ರಾಹುಲ್ ಗಾಂಧಿ-ಯುವ ಕಾಂಗ್ರೆಸಿಗರ ಸಂವಾದ ನಾಳೆ
ವಿಜಾಪುರ:ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಅವರು ಏ.20ರಂದು ನಗರದಲ್ಲಿ ನಡೆಸಲಿರುವ ಸಂವಾದದಲ್ಲಿ ಮುಂಬೈ ಕರ್ನಾಟಕ ಮತ್ತು ಹೈದ್ರಾಬಾದ್ ಕರ್ನಾಟಕ ಪ್ರದೇಶ 5 ಸಾವಿರ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ಅಧ್ಯಕ್ಷ ಶರಣಪ್ಪ ಸುಣಗಾರ, ಕಾರ್ಯಕ್ರಮ ಸಂಯೋಜಕ ವಿಶಾಲ್ ಮುತ್ತೇಮವಾರ್ ಹೇಳಿದರು.
ಇಲ್ಲಿಯ ಬಿಎಲ್ಡಿಇ ಸಂಸ್ಥೆಯ ಮೈದಾನದಲ್ಲಿ ನಡೆಯಲಿರುವ ಈ ಸಂವಾದದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಪ್ರವೇಶ. ಯಾವುದೇ ನಾಯಕರು, ಮಾಧ್ಯಮದವರಿಗೆ ಪ್ರವೇಶ ಇಲ್ಲ ಎಂದು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅಂದು ಬೆಳಿಗ್ಗೆ 9ಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸುವ ರಾಹುಲ್ ಗಾಂಧಿ ಅವರನ್ನು ಇಲ್ಲಿಯ ಸೈನಿಕ ಶಾಲೆಯ ಹೆಲಿಪ್ಯಾಡ್ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹಾಗೂ ಜಿಲ್ಲೆಯ ಪಕ್ಷದ ಮುಖಂಡರು ಸ್ವಾಗತಿಸಲಿದ್ದಾರೆ. ಅಲ್ಲಿಂದ ನೇರವಾಗಿ ಬಿಎಲ್ಡಿಇ ಮೈದಾನಕ್ಕೆ ತೆರಳುವ ರಾಹುಲ್, ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದರು.
ಸುಮಾರು ಒಂದು ಗಂಟೆಗಳ ಕಾಲ ಈ ಸಂವಾದ ನಡೆಯಲಿದೆ. ಇಲ್ಲಿಂದ ಉಡುಪಿ ಹಾಗೂ ಬೆಂಗಳೂರಿನಲ್ಲಿಯೂ ರಾಹುಲ್ ಇದೇ ಮಾದರಿಯ ಸಂವಾದ ನಡೆಸಲಿದ್ದಾರೆ. ರಾಹುಲ್ ಸಂಚರಿಸುವ ನಗರದ ಮಾರ್ಗವನ್ನು ಬಂಟಿಂಗ್ಸ್, ಬ್ಯಾನರ್ಗಳಿಂದ ಅಲಂಕರಿಸಲಾಗುವುದು ಎಂದು ಹೇಳಿದರು.‘ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ಇದೆ. ರಾಹುಲ್ ಇಲ್ಲಿಗೆ ಭಾಷಣ ಮಾಡಲು ಬರುತ್ತಿಲ್ಲ. ಯುವಕರಿಂದ ಸಮಸ್ಯೆ ಆಲಿಸಿ ಅದನ್ನು ಪರಿಹರಿಸಲು ಹಾಗೂ ಅವರ ಪ್ರಶ್ನೆಗಳಿಗೆ ಉತ್ತರಿಸಲು ಬರುತ್ತಿದ್ದಾರೆ.
ಈಗಾಗಲೆ 17 ರಾಜ್ಯಗಳಲ್ಲಿ ಈ ರೀತಿಯ ಗೌಪ್ಯ ಸಭೆಗಳನ್ನು ನಡೆಸಲಾಗಿದೆ. ವಿಜಾಪುರದಲ್ಲಿ ನಡೆಯುವ ಈ ಸಭೆಯ ಪ್ರಯೋಜನವನ್ನು ಈ ಭಾಗದ ಯುವ ಕಾಂಗ್ರೆಸ್ ಕಾರ್ಯಕರ್ತರು ಪಡೆದುಕೊಳ್ಳಬೇಕು. 18ರಿಂದ 35 ವರ್ಷ ವಯಸ್ಸಿನ ಯುವ ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಳ್ಳಬೇಕು’ ಎಂದು ವಿಶಾಲ್ ಕೋರಿದರು.ಪಕ್ಷದ ಮುಖಂಡರಾದ ವೈಜನಾಥ ಕರ್ಪೂರಮಠ, ಆಜಾದ್ ಪಟೇಲ್, ಬಿರಾದಾರ, ಡಾ.ಗಂಗಾಧರ ಸಂಬಣ್ಣಿ, ಮಹಾದೇವಿ ಗೋಕಾಕ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.