಲ್ಲಿ, ವೈದಿಕ ಪರಂಪರೆಯ ರಾಮಾಯಣಗಳು, ಜೈನ ಪರಂಪರೆಯ ಹಾಗೂ ಮೌಖಿಕ ಪರಂಪರೆಯ ರಾಮಾಯಣಗಳು ಮತ್ತು ಆಗ್ನೇಯ ಏಷ್ಯಾದ ರಾಮಾಯಣಗಳು, ಇವುಗಳ ನಡುವಿನ ಸಮಾನತೆ-ಭಿನ್ನತೆಗಳನ್ನು ಗುರುತಿಸಿದ ನಂತರ, ಈ ಲೇಖನದ ಎರಡು ಮುಖ್ಯ ಭಾಗಗಳು ಬರುತ್ತವೆ. <br /> <br /> `ಭಿನ್ನತೆಗಳ ವಿನ್ಯಾಸ~ ಎಂಬ ಭಾಗದಲ್ಲಿ, ಹೇಗೆ ಈ ಪರಂಪರೆಗಳಲ್ಲಿ ಎರಡು ಭಿನ್ನ ಮುಕ್ತಾಯಗಳ (ಪಟ್ಟಾಭಿಷೇಕ/ ಲವ-ಕುಶ ಜನನ) ಹಾಗೂ ಎರಡು ಭಿನ್ನ ಪ್ರಾರಂಭಗಳ ರಾಮಾಯಣಗಳಿವೆ; ಮತ್ತು ಇವುಗಳು ಆಳದಲ್ಲಿ (ಮುಖ್ಯವಾಗಿ ಸೀತೆ) ಫಲವಂತಿಕೆ ಮತ್ತು ನಿಸರ್ಗ-ಮಾನವ ಸಂಬಂಧಗಳ ರೂಪಕಗಳು ಎಂದು ರಾಮಾನುಜನ್ ವಿವರಿಸುತ್ತಾರೆ. <br /> <br /> ಹಾಗೆಯೇ, ಪ್ರತಿಯೊಂದು ರಾಮಾಯಣವನ್ನೂ ಅದರ `ಸಂದರ್ಭ,~ ಎಂದರೆ, ಆ ಕೃತಿ ರಚನೆಯಾದ ಭಾಷಿಕ ಸಂದರ್ಭ, ಪ್ರಾದೇಶಿಕ ಪರಂಪರೆ, ಆ ಸಮುದಾಯದ/ಲೇಖಕನ ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಮೌಲ್ಯಗಳು, ಇತ್ಯಾದಿ ರೂಪಿಸುತ್ತವೆ ಎಂಬ ತೀರ್ಮಾನಕ್ಕೆ ಬರುತ್ತಾರೆ. <br /> <br /> ಈ ಸಂದರ್ಭದಲ್ಲಿಯೇ ಅವರ ಪ್ರಖ್ಯಾತ ಹೇಳಿಕೆ ಬರುತ್ತದೆ: `ರಾಮಾಯಣವೆಂದರೆ ಭಾರತದ ಎರಡನೆಯ ಭಾಷೆ~. ಮುಂದಿನ ಭಾಗದಲ್ಲಿ, ರಾಮಕಥೆಯ ಈ ಭಿನ್ನ ರೂಪಣೆಗಳನ್ನು `ಅನುವಾದ~ಗಳೆಂದು ಕರೆಯಬಹುದು ಎಂದು ವಾದಿಸುತ್ತಾ, ರಾಮಾನುಜನ್ ಮೂರುಬಗೆಯ ಅನುವಾದ ಮಾರ್ಗಗಳನ್ನು ವಿವರಿಸುತ್ತಾರೆ (Iconic/Indexical/ Symbolic). ಅನಂತರ, ಎಲ್ಲಾ ರಾಮಾಯಣಗಳನ್ನೂ ಒಳಗೊಳ್ಳುವ ಒಂದು ಸ್ವೋಪಜ್ಞ ವಿಮರ್ಶಾತ್ಮಕ ಚೌಕಟ್ಟನ್ನು ರೂಪಕಾತ್ಮಕವಾಗಿ ರಾಮಾನುಜನ್ ಹೀಗೆ ಕಟ್ಟುತ್ತಾರೆ:<br /> <br /> `ನಿಯತವಾಗಿ, ಮತ್ತೆ ಮತ್ತೆ ರಾಮಾಯಣಗಳು ಸೃಷ್ಟಿಯಾದ ಸಾಂಸ್ಕೃತಿಕ ಪ್ರದೇಶವನ್ನು ಬಗೆಬಗೆಯ ಸೂಚಕಗಳಿಂದ ತುಂಬಿರುವ ಒಂದು ಅಗಾಧ ಸರೋವರದಂತೆ ನೋಡಬಹುದು. <br /> <br /> ಈ ಸೂಚಕಗಳೆಂದರೆ, ಕಥನ ಚೌಕಟ್ಟುಗಳು, ಪಾತ್ರಗಳು, ಹೆಸರುಗಳು, ಭೂಗೋಳ, ಘಟನೆಗಳು ಮತ್ತು ಸಂಬಂಧಗಳು, ಇತ್ಯಾದಿ. ... ಪ್ರತಿಯೊಬ್ಬ ಭಾರತೀಯ ಲೇಖಕನೂ ಈ ಸರೋವರದಲ್ಲಿ ಮುಳುಗಿ ತನ್ನದೇ ಆದ ಒಂದು ವಿಶಿಷ್ಟ ಪಠ್ಯವನ್ನು ಹೊರತೆಗೆಯುತ್ತಾನೆ... ಈ ಅರ್ಥದಲ್ಲಿ (ರಾಮಾಯಣದ) ಯಾವ ಪಠ್ಯವೂ ಮೂಲವಲ್ಲ. ಆದರೆ ಯಾವ ಕಥನವೂ ಕೇವಲ ಮರುಕಥನವಲ್ಲ; ಮತ್ತು ಈ ಕಥೆಗೆ ಕೊನೆಯಿಲ್ಲ. ಆದರೆ ಪ್ರತಿಯೊಂದು ಪಠ್ಯವೂ ಸ್ವಯಂ ಪೂರ್ಣವಾಗಿರುತ್ತದೆ~ (ಪು. 158).<br /> <br /> ಕೊನೆಯಲ್ಲಿ, ರಾಮಾಯಣ-ಶ್ರವಣದ ಪರಿಣಾಮವನ್ನು ದಾಖಲಿಸುವ ಒಂದು ಕಥೆಯೊಡನೆ ರಾಮಾನುಜನ್ ತಮ್ಮ ಲೇಖನವನ್ನು ಮುಗಿಸುತ್ತಾರೆ.