ಕುಣಿಗಲ್:ವಿವಿಧ ಮತ ಮತ್ತು ಜಾರಿಗಳ ನಡುವೆ ಜಾತ್ಯತೀತ ಮನೋಭಾವ ಹೊಂದಿರುವ ಭಾರತ ಧಾರ್ಮಿಕ ಹಾಗೂ ವೈಜ್ಞಾನಿಕವಾಗಿ ಗಣನೀಯ ಸಾಧನೆ ಮಾಡಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಕೊರಟಗೆರೆ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯಸ್ವಾಮಿ ಹೇಳಿದರು.
ತಾಲ್ಲೂಕಿನ ಎಡೆಯೂರು ಸಿದ್ಧಲಿಂಗೇಶ್ವರಸ್ವಾಮಿ ದೇಗುಲದಲ್ಲಿ ಗುರುವಾರ ಸಂಜೆ ಕಾರ್ತೀಕ ಅಮಾವಸ್ಯೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಲಕ್ಷ ದೀಪೋತ್ಸವ ಅಂಗವಾಗಿ ಏರ್ಪಡಿಸಿದ್ದ ಧರ್ಮ ಜಾಗೃತಿ ಸಮಾವೇಶ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದೀಪೋತ್ಸವ ಕಾರ್ಯಕ್ರಮಗಳು ಕೇವಲ ದೀಪಗಳನ್ನು ಬೆಳಗಿಸುವ ಕಾರ್ಯಕ್ರಮವಾಗದೆ ಮಾನವನಲ್ಲಿರುವ ಅಜ್ಞಾನವನ್ನು ಅಳಿಸಿ ಸುಜ್ಞಾನದೆಡೆಗೆ ಕೊಂಡೊಯ್ಯುವಂತಾಗಲಿ ಎಂದು ಆಶಿಸಿದರು.
ಕಾಡುಸಿದ್ದೇಶ್ವರ ಮಠದ ಕರಿವೃಷಭ ಶಿವಾಚಾರ್ಯ, ಚುಂಚನಿ ಮಠದ ಅಲ್ಲಮಪ್ರಭು ಶಿವಾಚಾರ್ಯ, ಎಡೆಯೂರು ಬಾಳೆಹೊನ್ನೂರು ಖಾಸಾ ಶಾಖಾ ಮಠದ ರೇಣುಕಾ ಶಿವಾಚಾರ್ಯ, ಕಗ್ಗೆರೆ ತೋಂಟದ ಸಿದ್ದಲಿಂಗಸ್ವಾಮಿ, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ,ಉಪವಿಭಾಗಾಧಿಕಾರಿ ನಕುಲ್, ಮುಖಂಡರಾದ ನಿರ್ಮಲ, ಜಿಲ್ಲಾಪಂಚಾಯಿತಿ ಸದಸ್ಯ ಅರುಣ್ಕುಮಾರ್ ಹಾಗೂ ಇತರರು ಇದ್ದರು.
ಲಕ್ಷ ದೀಪೋತ್ಸವ
ಕಾರ್ತೀಕ ಅಮಾವಾಸ್ಯೆ ಪ್ರಯುಕ್ತ ನಡೆದ ಲಕ್ಷ ದೀಪೋತ್ಸವಕ್ಕೆ ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಚಾಲನೆ ನೀಡಿದರು. ರಾಜ್ಯ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತರು ದೀಪಗಳನ್ನು ಹಚ್ಚಿ ಸಂಭ್ರಮಿಸಿದರು.