ರನ್ನನ ಕಾವ್ಯದಿಂದ ಕನ್ನಡ ಶ್ರೀಮಂತ: ಮನು
ಬಾಗಲಕೋಟೆ: `ಯಾವುದೇ ಭಾಷೆಯ ನೈಜ ಶಕ್ತಿ ಕಾವ್ಯ ಪರಂಪರೆಯಲ್ಲಿ ಅಡಗಿರುತ್ತದೆ. ಈ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿರುವ ಕವಿಚಕ್ರವರ್ತಿ ರನ್ನನ ಕಾವ್ಯ ಪರಂಪರೆ ಯನ್ನು ರಕ್ಷಿಸುವ ಅಗತ್ಯವಿದೆ' ಎಂದು ಡಾ.ಮನು ಬಳಿಗಾರ ಹೇಳಿದರು.
ಮುಧೋಳದ ಕವಿಚಕ್ರವರ್ತಿ ರನ್ನ ಪ್ರತಿಷ್ಠಾನ ಮತ್ತು ಕನ್ನಡ ಸಾಹಿತ್ಯ ಪರಿ ಷತ್ ಬಾಗಲಕೋಟೆ ಜಿಲ್ಲಾ ಘಟಕದ ವತಿಯಿಂದ ನವನಗರದ ಕಸಾಪ ಸಭಾಂಗಣದಲ್ಲಿ ಭಾನುವಾರ ಏರ್ಪಡಿ ಸಲಾಗಿದ್ದ `ಕವಿ ರನ್ನ: ಕಾವ್ಯಾನು ಸಂಧಾನ' ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಸಮಾಜದ ಓರೆಕೋರೆ ತಿದ್ದಿ ಕೊಳ್ಳಲು ಕಾವ್ಯ ಸಹಾಯಕವಾಗಿದೆ. ಕಾವ್ಯಕ್ಕೆ ಚಿಕಿತ್ಸಾ ಗುಣವಿದೆ' ಎಂದರು.
`ಇಂಗ್ಲಿಷ್ ದಾಳಿಯಿಂದ ಕನ್ನಡ ಭಾಷೆ ಉಳಿಸಿಕೊಳ್ಳುವ ಬಗ್ಗೆ ಚಿಂತನೆ ನಡೆಯಬೇಕಿದೆ' ಎಂದು ಹೇಳಿದರು.
ಕವಿಚಕ್ರವರ್ತಿ ರನ್ನ ಪ್ರತಿಷ್ಠಾನವು ತನ್ನ ಯಶಸ್ವಿ ಕಾರ್ಯಚಟುವಟಿಕೆಗಳ ಮೂಲಕ ರಾಜ್ಯದ ಇತರೆ ಪ್ರತಿಷ್ಠಾನ ಗಳಲ್ಲಿ ಪ್ರಥಮ ಸ್ಥಾನದಲ್ಲಿರುವುದು ಅಭಿನಂದನಾರ್ಹವಾದುದು' ಎಂದು ಶ್ಲಾಘಿಸಿದರು.
ಪುರುಷ ಸರಸ್ವತಿ: `ಗದಾಯುದ್ಧ ಕಾವ್ಯದ ಮಹತ್ವ' ಕುರಿತು ಉಪನ್ಯಾಸ ನೀಡಿದ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, `ಕನ್ನಡ ಭಾಷೆಯಲ್ಲಿ ಪೌರುಷ ಪ್ರಧಾನ ಕಾವ್ಯವನ್ನು ಅತ್ಯಂತ ಪ್ರಖರವಾಗಿ ಬರೆಯುವ ಮೂಲಕ ರನ್ನ ಶಕ್ತಿ ಕವಿ ಎನಿಸಿಕೊಂಡಿದ್ದಾನೆ. ಕವಿ ರನ್ನ ಪುರುಷ ಸರಸ್ವತಿ' ಎಂದು ಬಣ್ಣಿಸಿದರು.
`ಕಾವ್ಯಕ್ಕೆ ಬದಲಾಗುವ ದ್ರಾವಕಸ್ಥಿತಿ ಇರುವುದರಿಂದ ಯಾವುದೇ ಕಾವ್ಯದ ಓದು ಪುನರಾವರ್ತನೆ ಎನಿಸುವುದಿಲ್ಲ. ರನ್ನ, ಜನ್ನ, ನಾಗಚಂದ್ರ, ಪಂಪ, ಪೊನ್ನನ ಸಾಹಿತ್ಯವನ್ನು ಮತ್ತೆ ಮತ್ತೆ ಓದಿದಂತೆ ವಿಭಿನ್ನ ಅರ್ಥ ಸಿಗುತ್ತದೆ. ಕಾವ್ಯದ ಓದಿಗೆ ಮುಕ್ತಾಯ ೆಂಬುದಿಲ್ಲ' ಎಂದರು.
ಮಲ್ಲಾಡಿಹಳ್ಳಿಯ ಪ್ರೊ. ರಾಘ ವೇಂದ್ರ ಪಾಟೀಲ ಅವರು, `ಕನ್ನಡ ಕಾವ್ಯ ಸಂದರ್ಭ ಮತ್ತು ರನ್ನ' ವಿಷಯ ಕುರಿತು ಉಪನ್ಯಾಸ ನೀಡಿದರು. ಡಾ.ಗಿರಡ್ಡಿ ಗೋವಿಂದರಾಜು ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರನ್ನ ಪ್ರತಿಷ್ಠಾನದ ಸದಸ್ಯ ಸಂಚಾಲಕರಾದ ಡಾ.ಬಾಳಾಸಾಹೇಬ ಲೋಕಾಪುರ, ಡಾ. ವಿಜಯಕುಮಾರ ಕಟಗಿಹಳ್ಳಿ ಮಠ, ಶ್ರೀಶೈಲ ಕರಿಶಂಕರಿ ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.