ಚಿತ್ರದುರ್ಗ: ನಗರದಲ್ಲಿ ಕಳೆದ ಮೂರು ದಿನಗಳ ಕಾಲ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ 14 ಮತ್ತು 17 ವರ್ಷ ವಯೋಮಿತಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಮೂಡಬಿದಿರೆ ಆಳ್ವಾಸ್ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದರು.
ಆಳ್ವಾಸ್ ಸಂಸ್ಥೆ ವಿದ್ಯಾರ್ಥಿಗಳುಎಲ್ಲ ಸ್ಪರ್ಧೆಗಳಲ್ಲೂ ಮಿಂಚಿದರು. ಈ ಗೆಲುವು ಕ್ರೀಡಾಸಕ್ತರಲ್ಲೂ ಆಸಕ್ತಿ ಮೂಡಿಸಿತು.
`ಆಳ್ವಾಸ್ ಸಂಸ್ಥೆಯಲ್ಲಿ 400 ಕ್ರೀಡಾ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಉಚಿತ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಕ್ರೀಡಾಪಟುಗಳಿಗೆ ನಿರಂತರ ತರಬೇತಿ ನೀಡಲಾಗುತ್ತಿದೆ. ಹೀಗಾಗಿ ಎಲ್ಲ ಕ್ರೀಡಾಕೂಟಗಳಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಗೆಲುವು ಸಾಧಿಸುತ್ತಿದ್ದಾರೆ. ಜತೆಗೆ, ಆಳ್ವಾಸ್ ಸಂಸ್ಥೆ ಅಧ್ಯಕ್ಷ ಡಾ.ಮೋಹನ್ ಆಳ್ವಾ ಎಲ್ಲ ರೀತಿಯ ಸಹಕಾರ, ಪ್ರೋತ್ಸಾಹ ನೀಡುತ್ತಾರೆ' ಎಂದು ಆಳ್ವಾಸ್ ಸಂಸ್ಥೆಯ ದೈಹಿಕ ನಿರ್ದೇಶಕ ಆನಂದ್ ಹೇಳುತ್ತಾರೆ.
3 ದಿನಗಳ ಕಾಲ ನಡೆದ ಕ್ರೀಡಾಕೂಟದಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಎರಡು ಕ್ರೀಡಾಶಾಲೆ ವಿದ್ಯಾರ್ಥಿಗಳ ಸಹ ಇದರಲ್ಲಿ ಭಾಗವಹಿಸಿದ್ದರು. ಕೆಲವು ಲೋಪದೋಷಗಳ ಮಧ್ಯೆಯೂ ಕ್ರೀಡಾಕೂಟ ಯಶಸ್ವಿಯಾಗಿ ಮುಕ್ತಾಯಗೊಂಡಿತು.
ಜಿಲ್ಲೆ ಕಳಪೆ ಪ್ರದರ್ಶನ ನೀಡಿದ್ದು ಜಿಲ್ಲೆಯ ಜನತೆಗೆ ಭ್ರಮನಿರಸ ಮೂಡಿಸಿತು. ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಸೇರಿದಂತೆ ಅಥ್ಲೆಟಿಕ್ಸ್ಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಒದಗಿಸಲಾಗಿದ್ದರೂ ಚಿತ್ರದುರ್ಗ ಜಿಲ್ಲೆ ಕಳಪೆ ಪ್ರದರ್ಶನ ನೀಡಿತು. ಕೇವಲ ಒಂದು ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕೆ ಮಾತ್ರ ತೃಪ್ತಪಟ್ಟುಕೊಳ್ಳಬೇಕಾಯಿತು.
ಬಾಲಕರ 14 ವರ್ಷದ 4X100 ರಿಲೇಯಲ್ಲಿ ಮಾತ್ರ ಮೂರನೇ ಸ್ಥಾನ ಪಡೆಯುವಲ್ಲಿ ಮಾತ್ರ ಚಿತ್ರದುರ್ಗ ಜಿಲ್ಲೆ ಯಶಸ್ವಿಯಾಯಿತು.