<br /> <br /> ಕಳೆದ ಎರಡು ದಶಕಗಳಲ್ಲಿ ಅಂತರರಾಷ್ಟ್ರೀಯ ವಿದ್ವತ್ ಮನ್ನಣೆಯನ್ನು ಗಳಿಸಿರುವ ಹಾಗೂ ಸಾಂಸ್ಕೃತಿಕ ತೌಲನಿಕ ವಿಮರ್ಶೆಯ ಒಂದು ಪ್ರಮುಖ ಮಾದರಿಯಾಗಿರುವ ರಾಮಾನುಜನ್ ಅವರ ಈ ಲೇಖನ ಇತ್ತೀಚೆಗೆ ದೆಹಲಿ ವಿ.ವಿ.ಯಲ್ಲಿ ವಾದ-ವಿವಾದಗಳಿಗೆ ಗುರಿಯಾಗಿ, ಕೊನೆಗೆ ಅದನ್ನು ಪಠ್ಯಾವಳಿಯಿಂದ ಬಿಟ್ಟಿರುವುದು ಅತ್ಯಂತ ಖೇದದ ಸಂಗತಿ. <br /> 2006ರಲ್ಲಿ ಈ ಲೇಖನ ಬಿ.ಎ. ಆನರ್ಸ್ `ಕಲ್ಚರಲ್ ಹಿಸ್ಟರಿ~ ಪಠ್ಯಕ್ರಮದಲ್ಲಿ ಸೇರಿಸಲ್ಪಟ್ಟಿತು; 2008ರಲ್ಲಿಯೇ ಎಬಿವಿಪಿ ಕಾರ್ಯಕರ್ತರು ಈ ಲೇಖನದ ವಿರುದ್ಧ ಗಲಭೆ ಮಾಡಿ, ಇತಿಹಾಸ ವಿಭಾಗಕ್ಕೆ ನುಗ್ಗಿ, ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು. <br /> <br /> ಅನಂತರ, ಈ ವಿಷಯ ಸುಪ್ರೀಂ ಕೋರ್ಟ್ಗೆ ಹೋಗಿ, ಅದರ ಆದೇಶದಂತೆ ರಚಿಸಲ್ಪಟ್ಟ ನಾಲ್ಕು ತಜ್ಞರ ಸಮಿತಿಯಲ್ಲಿ ಮೂವರು `ಇದು ಮೌಲಿಕ ಸಂಶೋಧನೆಯನ್ನು ಒಳಗೊಂಡಿದೆ~ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು; ಆದರೆ, ನಾಲ್ಕನೆಯವರು `ಈ ಲೇಖನವನ್ನು ಹಿಂದುಗಳಲ್ಲದವರು ಪಾಠ ಮಾಡಲು ಅಸಾಧ್ಯ; ಮತ್ತು ಇದನ್ನು ಅರ್ಥಮಾಡಿಕೊಳ್ಳಲು ಕಿಶೋರಾವಸ್ಥೆಯ ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ; ಆದುದರಿಂದ ಇದನ್ನು ಪಠ್ಯಾವಳಿಯಿಂದ ತೆಗೆಯಬೇಕು~ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು. <br /> <br /> ಎರಡು ವಾರಗಳ ಹಿಂದೆ, ಈ ಒಬ್ಬರ ವಾದವನ್ನು ಒಪ್ಪಿ, ದೆಹಲಿ ವಿ. ವಿ.ಯ ಅಕಡೆಮಿಕ್ ಕೌನ್ಸಿಲ್ ಈ ಲೇಖನವನ್ನು ಪಠ್ಯಾವಳಿಯಿಂದ ತೆಗೆದು ಹಾಕಿತು. <br /> <br /> ಎಬಿವಿಪಿ ಮತ್ತು ಇತರ ಬಲಪಂಥೀಯರು ಈ ಲೇಖನವನ್ನು ವಿರೋಧಿಸುವ ಕಾರಣಗಳು (ಪತ್ರಿಕೆಗಳಲ್ಲಿ ಬಂದಂತೆ) ಮೂರು: ಕೆಲವು ರಾಮಾಯಣಗಳು ಸೀತೆ ರಾವಣನ ಮಗಳೆಂದು ನಿರೂಪಿಸುತ್ತವೆ ಎಂಬುದನ್ನು ಈ ಲೇಖನ ಪ್ರಸ್ತಾಪಿಸುತ್ತದೆ; ಅವತಾರ ಪುರುಷನಾದ ರಾಮನನ್ನು ಮಾನವನೆಂದು ಕೆಲವು ರಾಮಾಯಣಗಳು ನಿರೂಪಿಸುವುದನ್ನು ರಾಮಾನುಜನ್ ದಾಖಲಿಸುತ್ತಾರೆ; ಮತ್ತು, ಈ ಬಗೆಯ ಚರ್ಚೆ `ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡುತ್ತದೆ.~ <br /> <br /> ಸೀತೆ ರಾವಣನ ಮಗಳೆಂದು ಕನ್ನಡ-ತೆಲುಗು ಮೌಖಿಕ ರಾಮಾಯಣಗಳಲ್ಲಿ. ಜೈನ ಪರಂಪರೆಯ ವಾಸುದೇವಹಿಂಡಿ ಎಂಬ ಕಥನದಲ್ಲಿ, ಮತ್ತು ಆಗ್ನೇಯ ಏಷ್ಯಾದ (ಥಾಯ್) ರಾಮಾಕೀನ್ ಕೃತಿಯಲ್ಲಿ ನಿರೂಪಿಸಲ್ಪಟ್ಟಿದೆ ಎಂಬುದನ್ನು ರಾಮಾನುಜನ್ ದಾಖಲಿಸುತ್ತಾರೆ, ನಿಜ.<br /> <br /> ಆದರೆ, ಇನ್ನೂ ಅನೇಕ ಲಿಖಿತ-ಮೌಖಿಕ ರಾಮಾಯಣಗಳಲ್ಲಿ ಸೀತೆ ರಾವಣನ ಮಗಳೆಂದು ನಿರೂಪಿಸಲ್ಪಟ್ಟಿದೆ: 10 ನೆಯ ಶತಮಾನದ ಅಭಿನಂದನನ ಸಂಸ್ಕೃತ ರಾಮಚರಿತ; 12 ನೆಯ ಶತಮಾನದ ಸಂಸ್ಕೃತ ಅದ್ಭುತ ರಾಮಾಯಣ; ಒರಿಯಾ ಭಾಷೆಯ, 18ನೆಯ ಶತಮಾನದ ಸರಳದಾಸನ ರಾಮಾಯಣ; ಮೌಖಿಕ ಸಂಪ್ರದಾಯದ ಕುಕಣಾ ರಾಮಾಯಣ, ಅವಧ್ ರಾಮಾಯಣ ಇತ್ಯಾದಿ.