ರೋಚಕ ರಸದೌತಣ ಬಡಿಸಿದ ಆಟೋಕ್ರಾಸ್ ರ್ಯಾಲಿ

ಗೋಣಿಕೊಪ್ಪಲು: ಕಿಕ್ಕಿರಿದು ಸೇರಿದ್ದ ಜನರನ್ನು ರೋಮಾಂಚನ ತುತ್ತತುದಿಗೆ ಒಯ್ದ ರಾಷ್ಟ್ರಮಟ್ಟದ ಆಟೋಕ್ರಾಸ್ ರ್್ಯಾಲಿ ಪೊನ್ನಂಪೇಟೆ ಸಮೀಪದ ಬೇಗೂರು ಕೊಲ್ಲಿಯಲ್ಲಿ ಭಾನುವಾರ ನಡೆಯಿತು.
ಸಮೀಪದ ಪೊನ್ನಂಪೇಟೆ ಗೋಲ್ಡನ್ ಜೇಸೀಸ್ ಆಯೋಜಿಸಿದ್ದ ರ್್ಯಾಲಿಯಲ್ಲಿ ಪಾಲ್ಗೊಂಡಿದ್ದ ಸ್ಪರ್ಧಿಗಳು ದೂಳೆಬ್ಬಿಸುತ್ತ ಬೈಕ್ ಮತ್ತು ಕಾರುಗಳನ್ನು ಓಡಿಸುತ್ತಿದ್ದರೆ ನೋಡುತ್ತಿದ್ದವರ ಎದೆ ಬಡಿತ ಜೋರಾಗುತ್ತಿತ್ತು. ಸುತ್ತಲೂ ಹಚ್ಚಹಸಿರಿನ ಕಾಫಿ ತೋಟದ ನಡುವಿನ ವಿಶಾಲ ಗದ್ದೆಬಯಲಿನಲ್ಲಿ ನಡೆದ ರ್್ಯಾಲಿಯಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರೇಶದ ರ್್ಯಾಲಿ ಪಟುಗಳು ಭಾಗವಹಿಸಿದ್ದರು.
ಕಡಿದಾದ ತಿರುವುಗಳ ಹಾದಿಯಲ್ಲಿ ಸಾಗುವಾಗ ಹಲವು ದ್ವಿಚಕ್ರವಾಹನ ಸವಾರರು ಮುಗುಚಿ ಬೀಳುತ್ತಿದ್ದರು. ಆದರೂ, ಛಲ ಬಿಡದ ತ್ರಿವಿಕ್ರಮನಂತೆ ಮತ್ತೆ ಎದ್ದು ಬೈಕ್ ಸರಿಪಡಿಸಕೊಂಡು ಹಕ್ಕಿಯಂತೆ ಹಾರುತ್ತಿದ್ದರು. ಮುಂದಿನ ಸವಾರರನ್ನು ಹಿಂದಿಕ್ಕುವ ಭರದಲ್ಲಿ ಮುನ್ನುಗ್ಗಿ ಮತ್ತೊಂದು ಬೈಕ್ಗೆ ಗುದ್ದುವುದು, ಬೀಳುವುದು ಮುಂತಾದ ದೃಶ್ಯ ನೆರೆದಿದ್ದ ಸಾವಿರರು ಪ್ರೇಕ್ಷಕರನ್ನು ರಂಜಿಸಿತು.
ನಾಲ್ಕು ಚಕ್ರ ವಾಹನದ ಸ್ಪರ್ಧೆಯಲ್ಲೂ ಸವಾರರು ಮುನ್ನುಗ್ಗುವ ಭರದಲ್ಲಿ ವಾಹನ ಸಮೇತ ಉರುಳಿ ಬೀಳುತ್ತಿದ್ದರು. ತಿರುವು ಮುರುವಿನ ಗದ್ದೆಯ ಕಚ್ಚಾ ರಸ್ತೆಯಲ್ಲಿ ವೇಗವಾಗಿ ಸಾಗುವಾಗ ಉರುಳಿ ಬೀಳುವ ಪರಿವೂ ಸ್ಪರ್ಧಿಗಳಿಗೆ ಇರಲಿಲ್ಲ. ಒಟ್ಟಿನಲ್ಲಿ ವೇಗವಾಗಿ ಮುನ್ನುಗ್ಗಿ ಪ್ರಥಮ ಸ್ಥಾನ ಪಡೆದುಕೊಳ್ಳಬೇಕು ಎಂಬುದೇ ಪ್ರತಿಯೊಬ್ಬ ಸವಾರರ ಛಲವಾಗಿತ್ತು.
ಇಂತಹ ಸಂದರ್ಭದಲ್ಲಿ ಹಲವು ಕಾರುಗಳು ನೆಲ್ಲಕ್ಕುರುಳಿ ಜಖಂಗೊಂಡವು. ಆದರೂ, ಬಿದ್ದ ಕಾರನ್ನೆ ಮತ್ತೆ ಸರಿಪಡಿಸಿಕೊಂಡು ಮುನ್ನುಗ್ಗುವ ಪರಿ ಅಚ್ಚರಿ ಮೂಡಿಸಿತ್ತು.
ಕಾರ್ಯಕ್ರಮ ಉದ್ಘಾಟನೆ
ಬೇಗೂರು ಕೊಲ್ಲಿಯ ತೀತಿರ, ಚೆಕ್ಕೇರ, ಐಪುಮಾಡ, ಇಟ್ಟೀರ, ಮತ್ತ ಚೇಂದೀರ ಕುಟಂಬದ ಗದ್ದೆ ಬಯಲಿನಲ್ಲಿ ಆಯೋಜಿಸಿದ್ದ ರ್್ಯಾಲಿಯನ್ನು ಬೆಳಿಗ್ಗೆ ಕುಟ್ಟ ಪೊಲೀಸ್ ಠಾಣೆ ಸಿಪಿಐ ದಿವಾಕರ್ ಉದ್ಘಾಟಿಸಿದರು.
ಜೆಸಿ ವಲಯ 14ರ ಅಧ್ಯಕ್ಷ ಮಧೋಶ್ ಪೂವಯ್ಯ ಮುಖ್ಯ ಅತಿಥಿಯಾಗಿದ್ದರು. ಜೇಸಿ ಅಧ್ಯಕ್ಷ ನಿರನ್ ಮೊಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ರಾಬಿನ್ ಸುಬ್ಬಯ್ಯ ಹಾಗೂ ಸದಸ್ಯರು ಹಾಜರಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.