ಸಿಂಗೂರು ಕಾಯ್ದೆ ಅಸಾಂವಿಧಾನಿಕ
ಕೋಲ್ಕತ್ತ (ಪಿಟಿಐ): ಸಿಂಗೂರು ಭೂ ಪುನರ್ವಸತಿ ಹಾಗೂ ಅಭಿವೃದ್ಧಿ ಕಾಯ್ದೆ (2011), ಅನೂರ್ಜಿತ ಹಾಗೂ ಅಸಾಂವಿಧಾನಿಕ ಎಂದು ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದ್ದು, `ದೀದಿ~ ಸರ್ಕಾರಕ್ಕೆ ತೀವ್ರ ಹಿನ್ನಡೆ ಆಗಿದೆ.
ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸರ್ಕಾರವು ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದೆ.
ಎಡರಂಗ ಸರ್ಕಾರವು ಸಿಂಗೂರಿನಲ್ಲಿ ಟಾಟಾ ಮೋಟಾರ್ಸ್ನ ಸಣ್ಣ ಕಾರು ತಯಾರಿಕಾ ಘಟಕ ಸ್ಥಾಪನೆಗೆ 977 ಎಕರೆ ಭೂಮಿ ಮಂಜೂರು ಮಾಡಿತ್ತು. ಆಗ ಪ್ರಮುಖ ವಿರೋಧ ಪಕ್ಷವಾಗಿದ್ದ ತೃಣಮೂಲ ಕಾಂಗ್ರೆಸ್, ಈ ಭೂಮಿಯಲ್ಲಿ 400 ಎಕರೆ ಜಾಗವನ್ನು ರೈತರಿಗೆ ವಾಪಸ್ ನೀಡುವಂತೆ ಒತ್ತಾಯಿಸಿ ಭಾರಿ ಪ್ರತಿಭಟನೆ ನಡೆಸಿತ್ತು.
ಕಾನೂನು -ಸುವ್ಯವಸ್ಥೆ ಸಮಸ್ಯೆಯ ಕಾರಣ ನೀಡಿ ಟಾಟಾ ಮೋಟಾರ್ಸ್ ನಂತರದಲ್ಲಿ ತನ್ನ ಯೋಜನೆಯನ್ನು ಸಿಂಗೂರಿನಿಂದ ಗುಜರಾತ್ನ ಸನಂದಾಕ್ಕೆ ಸ್ಥಳಾಂತರಿಸಿತ್ತು. ಆದರೆ ಸಿಂಗೂರಿನಲ್ಲಿ ಮಂಜೂರಾಗಿದ್ದ ಭೂಮಿಯನ್ನು ತನ್ನ ಬಳಿಯೇ ಇಟ್ಟುಕೊಂಡಿತ್ತು. 2011ರ ಮೇ ತಿಂಗಳಿನಲ್ಲಿ ಮಮತಾ ಸರ್ಕಾರ ಅಧಿಕಾರಕ್ಕೆ ಬಂದಾಗ ವಿಧಾನ ಸಭೆಯಲ್ಲಿ ಸಿಂಗೂರು ಕಾಯ್ದೆಗೆ ಅನುಮೋದನೆ ನೀಡಲಾಗಿತ್ತು.
ಸಿಂಗೂರು ಕಾಯ್ದೆ ಸಂವಿಧಾನ ಬದ್ಧವಾಗಿದೆ ಎಂದು ಕಳೆದ ವರ್ಷ ಸೆಪ್ಟೆಂಬರ್ 28ರಂದು ನ್ಯಾಯಮೂರ್ತಿ ಐ.ಪಿ.ಮುಖರ್ಜಿ ಅವರನ್ನು ಒಳಗೊಂಡ ಕಲ್ಕತ್ತಾ ಹೈಕೋರ್ಟ್ ಏಕಸದಸ್ಯ ಪೀಠವು ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನ ವಿಭಾಗೀಯ ಪೀಠಕ್ಕೆ ಟಾಟಾ ಮೋಟಾರ್ಸ್ ಮೇಲ್ಮನವಿ ಸಲ್ಲಿಸಿತ್ತು.
ಈ ಕಾಯ್ದೆ ಜಾರಿಗೆ ಸರ್ಕಾರವು ರಾಷ್ಟ್ರಪತಿ ಒಪ್ಪಿಗೆ ಪಡೆದುಕೊಂಡಿರಲಿಲ್ಲ. ಹಾಗಾಗಿ ಇದು ಅಸಾಂವಿಧಾನಿಕ ಎಂದು ನ್ಯಾಯಮೂರ್ತಿಗಳಾದ ಪಿನಾಕಿಚಂದ್ರ ಘೋಷ್ ಹಾಗೂ ಮೃಣಾಲ್ ಕಾಂತಿ ಚೌಧರಿ ಅವರನ್ನು ಒಳಗೊಂಡ ವಿಭಾಗೀಯ ಪೀಠ ಹೇಳಿದೆ.
ಈ ಆದೇಶವನ್ನು ಪ್ರಶ್ನಿಸಿ ಸಂಬಂಧಪಟ್ಟವರು ಉನ್ನತ ಕೋರ್ಟ್ ಮೊರೆ ಹೋಗಲು ಎರಡು ತಿಂಗಳ ಕಾಲಾವಧಿ ನೀಡಿದ್ದು, ಅಲ್ಲಿಯ ವರೆಗೆ ಇದು ಜಾರಿಗೆ ಬರುವುದಿಲ್ಲ ಎಂದು ವಿಭಾಗೀಯ ಪೀಠ ಹೇಳಿದೆ.
