ಸಾಗುವಳಿದಾರರಿಗೆ ನೋಟಿಸ್ ಜಾರಿ: ಪ್ರತಿಭಟನೆ
ಹೊಸದುರ್ಗ: ಸಮಾವೇಶ ಹಾಗೂ ಪ್ರಚಾರ ಫಲಕಗಳಲ್ಲಿ ಅಭಿವೃದ್ಧಿ ಮಂತ್ರಪಠಿಸುವ ರಾಜ್ಯದ ಬಿಜೆಪಿ ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಹೇಳಿದರು.
ಬಗರ್ಹುಕುಂ ಸಾಗುವಳಿದಾರರು ಸಾಗುವಳಿ ಮಾಡುತ್ತಿರುವ ಜಮೀನು ಬಿಟ್ಟುಕೊಡುವಂತೆ ಸರ್ಕಾರ ನೋಟಿಸ್ ಜಾರಿಮಾಡಿರುವುದನ್ನು ವಿರೋಧಿಸಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸೋಮವಾರ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಅವರು ಮಾತನಾಡಿದರು.
ಅಧಿಕಾರಕ್ಕೆ ಬಂದು ಮೂರು ವರ್ಷಗಳಾಗುತ್ತಾ ಬಂದರೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ. ಮಾತಿನಲ್ಲಿ ಮಾತ್ರ ಅಭಿವೃದ್ಧಿ ಮಂತ್ರಪಠಿಸುವ ಅವರಿಗೆ ಬಗರ್ಹುಕುಂ ಸಾಗುವಳಿದಾರರು ಸಾಗುವಳಿ ಮಾಡುತ್ತಿರುವ ಜಮೀನನ್ನು ಸಕ್ರಮಗೊಳಿಸಿ ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳದೆ ಬಡ ರೈತರಿಂದ ಜಮೀನು ಕಸಿದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ತಾಲ್ಲೂಕಿನಲ್ಲಿ ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿದ್ದ ಸುಮಾರು 10 ಸಾವಿರ ಬಡ ರೈತರು ಹಾಗೂ ಕೃಷಿ ಕಾರ್ಮಿಕರಿಗೆ ತಮ್ಮ ಅಧಿಕಾರದ ಅವಧಿಯಲ್ಲಿ ಹಕ್ಕು ಪತ್ರ ನೀಡಲಾಗಿದೆ. ಇಂದಿನ ಸರ್ಕಾರ ರೈತರ ಹಿತಕಾಯದೆ ಅವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಲು ಮುಂದಾಗಿದೆ. ತಾಲ್ಲೂಕಿನ ರೈತರ ರಕ್ಷಣೆ ಮಾಡಬೇಕಾದವರು ಕ್ಷೇತ್ರದಲ್ಲಿಯೇ ಇಲ್ಲವಾಗಿದ್ದಾರೆ ಎಂದು ಹೇಳಿದರು.
ತಾಲ್ಲೂಕಿನ ಬಗರ್ಹುಕುಂ ಸಾಗುವಳಿದಾರರು ತಮ್ಮ ಜಮೀನನ್ನು ಯಾವುದೇ ಸಂದರ್ಭ ಬಂದರೂ ಬಿಟ್ಟುಕೊಡಬಾರದು. ಸರ್ಕಾರ ಕ್ರಿಮಿನಲ್ ಮೊಕದ್ದಮೆ ಹೂಡಿದರೂ ಅದಕ್ಕೆ ಅಂಜಬಾರದು. ಬಡರೈತರು ಹಾಗೂ ಕೃಷಿ ಕಾರ್ಮಿಕರ ಪರವಾಗಿ ಕಾಂಗ್ರೆಸ್ ಪಕ್ಷ ಎಲ್ಲಾ ಸಮಯದಲ್ಲಿಯೂ ಹೋರಾಟಕ್ಕೆ ಸಿದ್ದ ಎಂದರು.
ಬಗರ್ಹುಕುಂ ಸಾಗುವಳಿದಾರರಿಗೆ ನೀಡಿರುವ ನೋಟೀಸ್ ರದ್ದುಗೊಳಿಸುವುದು, ಬಗರ್ಹುಕುಂ ಸಮಿತಿ ನೇಮಕ ಮಾಡಿ ಸಾಗುವಳಿದಾರರಿಗೆ ಜಮೀನು ಹಕ್ಕುಪತ್ರ ನೀಡುವುದು ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನಾಕಾರರು ಸರ್ಕಾರವನ್ನು ಆಗ್ರಹಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಪೂಜಾರ್, ಅಬ್ದುಲ್ ವಾಮಿಕ್, ಪ್ರಧಾನ ಕಾರ್ಯದರ್ಶಿಗಳಾದ ರವೀಂದ್ರ, ನರಸಪ್ಪ, ಪುರಸಭೆ ಸದಸ್ಯ ಆಗ್ರೋ ಶಿವಣ್ಣ, ಜಿ.ಪಂ. ಮಾಜಿ ಉಪಾಧ್ಯಕ್ಷ ರಾಜಣ್ಣ, ಮಾಜಿ ಸದಸ್ಯ ಪಾತಲಿಂಗಪ್ಪ, ಮುಖಂಡರಾದ ಆರ್. ತಮ್ಮಣ್ಣ, ಲೋಕೇಶ್ವರಪ್ಪ, ಎನ್. ಸುರೇಶ್, ಗೋ. ತಿಪ್ಪೇಶ್, ರೇವಣ್ಣ, ಮತ್ತಿತರರು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.