<br /> <br /> ಭಿನ್ನ ಕಾಲಘಟ್ಟಗಳಲ್ಲಿ, ಭಿನ್ನ ಭಾಷಿಕ ಸಮುದಾಯಗಳಲ್ಲಿ ಪ್ರಚಲಿತವಿದ್ದ `ಕಥೆ-ಐತಿಹ್ಯ~ಗಳನ್ನು ಆಧರಿಸಿ ಈ ಕೃತಿಗಳು ರಚಿಸಲ್ಪಟ್ಟಿವೆ; ಮತ್ತು, ವಾಲ್ಮೀಕಿ ರಾಮಾಯಣಕ್ಕೂ ಮೊದಲು ರಾಮ-ರಾವಣ ಕಥೆಗಳು ಜಾತಕ ಕಥೆಗಳಲ್ಲಿ ಇದ್ದುವು ಎಂಬುದನ್ನು ಮಿರ್ಜಿ ಆಣ್ಣಾರಾಯರು, ಜಾಕೋಬಿ, ರೋಮಿಲಾ ಥಾಪರ್ ಮುಂತಾದವರು ಅಧಿಕಾರಯುತವಾಗಿ ತೀರ್ಮಾನಿಸಿದ್ದಾರೆ. <br /> <br /> ಮುಖ್ಯವಾಗಿ ಇಲ್ಲಿ ಗಮನಿಸಬೇಕಾದುದು ರಾಮಾನುಜನ್ ಅವರ ವಿಮರ್ಶಾತ್ಮಕ ನಿಲುವು: ತೌಲನಿಕ ವಿಮರ್ಶೆಯಲ್ಲಿ `ಇದು ಸರಿ, ಇದು ತಪ್ಪು~ ಎಂಬಂತಹ ಮೌಲ್ಯಾತ್ಮಕ ನಿಲುವಿರುವುದಿಲ್ಲ. ಅದರ ಬದಲು ವಿವರಣೆ ಹಾಗೂ ಸಾಂಸ್ಕೃತಿಕ ವ್ಯಾಖ್ಯಾನ. ರಾಮಾನುಜನ್ ಅವರದು ಈ ಬಗೆಯ ವಸ್ತುನಿಷ್ಠ ತೌಲನಿಕ ವ್ಯಾಖ್ಯಾನ. <br /> <br /> ಇನ್ನೂ ಮುಖ್ಯವಾಗಿ ಶ್ರೀರಾಮನ ದೈವತ್ವದ/ ಚಾರಿತ್ರಿಕತೆಯ ಪ್ರಶ್ನೆ. ಪ್ರಾಚೀನ ಕಾಲದಿಂದಲೂ ಭಾರತೀಯ ವಿದ್ವಾಂಸರು ಮಹಾಭಾರತವನ್ನು ಇತಿಹಾಸವೆಂದು ಮತ್ತು ರಾಮಾಯಣವನ್ನು ಕಾವ್ಯವೆಂದು ಪರಿಗಣಿಸಿದ್ದಾರೆ. <br /> <br /> ರಾಮನ ಮಾನವತೆಯನ್ನು ವಾಲ್ಮೀಕಿ ಮುನಿಗಳ ರಾಮಾಯಣದ ಎರಡನೆಯ ಶ್ಲೋಕವೇ ದೃಢಪಡಿಸುತ್ತದೆ: `ಕೋ..ನಸ್ಮಿನ್ ಸಂಪ್ರತಮ್ ಲೋಕೆ..~ (ಎಂದರೆ `ಈ ಲೋಕದಲ್ಲಿ ಯಾರು ಗುಣವಾನ್, ವೀರ್ಯವಾನ್ ಇತ್ಯಾದಿ ವಿಶೇಷಣಗಳಿಗೆ ಪಾತ್ರರಾದವರು~) ಎಂದು ಮುನಿಗಳು ನಾರದರನ್ನು ಕೇಳುತ್ತಾರೆ; ಮತ್ತು ನಾರದರು ಶ್ರೀರಾಮನನ್ನು ಹೆಸರಿಸುತ್ತಾರೆ. <br /> ಹಾಗೆಯೇ, ಕಾವ್ಯದ ಕೊನೆಯಲ್ಲಿ ಶ್ರೀರಾಮನು ತಾನು ಮನುಷ್ಯಮಾತ್ರ ಎಂಬುದನ್ನು ಹೀಗೆ ಸ್ಪಷ್ಟಪಡಿಸುತ್ತಾನೆ: `ಆತ್ಮಾನಂ ಮಾನುಷಂ ಮನ್ಯೆ~.<br /> <br /> Speaking of Siva, Hymns for the Drowning, Poems of ove and War ಇತ್ಯಾದಿ ಅನುವಾದಿತ ಕೃತಿಗಳ ಮೂಲಕ ಹಾಗೂ ತಮ್ಮ ಸ್ವೋಪಜ್ಞ ವಿಮರ್ಶಾತ್ಮಕ ಲೇಖನಗಳ ಮೂಲಕ ರಾಮಾನುಜನ್ ಭಾರತದ ಪ್ರಾಂತೀಯ ಭಾಷೆಗಳ ಸಾಹಿತ್ಯ-ಸಂಸ್ಕೃತಿಗಳನ್ನು ಹೊರ ಜಗತ್ತಿಗೆ ಪರಿಚಯಿಸಿ, ಆ ಮೂಲಕ `ಓರಿಯೆಂಟಲಿಸ್ಟ್~ ಚಿಂತನೆಗೆ ವಸಾಹತೋತ್ತರ ರೂಪವನ್ನು ಕೊಟ್ಟರು. ಅಂತಹ ಭಾರತೀಯ ವಿದ್ವಾಂಸನ ಪ್ರಬುದ್ಧ ಸಂಶೋಧನಾ ಲೇಖನವನ್ನು ಕುರಿತ ಪ್ರತಿಭಟನೆ ಅತೀವ ದುರದೃಷ್ಟಕರ ಎಂದಷ್ಟೇ ಹೇಳಬಹುದು.<br /> <br /> <strong>* ಆರ್. ಇಂದಿರಾ ಅವರ ಹೊಸದಾರಿ ಅಂಕಣ ಅನಿವಾರ್ಯ ಕಾರಣಗಳಿಂದ ಪ್ರಕಟವಾಗಿಲ್ಲ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎ. ಕೆ. ರಾಮಾನುಜನ್ ಅವರ `ಥ್ರೀ ಹಂಡ್ರೆಡ್ ರಾಮಾಯಣಾಸ್: ಫೈವ್ ಎಕ್ಸಾಂಪಲ್ಸ್ ಅಂಡ್ ಥ್ರೀ ಥಾಟ್ಸ್ ಆನ್ ಟ್ರಾನ್ಸ್ಲೇಷನ್ಸ್~ (Three Hundred Ramayanas: Five Examples and Three Thoughts on Translations) ಎಂಬ ಪ್ರಸಿದ್ಧ ಲೇಖನ ಮೊದಲಿಗೆ ಚಿಕಾಗೋ ವಿ.ವಿ.ಯಲ್ಲಿ 1985-86ರಲ್ಲಿ ನಡೆದ ಕಮ್ಮಟವೊಂದರಲ್ಲಿ ಮಾಡಿದ ಭಾಷಣ; ಅನಂತರ ಅದನ್ನು ವಿಸ್ತರಿಸಿ, ಬರೆದ ಲೇಖನ ಪಾಲಾ ರಿಚ್ಮನ್ ಅವರ Many Ramayanas (1991) ಎಂಬ ಸಂಕಲನದ ಮೊದಲ ಲೇಖನವಾಗಿ ಪ್ರಕಟವಾಯಿತು.<br /> <br /> ವಿನಯ್ ಧಾರ್ವಾಡಕರ್ ಸಂಪಾದಿಸಿರುವ ರಾಮಾನುಜನ್ ಅವರ ಸಮಗ್ರ ಲೇಖನಗಳ ಸಂಕಲನದಲ್ಲಿ ಇದು ಸೇರ್ಪಡೆಯಾಗಿದೆ (1999; ಪು. 131-160). <br /> <br /> ತಮ್ಮ ಕಾಲದಲ್ಲಿ ಪ್ರಚಲಿತವಿದ್ದ ರಾಮ ಕಥೆಗಳನ್ನಾಧರಿಸಿ ವಾಲ್ಮೀಕಿ ಮುನಿಗಳು ಸಂಸ್ಕೃತದಲ್ಲಿ ಭಾರತದ ಆದಿಕಾವ್ಯವನ್ನು ಬರೆದ ನಂತರ, ಕಳೆದ 2500 ವರ್ಷಗಳ ಅವಧಿಯಲ್ಲಿ, ಭಾರತದ ಹಾಗೂ ದಕ್ಷಿಣ ಏಷ್ಯಾದ ಎಲ್ಲಾ ಭಾಷೆಗಳಲ್ಲಿಯೂ ರಾಮಕಥೆಯು ಮತ್ತೆ ಮತ್ತೆ ಕಥಿಸಲ್ಪಟ್ಟಿದೆ; ಮತ್ತು, ಈ ಪರಂಪರೆ ಇನ್ನೂ ಮುಂದುವರಿದಿದೆ. <br /> <br /> ಪ್ರಾಯಃ ಸಾವಿರವನ್ನೂ ಮೀರುವ ಇವೆಲ್ಲಾ ರಾಮಾಯಣಗಳನ್ನು ಯಾವ ಪರಿಪ್ರೇಕ್ಷ್ಯದಿಂದ ನೋಡಬಹುದು? ಈ ರಾಮಾಯಣಗಳಲ್ಲಿ ಕಂಡುಬರುವ ಭಿನ್ನತೆಗಳಲ್ಲಿ ಏನಾದರೂ ಸಮಾನ ವಿನ್ಯಾಸವಿದೆಯೆ? ರಾಮಾನುಜನ್ ಅವರ ತೌಲನಿಕ ಲೇಖನ ಈ ಕಠಿಣ ಪ್ರಶ್ನೆಗಳಿಗೆ ಉತ್ತರವನ್ನು ಶೋಧಿಸುತ್ತದೆ. <br /> <br /> ಈ ದೀರ್ಘ ಲೇಖನದಲ್ಲಿ ಚರ್ಚಿಸಲ್ಪಟ್ಟಿರುವ ವಿಷಯಗಳ ಹರಹು ಹೀಗಿದೆ: ಪೀಠಿಕೆ, ವಾಲ್ಮೀಕಿ ಮತ್ತು ಕಂಬನ್, ಜೈನ ರಾಮಾಯಣಗಳು, ಲಿಖಿತ-ಮೌಖಿಕ ಕಥನಗಳು, ದಕ್ಷಿಣ ಏಷ್ಯಾದ ಒಂದು ರಾಮಕಥೆ, ಭಿನ್ನತೆಗಳ ವಿನ್ಯಾಸ, ಭಾಷಾಂತರಗಳ ಸ್ವರೂಪ, ಮತ್ತು ರಾಮಾಯಣ ಶ್ರವಣದ ಪರಿಣಾಮ.<br /> <br /> ಪೀಠಿಕೆಯಲ್ಲಿ, ಒಂದು ಜಾನಪದ ಕಥೆಯ ಮೂಲಕ ಭಾರತದಲ್ಲಿ ಮತ್ತು ಇತರ ದೇಶಗಳಲ್ಲಿ, ಮೌಖಿಕ ಹಾಗೂ ಲಿಖಿತ ಪರಂಪರೆಗಳಲ್ಲಿ ಅನೇಕ ರಾಮಾಯಣಗಳಿರುವುದನ್ನು ದಾಖಲಿಸಿ, ತಮ್ಮ ಲೇಖನದ ಉದ್ದೇಶ `ಈ ಬಗೆಯ ನೂರಾರು ರಾಮಾಯಣಗಳ ಭಿನ್ನತೆಗಳಲ್ಲಿ ಇರಬಹುದಾದ `ವಿನ್ಯಾಸ~ವನ್ನು ಗುರುತಿಸುವುದು~ ಎಂದು ರಾಮಾನುಜನ್ ಮಂಡಿಸುತ್ತಾರೆ.