ಹೊಸ ಬೆಳೆ ವಿಮೆ: ಕೇಂದ್ರದ ಕೊಡುಗೆ

ನವದೆಹಲಿ (ಪಿಟಿಐ): ‘ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನಾ’ಗೆ (ಪಿಎಂಎಫ್ಬಿವೈ) ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ.
ಈಗಾಗಲೇ ಜಾರಿಯಲ್ಲಿ ಇರುವ ರಾಷ್ಟ್ರೀಯ ಕೃಷಿ ವಿಮೆ ಯೋಜನೆ (ಎನ್ಎಐಎಸ್) ಮತ್ತು ‘ಸುಧಾರಿತ ಎನ್ಎಐಎಸ್’ ಯೋಜನೆಗಳಿಗೆ ಬದಲಾಗಿ ಈ ಹೊಸ ಯೋಜನೆ ಜಾರಿಗೆ ಬರಲಿದೆ.
ಇಡೀ ರಾಜ್ಯದ ವಿಮೆ ಯೋಜನೆಯನ್ನು ಒಂದು ವಿಮೆ ಸಂಸ್ಥೆಯ ಸುಪರ್ದಿಗೆ ಒಪ್ಪಿಸಲಾಗುತ್ತದೆ. ಭಾರತೀಯ ಕೃಷಿ ವಿಮೆ ಕಂಪೆನಿ ಮತ್ತು ಖಾಸಗಿ ವಿಮೆ ಸಂಸ್ಥೆಗಳು ಈ ಯೋಜನೆಯನ್ನು ಜಾರಿ ಮಾಡಲಿವೆ.
‘ರೈತರು ಈ ಹೊಸ ವಿಮೆ ಯೋಜನೆಯ ಪ್ರಯೋಜನ ಪಡೆಯಲು ಮುಂದಾಗಲಿದ್ದಾರೆ. ಇದು ಅವರ ಹಣಕಾಸಿನ ಅನಿಶ್ಚಿತತೆ ದೂರ ಮಾಡಲಿದೆ ’ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಅವರು ಪ್ರತಿಕ್ರಿಯಿಸಿದ್ದಾರೆ.
ಯೋಜನೆಯ ವೈಶಿಷ್ಟ್ಯಗಳು: ‘ಅತಿ ಕಡಿಮೆ ಪ್ರೀಮಿಯಂನ ಈ ಯೋಜನೆಯಲ್ಲಿ ಮೊಬೈಲ್ನಂತಹ ಸರಳ ತಂತ್ರಜ್ಞಾನದ ಬಳಕೆ ಇರಲಿದೆ. ನಷ್ಟದ ತ್ವರಿತ ಅಂದಾಜು, ಕಾಲಮಿತಿಯೊಳಗೆ ಹಣ ಪಾವತಿ ಮುಂತಾದವು ಈ ಯೋಜನೆಯ ಪ್ರಮುಖ ವೈಶಿಷ್ಟ್ಯಗಳಾಗಿದ್ದು, ರೈತರ ಪಾಲಿಗೆ ಇದೊಂದು ಐತಿಹಾಸಿಕ ದಿನವಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
‘ಯೋಜನೆ ವ್ಯಾಪ್ತಿಗೆ ಸೇರ್ಪಡೆಯಾಗುವ ಮತ್ತು ಪ್ರಯೋಜನ ಪಡೆಯುವುದನ್ನು ಸರಳಗೊಳಿಸಲಾಗಿದೆ. ಹೀಗಾಗಿ ಯೋಜನೆಯ ಪ್ರಯೋಜನ ಪಡೆಯಿರಿ.’ ಎಂದು ಮೋದಿ ಅವರು ರೈತಾಪಿ ವರ್ಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
ನೈಸರ್ಗಿಕ ವಿಪತ್ತಿನ ವ್ಯಾಖ್ಯಾನ ವಿಸ್ತರಿಸಲಾಗಿದ್ದು, ಪ್ರವಾಹಪೀಡಿತ ಬೆಳೆ, ಬೆಳೆ ಕಟಾವು ಮಾಡಿದ ನಂತರದ ನಷ್ಟವೂ ವಿಮೆ ವ್ಯಾಪ್ತಿಗೆ ಒಳಪಡಲಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.