ರೋಹಿತ್ ಆತ್ಮಹತ್ಯೆ: ರಾಜಕೀಯ ಲಾಭಕ್ಕೆ ಯತ್ನ

ಹೈದರಾಬಾದ್ (ಪಿಟಿಐ): ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದ ದಲಿತ ವಿದ್ಯಾರ್ಥಿಯ ಆತ್ಮಹತ್ಯೆ ಪ್ರಕರಣ ಸಂಪೂರ್ಣ ರಾಜಕೀಯ ಬಣ್ಣ ಪಡೆದುಕೊಂಡಿದ್ದು, ವಿದ್ಯಾರ್ಥಿಗಳ ಪ್ರತಿಭಟನೆಯೂ ತೀವ್ರಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ವಿರುದ್ಧ ಎಫ್ಐಆರ್ ದಾಖಲಾಗಿರುವುದರಿಂದ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಸಚಿವರ ಮನೆ ಮುಂದೆ ವಿದ್ಯಾರ್ಥಿಗಳು ಧರಣಿ ನಡೆಸಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಮತ್ತು ರಾಜ್ಯದ ಹೊರಗೆ ಕೂಡ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಈ ಮಧ್ಯೆ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ್ದಾರೆ.
ಸಂಶೋಧನಾ ವಿದ್ಯಾರ್ಥಿ ವೇಮುಲ ರೋಹಿತ್ ಮತ್ತು ಇತರರನ್ನು ಅಮಾನತು ಮಾಡಿದ ಪ್ರಕರಣದಲ್ಲಿ ಮಾನವ ಸಂಪನ್ಮೂಲ ಸಚಿವಾಲಯ, ಕೇಂದ್ರ ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ಮತ್ತು ಕುಲಪತಿ ನ್ಯಾಯಯುತವಾಗಿ ನಡೆದುಕೊಂಡಿಲ್ಲ ಎಂದು ರಾಹುಲ್ ಆರೋಪಿಸಿದ್ದಾರೆ.
ವಿಶ್ವವಿದ್ಯಾಲಯವು ನ್ಯಾಯಯುತವಾಗಿ ನಡೆದುಕೊಳ್ಳುವ ಬದಲು ವಿದ್ಯಾರ್ಥಿಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ‘ದಮನಿಸುವ’ ಕೆಲಸ ಮಾಡಿದೆ ಎಂದು ಅವರು ಹೇಳಿದ್ದಾರೆ.
ಸಂಶೋಧನಾ ವಿದ್ಯಾರ್ಥಿಯ ಸಾವಿಗೆ ಹೊಣೆಯಾಗಿರುವ ಕೇಂದ್ರ ಸಚಿವ ಮತ್ತು ಕುಲಪತಿಗೆ ಕಠಿಣ ಶಿಕ್ಷೆ ದೊರೆಯಬೇಕು ಎಂದು ರಾಹುಲ್ ಆಗ್ರಹಿಸಿದ್ದಾರೆ. ಆದರೆ ಸ್ಮೃತಿ ಇರಾನಿ ಹೆಸರನ್ನು ಅವರು ಉಲ್ಲೇಖಿಸಿಲ್ಲ.
ಡಿ.ಲಿಟ್ ವಾಪಸ್ ಮಾಡಿದ ಅಶೋಕ್ ವಾಜಪೇಯಿ: ಹೈದರಾಬಾದ್ ವಿಶ್ವವಿದ್ಯಾಲಯದ ದಲಿತ ವಿರೋಧಿ ನೀತಿಯನ್ನು ಖಂಡಿಸಿ ಈ ವಿಶ್ವವಿದ್ಯಾಲಯವು ನೀಡಿರುವ ಡಿ.ಲಿಟ್ ಪದವಿಯನ್ನು ಹಿಂದಿರುಗಿಸುವುದಾಗಿ ಹಿಂದಿ ಲೇಖಕ ಅಶೋಕ್ ವಾಜಪೇಯಿ ಹೇಳಿದ್ದಾರೆ.
‘ದಲಿತ ವಿದ್ಯಾರ್ಥಿ ರೋಹಿತ್ ಲೇಖಕನಾಗಲು ಬಯಸಿದ್ದರು. ಆದರೆ ದಲಿತ ವಿರೋಧಿ ಧೋರಣೆ ಮತ್ತು ಭಿನ್ನಾಭಿಪ್ರಾಯಗಳಿಗೆ ತೋರಿದ ಅಸಹಿಷ್ಣುತೆಯಿಂದಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವಂತಾಯಿತು. ರಾಜಕೀಯ ಒತ್ತಡಕ್ಕೆ ಒಳಗಾಗಿ ವಿಶ್ವವಿದ್ಯಾಲಯ ವರ್ತಿಸಿರುವುದನ್ನು ಖಂಡಿಸಿ ಡಿ.ಲಿಟ್ ಪದವಿಯನ್ನು ವಾಪಸ್ ಮಾಡಲು ನಿರ್ಧರಿಸಿದ್ದೇನೆ’ ಎಂದು ಅವರು ಹೇಳಿದ್ದಾರೆ.
