ಮುಂಡಗೋಡ: ತಾಲ್ಲೂಕಿನಲ್ಲಿ ಬೆಳೆದಿರುವ ಕಬ್ಬನ್ನು ಕೂಡಲೇ ಕಟಾವು ಮಾಡಬೇಕೆಂದು ಒತ್ತಾಯಿಸಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸಿ ಕೆಲ ಕಾಲ ರಸ್ತೆ ತಡೆ ನಡೆಸಿದ ಘಟನೆ ಸೋಮವಾರ ನಡೆಯಿತು.
ಕಬ್ಬು ಕಟಾವು ಮಾಡಿಸದೇ ರೈತರೊಂದಿಗೆ ಚೆಲ್ಲಾಟ ಆಡುತ್ತಿರುವ ಸಕ್ಕರೆ ಕಾರ್ಖಾನೆ ಮಂಡಳಿಯ ಧೊರಣೆಯನ್ನು ಖಂಡಿಸಿದ ಪ್ರತಿಭಟನಾಕಾರರು ಶಿವಾಜಿ ಸರ್ಕಲ್ನಲ್ಲಿ ಕೆಲ ಕಾಲ ರಸ್ತೆ ನಡೆಸಿ ನಂತರ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕಳೆದ ಏಳೆಂಟು ವರ್ಷಗಳಿಂದ ತಾಲ್ಲೂಕಿನಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು ಹಳಿಯಾಳದ ಪ್ಯಾರಿ ಶುಗರ್ಸ್ ಕಂಪೆನಿಯವರು ರೈತರಿಗೆ ಕಬ್ಬು ಬೆಳೆಯಲು ಇನ್ನಿಲ್ಲದ ಪ್ರೋತ್ಸಾಹ ನೀಡಿ ಈಗ ಕಬ್ಬು ಕಟಾವು ಹಂತಕ್ಕೆ ಬಂದಿದ್ದರೂ ಸಹಿತ ಇನ್ನೂ ತನಕ ಕಟಾವು ಮಾಡಿಸುತ್ತಿಲ್ಲ. ಅಲ್ಲದೇ ಕಬ್ಬು ದಿನೇ ದಿನೇ ಒಣಗುತ್ತ ಸಾಗಿದ್ದು ಇದರಿಂದ ರೈತರಿಗೆ ನಷ್ಟವಾಗಲಿದೆ. ಕಾಡು ಪ್ರಾಣಿಗಳಿಂದ ಕಬ್ಬು ಬೆಳೆಗೆ ತೊಂದರೆಯಾಗುವ ಸಾಧ್ಯತೆಯಿದ್ದು ಕಬ್ಬಿನ ಬೆಳೆಯನ್ನೇ ನಂಬಿ ಜೀವನ ನಡೆಸುತ್ತಿರುವ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಕೂಡಲೇ ಕಬ್ಬನ್ನು ಕಟಾವು ಮಾಡಿಸಲು ಸಕ್ಕರೆ ಕಾರ್ಖಾನೆಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಕಬ್ಬು ಕಟಾವು ಕುರಿತು ದಿನಕ್ಕೊಂದು ನೆಪ ಹೇಳುತ್ತಿರುವ ಸಕ್ಕರೆ ಕಾರ್ಖಾನೆ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸುವಂತೆ ತಹಶೀಲ್ದಾರ್ ಅವರನ್ನು ರೈತರು ಒತ್ತಾಯಿಸಿದರು.
ತಹಶೀಲ್ದಾರರು ಕಾರ್ಖಾನೆ ಅಧಿಕಾರಿಗಳೊಂದಿಗೆ ದೂರವಾಣಿಯಲ್ಲಿ ಸಂಪರ್ಕಿಸಿ ರೈತರ ಸಮಸ್ಯೆಗಳನ್ನು ಹೇಳಿದಾಗ ಅಧಿಕಾರಿಗಳು ಮಂಗಳವಾರ ಬರುವುದಾಗಿ ತಿಳಿಸಿದರು. ರೈತ ಸಂಘದ ಶಂಬಣ್ಣ ಕೋಳೂರ, ಸಾತು ಬನ್ಸೋಡೆ, ಮುಕ್ತುಂಸಾಬ ತರ್ಲಗಟ್ಟಿ, ಲೋಹಿತ್ ಮಟ್ಟಿಮನಿ ಇನ್ನಿತರರು ಉಪಸ್ಥಿತರಿದ್ದರು.