<br /> <br /> ಅನಂತರ, ವಾಲ್ಮೀಕಿ-ಕಂಬನ್ ರಾಮಾಯಣಗಳಲ್ಲಿರುವ ಅಹಲ್ಯಾ ಪ್ರಕರಣವನ್ನು ತುಲನಾತ್ಮಕವಾಗಿ ವಿಶ್ಲೇಷಿಸುತ್ತಾ, ಕಂಬನ್ ರಾಮಾಯಣದಲ್ಲಿರುವ ಈ ಪ್ರಸಂಗದ ನಾಟಕೀಯತೆ ಹಾಗೂ ತಮಿಳು ಭಕ್ತಿಪಂಥದ ಪ್ರಭಾವ ಇತ್ಯಾದಿ ಅಂಶಗಳನ್ನು ರಾಮಾನುಜನ್ ವಿವರಿಸುತ್ತಾರೆ: ವಾಲ್ಮೀಕಿ ರಾಮಾಯಣದಲ್ಲಿ ಇಂದ್ರನು ಅಹಲ್ಯೆಯನ್ನು ವಂಚಿಸಿ ಭೋಗಿಸಿದರೆ, ಕಂಬನ್ ಕೃತಿಯಲ್ಲಿ, ತಾನು ತಪ್ಪು ಮಾಡುತ್ತಿದ್ದೆೀನೆಂದು ಅಹಲ್ಯೆಗೆ ಗೊತ್ತಿದ್ದರೂ ತನ್ನ ಮೋಹವನ್ನು ಜಯಿಸಲಾರದೆ ಅವಳು ಇಂದ್ರನಿಗೆ ವಶವಾಗುತ್ತಾಳೆ. <br /> <br /> ಅನಂತರ, ವಿಮಲಸೂರಿಯ ಪಉಮ ಚರಿಯದಿಂದ ಪ್ರಾರಂಭವಾಗುವ ಜೈನ ರಾಮಾಯಣಗಳು ಮತ್ತು ವಾಲ್ಮೀಕಿ ರಾಮಾಯಣ ಇವುಗಳ ನಡುವಿನ ಭಿನ್ನತೆಗಳನ್ನು ಹೀಗೆ ಗುರುತಿಸುತ್ತಾರೆ: ಜೈನ ರಾಮಾಯಣಗಳಲ್ಲಿ ರಾವಣನು ಕ್ರೂರ ರಾಕ್ಷಸನಲ್ಲ.<br /> <br /> 63 ಶಲಾಕಾಪುರುಷರಲ್ಲಿ ಒಬ್ಬ ಪ್ರತಿವಾಸುದೇವ; ಉದಾತ್ತ ರಾವಣನಿಗಿರುವ ಒಂದೇ ಒಂದು ಮಿತಿಯೆಂದರೆ ಸೀತಾ ವ್ಯಾಮೋಹ; ರಾವಣ ವಧೆಯಾಗುವುದು ಲಕ್ಷ್ಮಣನಿಂದ; ರಾವಣ, ಕುಂಭಕರ್ಣ, ವಾಲಿ, ಹನುಮಂತ, ಜಾಂಬವಂತ, ಮುಂತಾದವರು ರಾಕ್ಷಸರಾಗಲಿ ಕಪಿ ಕರಡಿಗಳಾಗಲಿ ಅಲ್ಲ. ಅವರೆಲರ್ಲೂ ವಿದ್ಯಾಧರ ಕುಲಕ್ಕೆ ಸೇರಿದವರು; ಇತ್ಯಾದಿ.<br /> <br /> ಮುಂದಿನ ಭಾಗದಲ್ಲಿ, ಲಿಖಿತ-ಮೌಖಿಕ ರಾಮಾಯಣ ಪರಂಪರೆಗಳನ್ನು ವ್ಯಾಖ್ಯಾನಿಸುತ್ತಾ, ರಾಮಾನುಜನ್ ಕನ್ನಡದ (ರಾಗೌ ಮುಂತಾದವರು ಸಂಪಾದಿಸಿರುವ, 1973ರಲ್ಲಿ ಪ್ರಕಟವಾದ) `ತಂಬೂರಿ ರಾಮಾಯಣ~ವನ್ನು ದೀರ್ಘವಾಗಿ ಚರ್ಚಿಸುತ್ತಾರೆ. <br /> <br /> ಮಕ್ಕಳಿಲ್ಲದ ರಾವಣನು ಮುನಿ ಕೊಟ್ಟ ಹಣ್ಣನ್ನು ತಾನೇ ಸೇವಿಸಿ, ಗರ್ಭವನ್ನು ಧರಿಸಿ, `ಸೀತಾಗ~ ಹೊರಬಂದ ಮಗು `ಸೀತೆ~; ಮುಂದೆ, ಅವಳು ತನ್ನ ಕುಲವನ್ನೇ ನಾಶಮಾಡುತ್ತಾಳೆಂಬ ಜೋತಿಷ್ಕರ ಹೇಳಿಕೆಯನ್ನು ನಂಬಿ, ಅವಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ನದಿಯಲ್ಲಿ ತೇಲಿ ಬಿಡುತ್ತಾನೆ ಮತ್ತು ಜನಕನಿಗೆ ಆ ಪೆಟ್ಟಿಗೆ ಸಿಕ್ಕಿ, ಅವನು ಆ ಮಗುವನ್ನು ತಂದು ಸಾಕುತ್ತಾನೆ. <br /> <br /> ರಾಮಾನುಜನ್ ಇಲ್ಲಿ ಗಮನಿಸುವ ಎರಡು ಪ್ರಮುಖ ಅಂಶಗಳೆಂದರೆ 1) ಸೀತೆ ರಾವಣನ ಮಗಳು, 2) ರಾವಣನು ಗರ್ಭಧಾರಣೆ ಮಾಡುವುದು. ಈ ಎರಡೂ ಘಟನೆಗಳ ಆಳದಲ್ಲಿ ಸ್ತ್ರೀವಿಶಿಷ್ಟ ಗರ್ಭಕೋಶ ಹಾಗೂ ಪ್ರಸವ ಇವುಗಳನ್ನು ಕುರಿತು ಪುರುಷನಿಗಿರುವ ಅಸೂಯೆ ಮತ್ತು ತನ್ನ ಮಗಳನ್ನು ಕುರಿತು ತಂದೆಗಿರುವ `ಈಡಿಪಸ್~ ಅಥವಾ `ಅಗಮ್ಯ ಗಮನ~ದ ಆಶಯ, ಇತ್ಯಾದಿಗಳನ್ನು ಗುರುತಿಸಿ, ರಾಮಾನುಜನ್ ಈ ಆಶಯಗಳು ಭಾರತೀಯ ಸಾಹಿತ್ಯದಲ್ಲಿ ವಿಫುಲವಾಗಿವೆ ಎಂದು ಮಂಡಿಸುತ್ತಾರೆ. <br /> <br /> ಅನಂತರ, ಥಾಯ್ ಭಾಷೆಯಲ್ಲಿರುವ ರಾಮಾಕೀನ್ ಎಂಬ ಹೆಸರಿನ ರಾಮಾಯಣ ವನ್ನು ವಿಶ್ಲೇಷಿಸುತ್ತಾ, ರಾಮಾನುಜನ್ ಈ ರಚನೆಯ ಭಿನ್ನತೆಗಳನ್ನು ಗುರುತಿಸುತ್ತಾರೆ: ಇಲ್ಲಿ ಸೀತೆಗೆ ವನವಾಸ ಪ್ರಾಪ್ತವಾಗುವುದು ಶೂರ್ಪನಖಿಯ ಕುಯುಕ್ತಿಯಿಂದ (ಕನ್ನಡದ ಚಿತ್ರಪಟ ರಾಮಾಯಣದಲ್ಲಿರುವಂತೆ); ಸೀತೆ ರಾವಣ-ಮಂಡೋದರಿಯರ ಮಗಳು, ಆದರೆ ಭವಿಷ್ಯದ್ವಾಣಿಗೆ ಹೆದರಿ ರಾವಣನು ಅವಳನ್ನು ದೂರಮಾಡುತ್ತಾನೆ; ಇತ್ಯಾದಿ.