ಚಿಕ್ಕಮಗಳೂರು: `ಗಣರಾಜ್ಯೋತ್ಸವದ ನಮ್ಮ ಆಶಯಗಳು ಫಲ ನೀಡಿವೆಯೇ ಎಂಬುದರ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಭಾವೈಕ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡರೂ ದೇಶದಲ್ಲಿ ರಾಜ್ಯ, ರಾಜ್ಯಗಳ ನಡುವೆ ಅನೇಕ ವ್ಯಾಜ್ಯಗಳು ಹಾಗೆಯೇ ಉಳಿದಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್ ಕುಮಾರ್ ವಿಷಾದಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದರು.
ಗಡಿ, ಅಂತರರಾಜ್ಯ ಜಲ ವಿವಾದ ಹಾಗೂ ಅಭಿವೃದ್ಧಿಯ ಅಸಮತೋಲನದ ಅಸಮಾಧಾನಗಳು ರಾಜ್ಯಗಳ ನಡುವಿನ ವೈಮನಸ್ಸಿಗೆ ಕಾರಣವಾಗಿವೆ. ಇವೆಲ್ಲದರ ನಡುವೆ ರಾಷ್ಟ್ರವು ಶತ್ರುಗಳ ನಿರಂತರ ಕುತಂತ್ರ ಮತ್ತು ಭಯೋತ್ಪಾದಕರ ದಾಳಿಗೆ ಒಳಗಾಗುತ್ತಿದೆ. ಇವೆಲ್ಲವನ್ನು ಮೆಟ್ಟಿ ನಿಲ್ಲುವ ಶಕ್ಕಿ ನಮ್ಮ ರಾಷ್ಟ್ರಕ್ಕಿದ್ದು, ನಾವೆಲ್ಲರೂ ಭಾರತೀಯರೆಂದು ಗುರುತಿಸಿಕೊಳ್ಳಲು ಹೆಮ್ಮೆಪಡಬೇಕು ಎಂದರು.
ದೇಶದ ಎಲ್ಲ ಬಡಜನರನ್ನು ಆರ್ಥಿಕವಾಗಿ ಮುಂದೆ ತರುವ, ಜತೆಗೆ ದುಡಿಯುವ ಕೈಗಳಿಗೆ ಕೆಲಸ ಒದಗಿಸಿದಾಗ ಮಾತ್ರವೇ ನಿಜವಾದ ಪ್ರಜಾಪ್ರಭುತ್ವದ ಅರಿವು ಉಂಟಾಗುತ್ತದೆ. ಈ ನಿಟ್ಟಿನಲ್ಲಿ ರಾಷ್ಟ್ರವು 63 ವರ್ಷಗಳಿಂದ ಪ್ರಗತಿಯ ಹಾದಿಯಲ್ಲಿ ಕ್ರಮಿಸಿದೆ ಎಂದರು.
ಸರ್ವಧರ್ಮ ಸಮನ್ವಯದ ಪ್ರತಿಜ್ಞೆ ಮಾಡುವುದರ ಜತೆಗೇ ದೇಶದ ಭವ್ಯ ಪರಂಪರೆ, ಸಂಸ್ಕೃತಿ ಉಳಿಸಿ-ಬೆಳೆಸಲು ಪ್ರತಿಯೊಬ್ಬರೂ ಯೋಚಿಸಬೇಕು. ಸಂಕುಚಿತ ಮನೋಭಾವದಿಂದ ಹೊರಬಂದು, ಏಕತೆಯಿಂದ ಕೂಡಿದ ಬಲಿಷ್ಠ ರಾಷ್ಟ್ರ ನಿರ್ಮಿಸಲು ಶ್ರಮಿಸಬೇಕು ಎಂದು ಉತ್ತೇಜಿಸಿದರು.
ಶಾಸಕ ಸಿ.ಟಿ.ರವಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಚಿತಾ ನರೇಂದ್ರ, ಉಪಾಧ್ಯಕ್ಷ ಆನಂದಪ್ಪ, ಜಿಲ್ಲಾಧಿಕಾರಿ ಡಿ.ಕೆ.ರಂಗಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ವಿಕಾಸ್, ನಗರಸಭೆ ಅಧ್ಯಕ್ಷ ಪ್ರೇಮ್ ಕುಮಾರ್, ಸಿಡಿಎ ಅಧ್ಯಕ್ಷ ಬಿ.ರಾಜಪ್ಪ, ವಿಹಾರ ಮತ್ತು ವಸತಿಧಾಮ ನಿಗಮ ಅಧ್ಯಕ್ಷ ಎಂ.ಕೆ.ಪ್ರಾಣೇಶ್ ಮತ್ತಿತರರಿದ್ದರು.