ಮೋದಿ ಹೇಳಿಕೆ ಪ್ರಚಂಡ ರಾಜಕೀಯದ ಸೂಚನೆ

ಬೆಂಗಳೂರು: ‘ದಲಿತರ ಮೇಲೆ ಹಲ್ಲೆ ನಡೆಸುವ ಮೊದಲು ನನ್ನನ್ನು ಗುಂಡಿಕ್ಕಿ ಕೊಲ್ಲಿ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಪ್ರಚಂಡ ಹಾಗೂ ಬುದ್ಧಿವಂತಿಕೆಯ ರಾಜಕೀಯದ ಸೂಚನೆ’ ಎಂದು ಚಿಂತಕ ಡಾ.ಜಿ. ರಾಮಕೃಷ್ಣ ಹೇಳಿದರು.
ಸಮಕಾಲೀನ ವಿಚಾರ ವೇದಿಕೆ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗುರುವಾರ ಆಯೋಜಿಸಿದ್ದ ‘ಗೋ ರಕ್ಷಣೆಯ ರಾಜಕೀಯ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಗೋ ರಕ್ಷಕರ ಹೆಸರಿನಲ್ಲಿ ಮುಖವಾಡ ಧರಿಸಿರುವವರು ದಲಿತರ ಮೇಲೆ ಹಲ್ಲೆಗಳನ್ನು ನಡೆಸಿದ್ದರು. ಅಂತಹ ಗೂಂಡಾ ಪಡೆಗಳಿಗೆ ನೇರ, ಪರೋಕ್ಷ
ವಾಗಿ ಬೆಂಬಲ ನೀಡಿದ್ದ ಮೋದಿ, ಈಗ ಭಾವೋದ್ವೇಗದಿಂದ ಮಾತನಾಡುತ್ತಿರುವುದು ಅವರ ಚಾಣಾಕ್ಷ ರಾಜಕೀಯ ನಡೆಯಾಗಿದೆ’ ಎಂದರು.
‘ಸತ್ತ ದನದ ಚರ್ಮ ಸುಲಿದರೆಂದು ದಲಿತರ ಮೇಲೆ ಗೋರಕ್ಷಕರು ನಡೆಸಿದ ಹಲ್ಲೆಯನ್ನು ಖಂಡಿಸಿ ಗುಜರಾತಿನಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾ
ಗುತ್ತಿದೆ. ಇದರಿಂದ ಮೌನ ಮುರಿದಿರುವ ಮೋದಿ, ಬೂಟಾಟಿಕೆಯ ಮಾತುಗಳನ್ನಾಡಿದ್ದಾರೆ’ ಎಂದು ದೂರಿದರು.
‘ಆಹಾರಕ್ಕಾಗಿ ಚಳವಳಿ ನಡೆಸಬೇಕು. ಆದರೆ, ಪರಂಪರಾನುಗತವಾಗಿ ಆಹಾರ ಪದ್ಧತಿಯೊಂದನ್ನು ರೂಢಿಸಿಕೊಂಡು ಬರುತ್ತಿರುವವರ ವಿರುದ್ಧ ಹೋರಾಟ ಮಾಡುತ್ತಿರುವುದು ವಿಪರ್ಯಾಸ. ಯಾರೋ ದನದ ಮಾಂಸ ತಿಂದರೆ ನಾವು ಮುನಿಸಿಕೊಳ್ಳಬೇಕಿಲ್ಲ. ಅವರವರ ಆಹಾರ ಪದ್ಧತಿಗಳನ್ನು ಗೌರವಿಸಬೇಕು’ ಎಂದು ಹೇಳಿದರು.
ಸಾಹಿತಿ ಕೆ.ಮರುಳಸಿದ್ದಪ್ಪ ಮಾತನಾಡಿ, ‘ಗೋವಿನ ವಿಚಾರ ಇಟ್ಟುಕೊಂಡು ಬಿಜೆಪಿ ಕಳೆದ 15–20 ವರ್ಷಗಳಿಂದ ರಾಜಕೀಯ ಮಾಡುತ್ತಿದೆ. ಗೋರಕ್ಷಣೆಯನ್ನು ಮುಸ್ಲಿಮರ ವಿರುದ್ಧದ ಅಸ್ತ್ರವಾಗಿ ಪ್ರಯೋಗಿಸಿದ್ದ ಬಿಜೆಪಿ, ಈಗ ದಲಿತರ ವಿರುದ್ಧದ ಅಸ್ತ್ರವಾಗಿ ಬಳಸುತ್ತಿದೆ’ ಎಂದರು.
ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಘಟಕದ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಅವರು, ‘ಮುಂದಿನ ಲೋಕಸಭೆ, ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡಿರುವ ಬಿಜೆಪಿಗೆ ಒಂದು ಅಜೆಂಡಾ ಬೇಕಿದೆ. ಈ ಕಾರಣಕ್ಕಾಗಿ ಗೋ ರಕ್ಷಣೆ ಹೆಸರಲ್ಲಿ ರಾಜಕೀಯ ನಡೆಸುತ್ತಿದೆ. ದಲಿತರ ಮೇಲೆ ಹಲ್ಲೆ ನಡೆಸುವ ಆರ್ಎಸ್ಎಸ್ ಕಾರ್ಯಕರ್ತರ ಚರ್ಮ ಸುಲಿಯಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ ಅವರು, ‘ಮುಂದಿನ ದಿನಗಳಲ್ಲಿ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಹಲ್ಲೆಗಳು ನಡೆಯಬಹುದು. ಹೀಗಾಗಿ ಮುಸ್ಲಿಮರು ಎಚ್ಚರಿಕೆಯಿಂದ ಇರಬೇಕು’ ಎಂದರು.
***
ಕೇಂದ್ರ ಸರ್ಕಾರ ದಲಿತರ ಪರವಲ್ಲ. ದಲಿತರ ಮೇಲಿನ ಪ್ರೀತಿಗಿಂತ ಮತ ಬ್ಯಾಂಕ್ ರಾಜಕಾರಣ ಮೋದಿ ಅವರ ನಡೆಗಳಲ್ಲಿ ಕಂಡುಬರುತ್ತಿದೆ.
-ಗೌರಿ ಲಂಕೇಶ್, ಪತ್ರಕರ್ತೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.