<br /> <br /> ಈ ಬಗೆಯಲ್ಲಿ, ವೈದಿಕ ಪರಂಪರೆಯ ರಾಮಾಯಣಗಳು, ಜೈನ ಪರಂಪರೆಯ ಹಾಗೂ ಮೌಖಿಕ ಪರಂಪರೆಯ ರಾಮಾಯಣಗಳು ಮತ್ತು ಆಗ್ನೇಯ ಏಷ್ಯಾದ ರಾಮಾಯಣಗಳು, ಇವುಗಳ ನಡುವಿನ ಸಮಾನತೆ-ಭಿನ್ನತೆಗಳನ್ನು ಗುರುತಿಸಿದ ನಂತರ, ಈ ಲೇಖನದ ಎರಡು ಮುಖ್ಯ ಭಾಗಗಳು ಬರುತ್ತವೆ. <br /> <br /> `ಭಿನ್ನತೆಗಳ ವಿನ್ಯಾಸ~ ಎಂಬ ಭಾಗದಲ್ಲಿ, ಹೇಗೆ ಈ ಪರಂಪರೆಗಳಲ್ಲಿ ಎರಡು ಭಿನ್ನ ಮುಕ್ತಾಯಗಳ (ಪಟ್ಟಾಭಿಷೇಕ/ ಲವ-ಕುಶ ಜನನ) ಹಾಗೂ ಎರಡು ಭಿನ್ನ ಪ್ರಾರಂಭಗಳ ರಾಮಾಯಣಗಳಿವೆ; ಮತ್ತು ಇವುಗಳು ಆಳದಲ್ಲಿ (ಮುಖ್ಯವಾಗಿ ಸೀತೆ) ಫಲವಂತಿಕೆ ಮತ್ತು ನಿಸರ್ಗ-ಮಾನವ ಸಂಬಂಧಗಳ ರೂಪಕಗಳು ಎಂದು ರಾಮಾನುಜನ್ ವಿವರಿಸುತ್ತಾರೆ. <br /> <br /> ಹಾಗೆಯೇ, ಪ್ರತಿಯೊಂದು ರಾಮಾಯಣವನ್ನೂ ಅದರ `ಸಂದರ್ಭ,~ ಎಂದರೆ, ಆ ಕೃತಿ ರಚನೆಯಾದ ಭಾಷಿಕ ಸಂದರ್ಭ, ಪ್ರಾದೇಶಿಕ ಪರಂಪರೆ, ಆ ಸಮುದಾಯದ/ಲೇಖಕನ ಧಾರ್ಮಿಕ ನಂಬಿಕೆ ಹಾಗೂ ಸಾಮಾಜಿಕ ಮೌಲ್ಯಗಳು, ಇತ್ಯಾದಿ ರೂಪಿಸುತ್ತವೆ ಎಂಬ ತೀರ್ಮಾನಕ್ಕೆ ಬರುತ್ತಾರೆ. <br /> <br /> ಈ ಸಂದರ್ಭದಲ್ಲಿಯೇ ಅವರ ಪ್ರಖ್ಯಾತ ಹೇಳಿಕೆ ಬರುತ್ತದೆ: `ರಾಮಾಯಣವೆಂದರೆ ಭಾರತದ ಎರಡನೆಯ ಭಾಷೆ~. ಮುಂದಿನ ಭಾಗದಲ್ಲಿ, ರಾಮಕಥೆಯ ಈ ಭಿನ್ನ ರೂಪಣೆಗಳನ್ನು `ಅನುವಾದ~ಗಳೆಂದು ಕರೆಯಬಹುದು ಎಂದು ವಾದಿಸುತ್ತಾ, ರಾಮಾನುಜನ್ ಮೂರುಬಗೆಯ ಅನುವಾದ ಮಾರ್ಗಗಳನ್ನು ವಿವರಿಸುತ್ತಾರೆ (Iconic/Indexical/ Symbolic). ಅನಂತರ, ಎಲ್ಲಾ ರಾಮಾಯಣಗಳನ್ನೂ ಒಳಗೊಳ್ಳುವ ಒಂದು ಸ್ವೋಪಜ್ಞ ವಿಮರ್ಶಾತ್ಮಕ ಚೌಕಟ್ಟನ್ನು ರೂಪಕಾತ್ಮಕವಾಗಿ ರಾಮಾನುಜನ್ ಹೀಗೆ ಕಟ್ಟುತ್ತಾರೆ:<br /> <br /> `ನಿಯತವಾಗಿ, ಮತ್ತೆ ಮತ್ತೆ ರಾಮಾಯಣಗಳು ಸೃಷ್ಟಿಯಾದ ಸಾಂಸ್ಕೃತಿಕ ಪ್ರದೇಶವನ್ನು ಬಗೆಬಗೆಯ ಸೂಚಕಗಳಿಂದ ತುಂಬಿರುವ ಒಂದು ಅಗಾಧ ಸರೋವರದಂತೆ ನೋಡಬಹುದು. <br /> <br /> ಈ ಸೂಚಕಗಳೆಂದರೆ, ಕಥನ ಚೌಕಟ್ಟುಗಳು, ಪಾತ್ರಗಳು, ಹೆಸರುಗಳು, ಭೂಗೋಳ, ಘಟನೆಗಳು ಮತ್ತು ಸಂಬಂಧಗಳು, ಇತ್ಯಾದಿ. ... ಪ್ರತಿಯೊಬ್ಬ ಭಾರತೀಯ ಲೇಖಕನೂ ಈ ಸರೋವರದಲ್ಲಿ ಮುಳುಗಿ ತನ್ನದೇ ಆದ ಒಂದು ವಿಶಿಷ್ಟ ಪಠ್ಯವನ್ನು ಹೊರತೆಗೆಯುತ್ತಾನೆ... ಈ ಅರ್ಥದಲ್ಲಿ (ರಾಮಾಯಣದ) ಯಾವ ಪಠ್ಯವೂ ಮೂಲವಲ್ಲ. ಆದರೆ ಯಾವ ಕಥನವೂ ಕೇವಲ ಮರುಕಥನವಲ್ಲ; ಮತ್ತು ಈ ಕಥೆಗೆ ಕೊನೆಯಿಲ್ಲ. ಆದರೆ ಪ್ರತಿಯೊಂದು ಪಠ್ಯವೂ ಸ್ವಯಂ ಪೂರ್ಣವಾಗಿರುತ್ತದೆ~ (ಪು. 158).<br /> <br /> ಕೊನೆಯಲ್ಲಿ, ರಾಮಾಯಣ-ಶ್ರವಣದ ಪರಿಣಾಮವನ್ನು ದಾಖಲಿಸುವ ಒಂದು ಕಥೆಯೊಡನೆ ರಾಮಾನುಜನ್ ತಮ್ಮ ಲೇಖನವನ್ನು ಮುಗಿಸುತ್ತಾರೆ.