ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡುಗೀರ ಕಾಲೇಜಿಂದಾಗಿ ಎಲ್ಲಾ ಮಿಸ್‌!

ಮಿನಿ ಮಾತು -ನಟಿ ವೈಷ್ಣವಿ
Last Updated 18 ಜುಲೈ 2016, 19:30 IST
ಅಕ್ಷರ ಗಾತ್ರ

‘ದೇವಿ’, ‘ಮುಂಗಾರು ಮಳೆ’, ‘ಅಗ್ನಿಸಾಕ್ಷಿ’ ಧಾರಾವಾಹಿಗಳ ಮೂಲಕ ಜನಪ್ರಿಯ ಆದವರು ವೈಷ್ಣವಿ. ಕೆಲವು ಸಿನಿಮಾಗಳಲ್ಲೂ ನಟಿಸಿರುವ ಅವರು, ಸದ್ಯಕ್ಕೆ ‘ಗಿರಗಿಟ್ಲೆ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ. ಅವರು ‘ಪ್ರಜಾವಾಣಿ’ ಜೊತೆ ಮಾತಿಗೆ ಸಿಕ್ಕಾಗ...

*ನಿಮ್ಮ ಈ ಗುಳಿಕೆನ್ನೆಗೆ ಬಿದ್ದ ಹುಡುಗರೆಷ್ಟು?
ಅಯ್ಯೋ... ಕಾಲೇಜಿಗೆ ಹೋಗುವಾಗ ಅದೆಲ್ಲಾ ನಾನು ಮಿಸ್‌ ಮಾಡಿಕೊಂಡು ಬಿಟ್ಟೆ. ಯಾಕೆಂದ್ರೆ ನಾನು ಓದಿದ್ದು ಹುಡುಗಿಯರ ಕಾಲೇಜಿನಲ್ಲಿ.

*ಅದಕ್ಕೇನಾದ್ರೂ ಬೇಜಾರು ಇದ್ಯಾ?
ಬೇಜಾರು ಅಂತೇನೂ ಇಲ್ಲ. ಆದ್ರೂ ಮಿಸ್‌ ಮಾಡಿಕೊಂಡೆ ಅಷ್ಟೇ. ಈಗ ನೋಡಿ. ಎಲ್ಲಿ ಹೋದ್ರೂ ಬೇಡಬೇಡ ಎಂದ್ರೂ ಹುಡುಗ್ರು ಬೆನ್ನ ಹಿಂದೆ ಬೀಳ್ತಾರೆ. ಪ್ರಪೋಸ್‌ ಮಾಡೋಕೆ ಬರ್ತಾರೆ. ನಾನು ಅದನ್ನೆಲ್ಲ ಸೀರಿಯಸ್ಸಾಗಿ ತಗೊಳ್ಳಲ್ಲ. ತಮಾಷೆ ಮಾಡಿ ಬಿಡ್ತೇನೆ. ಅದಕ್ಕೆ ಸದ್ಯ ಬಚಾವ್‌ ಆಗಿದ್ದೇನೆ.

*ನಟನಾ ಕ್ಷೇತ್ರಕ್ಕೆ ಬಂದದ್ದು ಹೇಗೆ?
ಒಮ್ಮೆ ದೇವಸ್ಥಾನಕ್ಕೆ ಹೋದಾಗ ನಿರ್ದೇಶಕರೊಬ್ಬರ ಕಣ್ಣಿಗೆ ಬಿದ್ದೆ. ಅವರೇ ನನ್ನನ್ನು ನೋಡಿ ಈ ಕ್ಷೇತ್ರಕ್ಕೆ ಪರಿಚಯಿಸಿದರು.

*ಆ ದಿನ ದೇವಸ್ಥಾನಕ್ಕೆ ಹೋಗಿರದಿದ್ರೆ ಇವತ್ತು ನೀವು ಎಲ್ಲಿ ಇರುತ್ತಿದ್ರಿ?
ನಾನು ಭರತನಾಟ್ಯ, ಕೂಚಿಪುಡಿ ನೃತ್ಯಗಾರ್ತಿ. ಆದ್ದರಿಂದ ಕೋರಿಯೊಗ್ರಫಿಯಲ್ಲಿ ಮುಂದುವರಿಯುತ್ತಿದ್ದೆ. ಇಲ್ಲವೇ ಫ್ಯಾಷನ್‌ ಡಿಸೈನರ್‌ ಆಗ್ತಾ ಇದ್ದೆ.

*ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ತುಸು ಹೆಚ್ಚೇ ಎನಿಸುವಷ್ಟು ಮುಗ್ಧತೆ ತೋರಿದ್ದೀರಿ. ಸನ್ನಿಧಿ ಪಾತ್ರಕ್ಕಿಂತ ವೈಷ್ಣವಿ ಎಷ್ಟು ಭಿನ್ನ?
ಸನ್ನಿಧಿಯ ಹಾಗೆ ನಾನು ನಿಜ ಜೀವನದಲ್ಲೂ ಮೃದು ಸ್ವಭಾವದವಳೇ. ಆದರೆ ಅವಳ ಹಾಗೆ ಚಿಕ್ಕಚಿಕ್ಕದಕ್ಕೂ ಅಳುವವಳು ಅಲ್ಲ.  ಬೇರೆಯವರನ್ನು ಬೇಗನೆ ನಂಬುವವಳೂ ಅಲ್ಲ. ತುಂಬಾ ಪ್ರಾಕ್ಟಿಕಲ್‌ ಆಗಿ ಯೋಚನೆ ಮಾಡುತ್ತೇನೆ.

*ತುಂಬಾ ಕೋಪ ಮಾಡಿಕೊಂಡಿದ್ದು ಯಾವಾಗ?
ಚಿಕ್ಕವಳಿದ್ದಾಗ ಮಾಮೂಲು ಮಕ್ಕಳ ಹಾಗೆ ಸಿಟ್ಟು ಮಾಡಿಕೊಳ್ತಾ ಇದ್ದೆ. ಅದ್ಯಾಕೋ ಗೊತ್ತಿಲ್ಲ ನೋಡಿ. ಈಗ ಸಿಟ್ಟೇ ಬರಲ್ಲ.

*ನನಸಾಗದ ಕನಸು ಏನಾದರೂ ಇದ್ಯಾ?
ಕನಸು ಕಂಡದ್ದಕ್ಕಿಂತ ಹೆಚ್ಚು ಅವಕಾಶಗಳು, ಖ್ಯಾತಿ ಸಿಕ್ಕಿವೆ. ಎಲ್ಲ ಕನಸೂ ನನಸಾಗಿವೆ.

*ಹುಡುಗನ ಬಗ್ಗೂ ಕನಸು ಕಾಣಲಿಲ್ವಾ?
ಹಾಂ... ಆ ಕನಸು ಈಗಲ್ಲ. ತುಂಬಾ ಚಿಕ್ಕವಳಿದ್ದಾಗಲೇ ಕಂಡಿದ್ದೆ. ಅದ್ಯಾಕೋ ಗೊತ್ತಿಲ್ಲ. ಬಾಲ್ಯದಿಂದಲೂ ನಟನ ಜೊತೆ ಮದುವೆಯಾಗೋ ಕನಸಿತ್ತು. ಆ ಕನಸು ಏನಾಗುತ್ತೋ ನೋಡಬೇಕು.

*ಎಂಥ ಹುಡುಗ ಇಷ್ಟ? ನಿಮ್ಮ ಮನಸ್ಸಲ್ಲಿ ಯಾರಾದರೂ ನಟರು ಇದ್ದಾರೆಯೇ?
ಹೈಟು, ವೇಟು, ವೈಟು ಅಂತೆಲ್ಲಾ ತಲೆಕೆಡಿಸಿಕೊಳ್ಳುವವಳಲ್ಲ ನಾನು. ಸಿಂಪಲ್ಲಾಗಿರೋ, ನೋಡಲು ಸ್ವಲ್ಪ ಆದರೂ ಸುಂದರವಾಗಿರೋ ಒಳ್ಳೆಯ ಹುಡುಗ ಸಾಕು. ಸದ್ಯ ಯಾರೂ ಮನಸ್ಸಲ್ಲಿ ಇಲ್ಲ.

*ದಿನಪೂರ್ತಿ ಇರುವ ಅವಕಾಶ ಸಿಕ್ಕರೆ ಯಾವ ನಟನೊಂದಿಗೆ ಇರಲು ಇಷ್ಟ?
ನನಗೆ ರಜನೀಕಾಂತ್‌ ಅವರನ್ನು ಭೇಟಿಯಾಗಿ ಅವರ ಜೊತೆ ಮಾತನಾಡುವ ಆಸೆ ತುಂಬಾ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT