ನವದೆಹಲಿ (ಪಿಟಿಐ): ಹಲವು ಯೋಜನೆಗಳನ್ನು ತಡೆಹಿಡಿದ ದೂರುಗಳ ಹಿನ್ನೆಲೆಯಲ್ಲಿ ಪರಿಸರ ಸಚಿವ ಸ್ಥಾನಕ್ಕೆ ತಾವು ರಾಜೀನಾಮೆ ನೀಡಿರುವ ವದಂತಿಯನ್ನು ಕಾಂಗ್ರೆಸ್ ರಾಜ್ಯಸಭಾ ಸದಸ್ಯೆ ಜಯಂತಿ ನಟರಾಜನ್ ತಳ್ಳಿಹಾಕಿದ್ದಾರೆ.
ಶನಿವಾರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಗ್ಗೆ ಭಾನುವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘ತಾವು ಯಾವುದೇ ಯೋಜನೆ ತಡೆಹಿಡಿದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಬರುವ ಲೋಕಸಭಾ ಚುನಾವಣೆಗೆ ಪಕ್ಷದ ಪರ ಕೆಲಸ ಮಾಡಲು ತಾವು ಸ್ವಇಚ್ಛೆಯಿಂದಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಅಂಗೀಕರಿಸಲು ಪ್ರಧಾನಿಗೆ ಕೋರಿದ್ದಾಗಿ ಅವರು ತಿಳಿಸಿದರು.
ತಮ್ಮ ಕಾರ್ಯನಿರ್ವಹಣೆ ಕುರಿತು ಪ್ರಧಾನಿಯೇ ಪ್ರಶಂಸೆ ಮಾಡಿದ್ದಾರೆ ಎಂದ ಅವರು, ‘ಉತ್ತರಾಖಂಡದಂತಹ ದುರಂತವನ್ನು ತಪ್ಪಿಸಲು ಇನ್ನು ಮುಂದೆ ಅಭಿವೃದ್ಧಿ ಯೋಜನೆಗಳಿಗೆ ಅನುಮತಿ ನೀಡುವಾಗ, ಪರಿಸರ ಸಂರಕ್ಷಣೆಯನ್ನೂ ಗಮನದಲ್ಲಿಟ್ಟು ಎಚ್ಚರಿಕೆಯ ಹೆಜ್ಜೆ ಇಡಬೇಕು’ ಎಂದು ಹೇಳಿದರು.
ಸಚಿವರ ಅಚ್ಚರಿಯ ರಾಜೀನಾಮೆಗೆ ಪಕ್ಷದ ಕೆಲಸ ಕಾರಣವೇ ಅಥವಾ ಅವರ ಸಚಿವಾಲಯ ವಿವಿಧ ಯೋಜನೆಗಳಿಗೆ ಪರಿಸರ ಪ್ರಮಾಣಪತ್ರ ನೀಡದೆ ತಡೆಯೊಡ್ಡಿದ್ದರ ವಿರುದ್ಧ ಉದ್ಯಮ ವಲಯ ದೂರು ನೀಡಿರುವುದು ಕಾರಣವೇ ಎಂಬ ಪ್ರಶ್ನೆ ಎದ್ದಿದೆ.
ಈ ವದಂತಿಗೆ ಪೂರಕ ಎಂಬಂತೆ, ಎಫ್ಐಸಿಸಿ ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಉದ್ಯಮಿಗಳು ದೂರು ನೀಡಿದ್ದಾರೆ. ರಾಹುಲ್ ಸಹ ಯಾವುದೇ ನಿರ್ಧಾರ ಕೈಗೊಳ್ಳಬಹುದಾದ ಪರಿಸರ ಸಚಿವರು ಅಥವಾ ಮುಖ್ಯಮಂತ್ರಿಗಳು ನಿರಂಕುಶ ಆಡಳಿತದ ಮೂಲಕ ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾಗಿರುವುದನ್ನು ಟೀಕಿಸಿದ್ದರು.