<br /> <br /> ಕಳೆದ ಎರಡು ದಶಕಗಳಲ್ಲಿ ಅಂತರರಾಷ್ಟ್ರೀಯ ವಿದ್ವತ್ ಮನ್ನಣೆಯನ್ನು ಗಳಿಸಿರುವ ಹಾಗೂ ಸಾಂಸ್ಕೃತಿಕ ತೌಲನಿಕ ವಿಮರ್ಶೆಯ ಒಂದು ಪ್ರಮುಖ ಮಾದರಿಯಾಗಿರುವ ರಾಮಾನುಜನ್ ಅವರ ಈ ಲೇಖನ ಇತ್ತೀಚೆಗೆ ದೆಹಲಿ ವಿ.ವಿ.ಯಲ್ಲಿ ವಾದ-ವಿವಾದಗಳಿಗೆ ಗುರಿಯಾಗಿ, ಕೊನೆಗೆ ಅದನ್ನು ಪಠ್ಯಾವಳಿಯಿಂದ ಬಿಟ್ಟಿರುವುದು ಅತ್ಯಂತ ಖೇದದ ಸಂಗತಿ. <br /> 2006ರಲ್ಲಿ ಈ ಲೇಖನ ಬಿ.ಎ. ಆನರ್ಸ್ `ಕಲ್ಚರಲ್ ಹಿಸ್ಟರಿ~ ಪಠ್ಯಕ್ರಮದಲ್ಲಿ ಸೇರಿಸಲ್ಪಟ್ಟಿತು; 2008ರಲ್ಲಿಯೇ ಎಬಿವಿಪಿ ಕಾರ್ಯಕರ್ತರು ಈ ಲೇಖನದ ವಿರುದ್ಧ ಗಲಭೆ ಮಾಡಿ, ಇತಿಹಾಸ ವಿಭಾಗಕ್ಕೆ ನುಗ್ಗಿ, ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದರು. <br /> <br /> ಅನಂತರ, ಈ ವಿಷಯ ಸುಪ್ರೀಂ ಕೋರ್ಟ್ಗೆ ಹೋಗಿ, ಅದರ ಆದೇಶದಂತೆ ರಚಿಸಲ್ಪಟ್ಟ ನಾಲ್ಕು ತಜ್ಞರ ಸಮಿತಿಯಲ್ಲಿ ಮೂವರು `ಇದು ಮೌಲಿಕ ಸಂಶೋಧನೆಯನ್ನು ಒಳಗೊಂಡಿದೆ~ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು; ಆದರೆ, ನಾಲ್ಕನೆಯವರು `ಈ ಲೇಖನವನ್ನು ಹಿಂದುಗಳಲ್ಲದವರು ಪಾಠ ಮಾಡಲು ಅಸಾಧ್ಯ; ಮತ್ತು ಇದನ್ನು ಅರ್ಥಮಾಡಿಕೊಳ್ಳಲು ಕಿಶೋರಾವಸ್ಥೆಯ ವಿದ್ಯಾರ್ಥಿಗಳಿಗೆ ಸಾಧ್ಯವಿಲ್ಲ; ಆದುದರಿಂದ ಇದನ್ನು ಪಠ್ಯಾವಳಿಯಿಂದ ತೆಗೆಯಬೇಕು~ ಎಂದು ತಮ್ಮ ಅಭಿಪ್ರಾಯವನ್ನು ದಾಖಲಿಸಿದರು. <br /> <br /> ಎರಡು ವಾರಗಳ ಹಿಂದೆ, ಈ ಒಬ್ಬರ ವಾದವನ್ನು ಒಪ್ಪಿ, ದೆಹಲಿ ವಿ. ವಿ.ಯ ಅಕಡೆಮಿಕ್ ಕೌನ್ಸಿಲ್ ಈ ಲೇಖನವನ್ನು ಪಠ್ಯಾವಳಿಯಿಂದ ತೆಗೆದು ಹಾಕಿತು. <br /> <br /> ಎಬಿವಿಪಿ ಮತ್ತು ಇತರ ಬಲಪಂಥೀಯರು ಈ ಲೇಖನವನ್ನು ವಿರೋಧಿಸುವ ಕಾರಣಗಳು (ಪತ್ರಿಕೆಗಳಲ್ಲಿ ಬಂದಂತೆ) ಮೂರು: ಕೆಲವು ರಾಮಾಯಣಗಳು ಸೀತೆ ರಾವಣನ ಮಗಳೆಂದು ನಿರೂಪಿಸುತ್ತವೆ ಎಂಬುದನ್ನು ಈ ಲೇಖನ ಪ್ರಸ್ತಾಪಿಸುತ್ತದೆ; ಅವತಾರ ಪುರುಷನಾದ ರಾಮನನ್ನು ಮಾನವನೆಂದು ಕೆಲವು ರಾಮಾಯಣಗಳು ನಿರೂಪಿಸುವುದನ್ನು ರಾಮಾನುಜನ್ ದಾಖಲಿಸುತ್ತಾರೆ; ಮತ್ತು, ಈ ಬಗೆಯ ಚರ್ಚೆ `ಹಿಂದುಗಳ ಭಾವನೆಗಳಿಗೆ ನೋವುಂಟು ಮಾಡುತ್ತದೆ.~ <br /> <br /> ಸೀತೆ ರಾವಣನ ಮಗಳೆಂದು ಕನ್ನಡ-ತೆಲುಗು ಮೌಖಿಕ ರಾಮಾಯಣಗಳಲ್ಲಿ. ಜೈನ ಪರಂಪರೆಯ ವಾಸುದೇವಹಿಂಡಿ ಎಂಬ ಕಥನದಲ್ಲಿ, ಮತ್ತು ಆಗ್ನೇಯ ಏಷ್ಯಾದ (ಥಾಯ್) ರಾಮಾಕೀನ್ ಕೃತಿಯಲ್ಲಿ ನಿರೂಪಿಸಲ್ಪಟ್ಟಿದೆ ಎಂಬುದನ್ನು ರಾಮಾನುಜನ್ ದಾಖಲಿಸುತ್ತಾರೆ, ನಿಜ.<br /> <br /> ಆದರೆ, ಇನ್ನೂ ಅನೇಕ ಲಿಖಿತ-ಮೌಖಿಕ ರಾಮಾಯಣಗಳಲ್ಲಿ ಸೀತೆ ರಾವಣನ ಮಗಳೆಂದು ನಿರೂಪಿಸಲ್ಪಟ್ಟಿದೆ: 10 ನೆಯ ಶತಮಾನದ ಅಭಿನಂದನನ ಸಂಸ್ಕೃತ ರಾಮಚರಿತ; 12 ನೆಯ ಶತಮಾನದ ಸಂಸ್ಕೃತ ಅದ್ಭುತ ರಾಮಾಯಣ; ಒರಿಯಾ ಭಾಷೆಯ, 18ನೆಯ ಶತಮಾನದ ಸರಳದಾಸನ ರಾಮಾಯಣ; ಮೌಖಿಕ ಸಂಪ್ರದಾಯದ ಕುಕಣಾ ರಾಮಾಯಣ, ಅವಧ್ ರಾಮಾಯಣ ಇತ್ಯಾದಿ.