ಕೋಲ್ಕತ್ತ (ಪಿಟಿಐ): ಸದ್ಯ ಸಂಕಷ್ಟದಲ್ಲಿರುವ ದೇಶದ ಹಣಕಾಸು ಮಾರುಕಟ್ಟೆಯಲ್ಲಿ ಚೇತರಿಕೆ ಉಂಟು ಮಾಡಲು ಅಗತ್ಯ ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಳ್ಳಲಿದ್ದು, ಈ ಸಂಬಂಧ ಸೋಮವಾರ ಪ್ರಕಟಣೆ ಹೊರಬೀಳಲಿದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಇಲ್ಲಿ ಹೇಳಿದರು.
ರಾಷ್ಟ್ರಪತಿ ಸ್ಥಾನಕ್ಕೆ ಯುಪಿಎ ಅಭ್ಯರ್ಥಿಯಾಗಿರುವ ಪ್ರಣವ್ ಮುಖರ್ಜಿ ಇದೇ 26ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದು, ಮುನ್ನಾದಿನ(25ರಂದು) ಸುಧಾರಣೆ ಕ್ರಮಗಳನ್ನು ಪ್ರಕಟಿಸಲಿದ್ದಾರೆ.
ಆರ್ಥಿಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಆರ್.ಗೋಪಾಲನ್ ಶುಕ್ರವಾರ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಡಿ.ಸುಬ್ಬರಾವ್ ಅವರನ್ನು ಭೇಟಿ ಮಾಡಿದ್ದು, ಮಾರುಕಟ್ಟೆ ಸುಧಾರಣೆ ಕ್ರಮಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.