ಲಲಿತ ಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದ ವಾಜಪೇಯಿ ಅವರಿಗೆ ಕೆಲವು ವರ್ಷಗಳ ಹಿಂದೆ ಹೈದರಾಬಾದ್ ವಿವಿ ಡಿ.ಲಿಟ್ ಪದವಿ ನೀಡಿ ಗೌರವಿಸಿತ್ತು.
ಎಫ್ಟಿಐಐಯಲ್ಲಿ ಸತ್ಯಾಗ್ರಹ: ಪುಣೆಯ ಭಾರತೀಯ ಚಲನಚಿತ್ರ ಮತ್ತು ಟಿ.ವಿ ಸಂಸ್ಥೆಯ (ಎಫ್ಟಿಐಐ) ವಿದ್ಯಾರ್ಥಿಗಳು ಕೂಡ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.
‘ರೋಹಿತ್ ಸಾವಿನ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ಒಂದು ದಿನದ ಸತ್ಯಾಗ್ರಹ ನಡೆಸಲಾಗಿದೆ’ ಎಂದು ಎಫ್ಟಿಐಐ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಶಂಕರ್ ನಾಚಿಮುತ್ತು ಹೇಳಿದ್ದಾರೆ.
ರಾಜೀನಾಮೆ ಪ್ರಶ್ನೆಯೇ ಇಲ್ಲ
ವಿದ್ಯಾರ್ಥಿಯೊಬ್ಬನ ಸಾವನ್ನು ಕೂಡ ಕಾಂಗ್ರೆಸ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ್ ಶರ್ಮಾ, ಸಚಿವರಾದ ಸ್ಮೃತಿ ಇರಾನಿ ಮತ್ತು ಬಂಡಾರು ದತ್ತಾತ್ರೇಯ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.
ತಿರುಗೇಟು: ವಿದ್ಯಾರ್ಥಿ ಆತ್ಮಹತ್ಯೆಯನ್ನು ರಾಹುಲ್ ಗಾಂಧಿ ರಾಜಕೀಯಕ್ಕೆ ಬಳಸುತ್ತಿದ್ದಾರೆ. ದಲಿತ ಎಂಬ ಕಾರಣಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.
‘ರಾಹುಲ್ ಅವರದ್ದು ತತ್ವ, ಸಿದ್ಧಾಂತ ರಹಿತ ವರ್ತನೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ. ಮುರಳೀಧರ ರಾವ್ ಆರೋಪಿಸಿದ್ದಾರೆ. ದಲಿತ ನಾಯಕ ಬಿ.ಆರ್. ಅಂಬೇಡ್ಕರ್ ಅವರಿಗೆ ಇದೇ ಕಾಂಗ್ರೆಸ್ ಜೀವನವಿಡೀ ಕಿರುಕುಳ ನೀಡಿತ್ತು ಎಂದು ಹೇಳಿದ್ದಾರೆ.
‘ಕಾಂಗ್ರೆಸ್, ಒಂದು ವರ್ಗದ ಮಾಧ್ಯಮ ಮತ್ತು ಸ್ಥಾಪಿತ ಹಿತಾಸಕ್ತಿಯ ಕೆಲವು ಗುಂಪುಗಳು ರೋಹಿತ್ ಆತ್ಮಹತ್ಯೆಯನ್ನು ರಾಜಕೀಯ ವಿಷಯವಾಗಿಸಿವೆ’ ಎಂದು ಟ್ವೀಟ್ ಮಾಡಿದ್ದಾರೆ.
ಕೋರ್ಟ್ ಆದೇಶದಂತೆ ರೋಹಿತ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಆದರೂ ಅವರ ಬಗ್ಗೆ ಉದಾರವಾಗಿ ನಡೆದುಕೊಂಡು ಹಾಸ್ಟೆಲ್ಗೆ ಮಾತ್ರ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ರಾವ್ ತಿಳಿಸಿದ್ದಾರೆ. ಭಯೋತ್ಪಾದನೆಗೆ ಬೆಂಬಲ ನೀಡುವ ರೋಹಿತ್ ನಿಲುವಿನಿಂದಾಗಿಯೇ ವಿದ್ಯಾರ್ಥಿ ಗುಂಪುಗಳ ನಡುವೆ ಸಂಘರ್ಷ ಉಂಟಾಗಿತ್ತು ಎಂದು ರಾವ್ ಹೇಳಿದ್ದಾರೆ.
ಸಚಿವಾಲಯದಿಂದ ವಿ.ವಿಗೆ ಐದು ಪತ್ರ (ನವದೆಹಲಿ ವರದಿ): ಮತ್ತೊಂದೆಡೆ, ದಲಿತ ವಿದ್ಯಾರ್ಥಿ ವೇಮುಲ ರೋಹಿತ್ ಅವರ ಆತ್ಮಹತ್ಯೆಯಿಂದಾಗಿ ಪ್ರತಿಭಟನೆಗೆ ಗುರಿಯಾಗಿರುವ ಹೈದರಾಬಾದ್ ವಿ.ವಿ ಮೇಲೆ ಮಾನವ ಸಂಪನ್ಮೂಲ ಸಚಿವಾಲಯ ಒತ್ತಡ ಹೇರಿತ್ತೇ?
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಲಭ್ಯವಾಗಿರುವ ದಾಖಲೆಗಳು ಇಂಥದೊಂದು ಅನುಮಾನವನ್ನು ಹುಟ್ಟುಹಾಕಿವೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.