<br /> <br /> ಭಿನ್ನ ಕಾಲಘಟ್ಟಗಳಲ್ಲಿ, ಭಿನ್ನ ಭಾಷಿಕ ಸಮುದಾಯಗಳಲ್ಲಿ ಪ್ರಚಲಿತವಿದ್ದ `ಕಥೆ-ಐತಿಹ್ಯ~ಗಳನ್ನು ಆಧರಿಸಿ ಈ ಕೃತಿಗಳು ರಚಿಸಲ್ಪಟ್ಟಿವೆ; ಮತ್ತು, ವಾಲ್ಮೀಕಿ ರಾಮಾಯಣಕ್ಕೂ ಮೊದಲು ರಾಮ-ರಾವಣ ಕಥೆಗಳು ಜಾತಕ ಕಥೆಗಳಲ್ಲಿ ಇದ್ದುವು ಎಂಬುದನ್ನು ಮಿರ್ಜಿ ಆಣ್ಣಾರಾಯರು, ಜಾಕೋಬಿ, ರೋಮಿಲಾ ಥಾಪರ್ ಮುಂತಾದವರು ಅಧಿಕಾರಯುತವಾಗಿ ತೀರ್ಮಾನಿಸಿದ್ದಾರೆ. <br /> <br /> ಮುಖ್ಯವಾಗಿ ಇಲ್ಲಿ ಗಮನಿಸಬೇಕಾದುದು ರಾಮಾನುಜನ್ ಅವರ ವಿಮರ್ಶಾತ್ಮಕ ನಿಲುವು: ತೌಲನಿಕ ವಿಮರ್ಶೆಯಲ್ಲಿ `ಇದು ಸರಿ, ಇದು ತಪ್ಪು~ ಎಂಬಂತಹ ಮೌಲ್ಯಾತ್ಮಕ ನಿಲುವಿರುವುದಿಲ್ಲ. ಅದರ ಬದಲು ವಿವರಣೆ ಹಾಗೂ ಸಾಂಸ್ಕೃತಿಕ ವ್ಯಾಖ್ಯಾನ. ರಾಮಾನುಜನ್ ಅವರದು ಈ ಬಗೆಯ ವಸ್ತುನಿಷ್ಠ ತೌಲನಿಕ ವ್ಯಾಖ್ಯಾನ. <br /> <br /> ಇನ್ನೂ ಮುಖ್ಯವಾಗಿ ಶ್ರೀರಾಮನ ದೈವತ್ವದ/ ಚಾರಿತ್ರಿಕತೆಯ ಪ್ರಶ್ನೆ. ಪ್ರಾಚೀನ ಕಾಲದಿಂದಲೂ ಭಾರತೀಯ ವಿದ್ವಾಂಸರು ಮಹಾಭಾರತವನ್ನು ಇತಿಹಾಸವೆಂದು ಮತ್ತು ರಾಮಾಯಣವನ್ನು ಕಾವ್ಯವೆಂದು ಪರಿಗಣಿಸಿದ್ದಾರೆ. <br /> <br /> ರಾಮನ ಮಾನವತೆಯನ್ನು ವಾಲ್ಮೀಕಿ ಮುನಿಗಳ ರಾಮಾಯಣದ ಎರಡನೆಯ ಶ್ಲೋಕವೇ ದೃಢಪಡಿಸುತ್ತದೆ: `ಕೋ..ನಸ್ಮಿನ್ ಸಂಪ್ರತಮ್ ಲೋಕೆ..~ (ಎಂದರೆ `ಈ ಲೋಕದಲ್ಲಿ ಯಾರು ಗುಣವಾನ್, ವೀರ್ಯವಾನ್ ಇತ್ಯಾದಿ ವಿಶೇಷಣಗಳಿಗೆ ಪಾತ್ರರಾದವರು~) ಎಂದು ಮುನಿಗಳು ನಾರದರನ್ನು ಕೇಳುತ್ತಾರೆ; ಮತ್ತು ನಾರದರು ಶ್ರೀರಾಮನನ್ನು ಹೆಸರಿಸುತ್ತಾರೆ. <br /> ಹಾಗೆಯೇ, ಕಾವ್ಯದ ಕೊನೆಯಲ್ಲಿ ಶ್ರೀರಾಮನು ತಾನು ಮನುಷ್ಯಮಾತ್ರ ಎಂಬುದನ್ನು ಹೀಗೆ ಸ್ಪಷ್ಟಪಡಿಸುತ್ತಾನೆ: `ಆತ್ಮಾನಂ ಮಾನುಷಂ ಮನ್ಯೆ~.<br /> <br /> Speaking of Siva, Hymns for the Drowning, Poems of ove and War ಇತ್ಯಾದಿ ಅನುವಾದಿತ ಕೃತಿಗಳ ಮೂಲಕ ಹಾಗೂ ತಮ್ಮ ಸ್ವೋಪಜ್ಞ ವಿಮರ್ಶಾತ್ಮಕ ಲೇಖನಗಳ ಮೂಲಕ ರಾಮಾನುಜನ್ ಭಾರತದ ಪ್ರಾಂತೀಯ ಭಾಷೆಗಳ ಸಾಹಿತ್ಯ-ಸಂಸ್ಕೃತಿಗಳನ್ನು ಹೊರ ಜಗತ್ತಿಗೆ ಪರಿಚಯಿಸಿ, ಆ ಮೂಲಕ `ಓರಿಯೆಂಟಲಿಸ್ಟ್~ ಚಿಂತನೆಗೆ ವಸಾಹತೋತ್ತರ ರೂಪವನ್ನು ಕೊಟ್ಟರು. ಅಂತಹ ಭಾರತೀಯ ವಿದ್ವಾಂಸನ ಪ್ರಬುದ್ಧ ಸಂಶೋಧನಾ ಲೇಖನವನ್ನು ಕುರಿತ ಪ್ರತಿಭಟನೆ ಅತೀವ ದುರದೃಷ್ಟಕರ ಎಂದಷ್ಟೇ ಹೇಳಬಹುದು.<br /> <br /> <strong>* ಆರ್. ಇಂದಿರಾ ಅವರ ಹೊಸದಾರಿ ಅಂಕಣ ಅನಿವಾರ್ಯ ಕಾರಣಗಳಿಂದ ಪ್ರಕಟವಾಗಿಲ್ಲ </strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>