ಮುಂದಿನ ನಡೆ: ಹೈಕೋರ್ಟ್ ತೀರ್ಪಿನಿಂದಾಗಿ ತೀವ್ರ ಹಿನ್ನಡೆ ಅನುಭವಿಸಿರುವ ಪಶ್ಚಿಮ ಬಂಗಾಳ ಸರ್ಕಾರವು, `ತೀರ್ಪಿನ ಪ್ರತಿ ಬಡೆದ ಬಳಿಕ ಮುಂದಿನ ನಡೆಯನ್ನು ನಿರ್ಧರಿಸಲಾಗುತ್ತದೆ~ ಎಂದಿದೆ.
ಭೂಮಿ ವಾಪಸ್- ಮಮತಾ: ರೈತರಿಗೆ ಸೇರಿದ ಭೂಮಿಯನ್ನು ಅವರಿಗೆ ವಾಪಸ್ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ ` ನಾವು ರೈತರ ಜತೆ ಇದ್ದೇ ಇರುತ್ತೇವೆ. ಅಂತಿಮವಾಗಿ ಅವರಿಗೇ ಜಯವಾಗುತ್ತದೆ~ ಎಂದು ಮಮತಾ ಸುದ್ದಿಗಾರರಿಗೆ ತಿಳಿಸಿದರು.ತೀರ್ಪಿನ ಬಗ್ಗೆ ಅವರು ಪ್ರತಿಕ್ರಿಯೆ ನೀಡಲಿಲ್ಲ.
`ನನ್ನ ಬದುಕಿನ ಉದ್ದಕ್ಕೂ ನಾನು ರೈತರು, ಕಾರ್ಮಿಕರು, ಬಡವರು, ಸೌಲಭ್ಯ ವಂಚಿತರಿಗಾಗಿ ಹೋರಾಟ ಮಾಡಿದ್ದೇನೆ. ನಾನು ಅಧಿಕಾರದಲ್ಲಿ ಇರಲಿ, ಬಿಡಲಿ ಹೋರಾಟವನ್ನು ಮುಂದುವರಿಸುತ್ತೇನೆ~ ಎಂದು ಮಮತಾ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಸಿಪಿಎಂ ಟೀಕೆ: `ಹೈಕೋರ್ಟ್ ತೀರ್ಪು ನಮ್ಮ ಪಕ್ಷದ ಧೋರಣೆಯನ್ನು ಸಮರ್ಥಿಸಿದೆ~ ಎಂದು ವಿರೋಧ ಪಕ್ಷದ ನಾಯಕ ಸಿಪಿಎಂನ ಸೂರ್ಯಕಾಂತ್ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.`ಈ ಮಸೂದೆ ಸಂವಿಧಾನಬದ್ಧವಾಗಿಲ್ಲ ಎಂದು ನಾವು ಹೇಳುತ್ತಲೇ ಬಂದಿದ್ದೇವೆ. ಈ ಬಗ್ಗೆ ನಾವು ಸರ್ಕಾರಕ್ಕೆ ಹಲವು ಸಲಹೆಗಳನ್ನೂ ನೀಡಿದ್ದೆವು~ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ರೈತರಿಗೆ ಅತೃಪ್ತಿ: ಸಿಂಗೂರು ಕಾಯ್ದೆ ಅಸಿಂಧು ಎಂದು ಹೈಕೋರ್ಟ್ ನೀಡಿರುವ ತೀರ್ಪಿಗೆ ರೈತರು ಅಸಮಾಧಾನಗೊಂಡಿದ್ದಾರೆ.ಗೋಪಾಲ್ನಗರ್ ಘೋಸ್ಪಾರ ಹಾಗೂ ಪುರ್ಬಪಾರದ ಬಹುತೇಕ ರೈತರಿಗೆ ತಮ್ಮ ಭೂಮಿಯನ್ನು ಕಳೆದುಕೊಳ್ಳುವುದಕ್ಕೆ ಇಷ್ಟ ಇಲ್ಲ. ಹಾಗಾಗಿ ಈ ಹಿಂದಿನ ಎಡ ರಂಗ ಸರ್ಕಾರ ನೀಡಿದ್ದ ಪರಿಹಾರದ ಚೆಕ್ಗಳನ್ನು ಅವರು ಸ್ವೀಕರಿಸಿಲ್ಲ.
` ನಮ್ಮ ಭೂಮಿಯನ್ನು ಮರಳಿ ಪಡೆಯುತ್ತೇವೆ ಎನ್ನುವ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದರೆ ಸಿಂಗೂರು ಕಾಯ್ದೆ ಅಸಿಂಧು ಎಂದು ಕೋರ್ಟ್ ತೀರ್ಪು ನೀಡಿದೆ. ನಮ್ಮ ಭೂಮಿಯನ್ನು ಮರಳಿ ಪಡೆಯುವುದು ಹೇಗೆ ಎನ್ನುವುದೇ ತೋಚುತ್ತಿಲ್ಲ~ ಎಂದು ರೈತರು ಅಲವತ್ತುಕೊಂಡಿದ್ದಾರೆ.ಈ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿಯೂ ಕೆಲವರು ಹೇಳಿದ್ದಾರೆ.
ಟಾಟಾ ಮೋಟಾರ್ಸ್ ಸ್ವಾಗತ: ಸಿಂಗೂರು ಕಾಯ್ದೆ ಅಸಾಂವಿಧಾನಿಕ ಎಂದು ಕಲ್ಕತ್ತಾ ಹೈಕೋರ್ಟ್ ನೀಡಿರುವ ತೀರ್ಪನ್ನು ಟಾಟಾ ಮೋಟಾರ್ಸ್ ಸ್ವಾಗತಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.