ರಟ್ಟೀಹಳ್ಳಿ (ಹಾವೇರಿ ಜಿಲ್ಲೆ): ಸಮೀಪದ ಸತ್ತಿಗೀಹಳ್ಳಿ ಗ್ರಾಮದ ಶ್ರೀ ಬೂದೇಶ್ವರ ಮಠದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಶ್ರೀ ಮಹೇಶ್ವರ ಜಾತ್ರಾ ಮಹೋತ್ಸವ ನಡೆಯಿತು.
ಜಾತ್ರೆಯ ವಿಶೇಷವೆಂದರೆ ಈ ಜಾತ್ರೆಯಲ್ಲಿ ಕೇವಲ ಪುರುಷರು ಮಾತ್ರ ಭಾಗವಹಿಸಿದ್ದರು. ಇಂತಹ ಪದ್ಧತಿ ಅನೇಕ ದಶಕಗಳಿಂದ ನಡೆದುಕೊಂಡು ಬಂದಿದೆ.
ಮಂಗಳವಾರ ಬೆಳಿಗ್ಗೆ ಹಿರೇಮೊರಬ ಗ್ರಾಮದಿಂದ ಆಗಮಿಸಿದ್ದ ವಿವಿಧ ದೇವರುಗಳ ಪ್ರತಿಷ್ಠಾಪನೆಯೊಂದಿಗೆ ಮಹೇಶ್ವರನ ಉತ್ಸವ ಜರುಗಿತು.
ಕೆ.ಎಂ.ಬೂದಯ್ಯ ಸ್ವಾಮೀಜಿ ಮತ್ತು ಕೆ.ಎಂ.ವಿರುಪಾಕ್ಷಯ್ಯ ಅವರ ನೇತೃತ್ವದಲ್ಲಿ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ವಿಶೇಷ ಪ್ರಸಾದ ವಿತರಣೆ ನಡೆಯಿತು.
ಬುಧವಾರ ನಡೆಯುವ ಜಾತ್ರೆಯಲ್ಲಿ ಮಹಿಳೆಯರು ಸೇರಿದಂತೆ ಸುತ್ತಮುತ್ತಲ ಗ್ರಾಮದವರೆಲ್ಲರೂ ಭಾಗವಹಿಸುತ್ತಾರೆ.