ಹತ್ತು ಶುಶ್ರೂಷಕರು ಅಸ್ವಸ್ಥ

ಬೆಂಗಳೂರು: ಸೇವೆ ಕಾಯಂಗೊಳಿಸುವಂತೆ ಒತ್ತಾಯಿಸಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ಗುತ್ತಿಗೆ ಆಧಾರಿತ ಶುಶ್ರೂಷಕರಲ್ಲಿ 10 ಮಂದಿ ಬುಧವಾರ ಅಸ್ವಸ್ಥಗೊಂಡಿದ್ದಾರೆ.
8 ದಿನದಿಂದ ಧರಣಿ ಮಾಡುತ್ತಿರುವ ಶುಶ್ರೂಷಕರಲ್ಲಿ ಸಂಧ್ಯಾ, ಪೂರ್ಣಿಮಾ, ಅನ್ನಪೂರ್ಣ, ರುಕ್ಮಿಣಿ, ಮಂಜುಳಾ, ಅನುರಾಧ, ರೀನಾ, ರೇಖಾ, ಸೀತಾಬಾಯಿ ಮತ್ತು ಎಮಿಲ್ಡ್ ಎಂಬುವರು ಅಸ್ವಸ್ಥಗೊಂಡಿದ್ದಾರೆ. ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲ್ಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಮಾರು ನಾಲ್ಕು ಸಾವಿರ ಶುಶ್ರೂಷಕರು 13 ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸೇವೆ ಕಾಯಂಗೊಳಿಸುವಂತೆ ಹಲವು ಬಾರಿ ಪ್ರತಿಭಟನೆ ಮಾಡಿದ್ದೇವೆ. ಆದರೆ, ಯಾವುದೇ ಸರ್ಕಾರ ಸೇವೆ ಕಾಯಂಗೊಳಿಸಲು ಕ್ರಮ ಕೈಗೊಂಡಿಲ್ಲ’ ಎಂದು ರಾಜ್ಯ ಗುತ್ತಿಗೆ ಆಧಾರಿತ ಶುಶ್ರೂಷಕರ ಸಂಘದ ಖಜಾಂಚಿ ಎಚ್.ಸಿ.ನಾಗರಾಜ್ ದೂರಿದರು.
‘2012ರ ಫೆಬ್ರುವರಿಯಲ್ಲಿ ಪ್ರತಿಭಟನೆ ಮಾಡಿದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸೇವೆ ಕಾಯಂಗೊಳಿಸುವುದಾಗಿ ನೀಡಿದ್ದ ಭರವಸೆ ಈವರೆಗೂ ಭರವಸೆ ಈಡೇರಿಸಿಲ್ಲ’ ಎಂದರು.
ಸರ್ಕಾರ ಮಾಸಿಕ ₨ 8 ಸಾವಿರ ವೇತನ ನೀಡುತ್ತಿದೆ. ವೇತನ ಕಡಿಮೆ ಇರುವುದರಿಂದ ಜೀವನ ನಿರ್ವಹಣೆಗೆ ಕಷ್ಟವಾಗುತ್ತಿದೆ. ಮತ್ತೊಂದೆಡೆ ಸೇವಾ ಭದ್ರತೆಯು ಇಲ್ಲ ಎಂದು ಧರಣಿನಿರತರು ಅಳಲು ತೋಡಿಕೊಂಡರು.
ಗುತ್ತಿಗೆ ವೈದ್ಯರು ಮತ್ತು ದಂತ ವೈದ್ಯರನ್ನು ಕಾಯಂ ಮಾಡಿರುವಂತೆ ಶುಶ್ರೂಷಕರನ್ನು ಕಾಯಂ ಮಾಡಿಕೊಳ್ಳಬೇಕು. ಇಲಾಖೆಯಲ್ಲಿ ಖಾಲಿ ಇರುವ 2 ಸಾವಿರ ಶುಶ್ರೂಷಕರ ಹುದ್ದೆಗಳಿಗೆ ಹೊಸ ನೇಮಕಾತಿ ಬದಲಿಗೆ ಗುತ್ತಿಗೆ ಸಿಬ್ಬಂದಿಯನ್ನೇ ಆ ಹುದ್ದೆಗಳಿಗೆ ನೇಮಿಸಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.